ಮೋಸಗಾರ ಪನ್ನೀರ್ ಬಣ್ಣ ಬಯಲು : ಬೆಂಕಿಯುಗುಳಿದ ಶಶಿ
ಚೆನ್ನೈ, ಫೆಬ್ರವರಿ 13 : "ಮೋಸಗಾರ ಪನ್ನೀರ್ ಸೆಲ್ವಂ ಅವರ ನಿಜವಾದ ಬಣ್ಣವನ್ನು ಈಗ ನೋಡಬಹುದಾಗಿದೆ. ಎಐಎಡಿಎಂಕೆ ಪಕ್ಷವನ್ನು ಒಡೆಯುವ ಯಾವುದೇ ಹುನ್ನಾರವನ್ನು ಸಹಿಸಿಕೊಳ್ಳುವುದಿಲ್ಲ" ಎಂದಿರುವ ಶಶಿಕಲಾ ನಟರಾಜನ್ ಕನಲಿಕೆಂಡವಾಗಿದ್ದಾರೆ.
ಸೋಮವಾರ, ಫೆಬ್ರವರಿ 13ರಂದು ಪೋಯೆಸ್ ಗಾರ್ಡನ್ ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು, ಪನ್ನೀರ್ ಸೆಲ್ವಂ ಮತ್ತು ಅವರ ಹಿಂದೆ ಹೋಗಿರುವ ಶಾಸಕರ ವಿರುದ್ಧ ಕಿಡಿಕಾರಿದರು.[ಶಶಿಕಲಾಗೆ ಚಾನ್ಸ್! ಅಕಸ್ಮಾತ್ ಅಪರಾಧಿಯಾದರೂ ಅನರ್ಹರಾಗುವುದಿಲ್ಲ]
ಕಳೆದ 33 ವರ್ಷಗಳಲ್ಲಿ ಇಂಥ ಸಾವಿರಾರು ಪನ್ನೀರ್ ಸೆಲ್ವಂರನ್ನು ನಾವಿಬ್ಬರು (ಜಯಲಲಿತಾ ಮತ್ತು ನಾನು) ನೋಡಿದ್ದೇವೆ. ಇಂಥ ಆಟಗಳಿಗೆ ಬೆದರುವವಳು ನಾನಲ್ಲ. ಪನ್ನೀರ್ ಅವರು ಯಾವುದೇ ಕಾರಣಕ್ಕೆ ಯಶಸ್ವಿಯಾಗುವುದಿಲ್ಲ ಎಂದು ಅವರು ನುಡಿದರು.
ಅಮ್ಮ ತೀರಿಹೋದ ನಂತರ ಪನ್ನೀರ್ ಸೆಲ್ವಂ ಅವರೇ ನಾಯಕತ್ವ ವಹಿಸಬೇಕೆಂದು ನನ್ನನ್ನು ಕೋರಿದ್ದರು. ಆಗ ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಪನ್ನೀರ್ ಅವರೇ ಜವಾಬ್ದಾರಿಯನ್ನು ನಿಭಾಯಿಸಬೇಕಾಯಿತು ಎಂದು ಅಂದು ನಡೆದಿದ್ದೇನೆಂದು ವಿವರಿಸಿದರು.[ಶಶಿಕಲಾ ಬತ್ತಳಿಕೆಯಲ್ಲಿ ಇನ್ನೂ ಏನೇನು ಬಾಣಗಳಿವೆ?]
ನೀವೆಲ್ಲರೂ ಸತ್ಯವೇನೆಂದು ತಿಳಿಯಲೇಬೇಕು. ಈಗಲ್ಲ, ಅಮ್ಮ ಅಸುನೀಗಿದಾಗಲೇ ಪಕ್ಷವನ್ನು ಇಬ್ಭಾಗ ಮಾಡಲು ಸಂಚು ರೂಪಿಸಿದ್ದು ನನ್ನ ಅರಿವಿಗೆ ಬಂದಿತ್ತು. ಆಗ ನಾನು ಪಕ್ಷದ ಭವಿಷ್ಯದ ಬಗ್ಗೆ ನಾನು ಚಿಂತಾಕ್ರಾಂತಳಾಗಿದ್ದೆ, ವಿವರಿಸಲಾರದ ನೋವಿನಲ್ಲಿ ಇದ್ದೆ ಎಂದು ಶಶಿಕಲಾ ಅವರು ಗದ್ಗಿತರಾದರು.
ಪಕ್ಷದ ಶಾಸಕರನ್ನು ಗೋಲ್ಡನ್ ಬೇ ರೆಸಾರ್ಟಲ್ಲಿ ಕೂಡಿಟ್ಟಿರುವ ಶಶಿಕಲಾ ಕಾರ್ಯಕರ್ತರನ್ನು ಕೂಡ ಭಾವನಾತ್ಮಕವಾಗಿ ಮಾತನಾಡಿ ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಪನ್ನೀರ್ ಅವರ ಬಳಿ ಹೆಚ್ಚಿನ ಬೆಂಬಲ ಇಲ್ಲದಿದ್ದರೂ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ದೃಷ್ಟಿಯಿಂದ ತೂಕ ಪನ್ನೀರ್ ಪರವೇ ಹೆಚ್ಚು ವಾಲುವಂತಿದೆ. [ವಿದ್ಯಾಸಾಗರ್ ಮತ್ತು ಶಶಿಕಲಾ ನಡುವೆ ನಡೆದಿದ್ದಾದರೂ ಏನು?]
ಪನ್ನೀರ್ ಸೆಲ್ವಂ ಅವರು ಏನೇ ತಂತ್ರಗಾರಿಕೆ ಮಾಡಿದರೂ ಶಶಿಕಲಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಮ್ಮ ಬಿಟ್ಟುಹೋದ ರಾಜಕಾರಣವನ್ನು ಅವರು ಮುಂದುವರಿಸಿಕೊಂಡು ಹೋಗುತ್ತಾರೆ ಎಂದು ಎಐಎಡಿಎಂಕೆಯ ಮಂಗಳಮುಖಿ ಅಪ್ಸರಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.