ಪುತ್ರಿ ಪಡೆದ ಸಾಲಕ್ಕೆ ರಜನಿಕಾಂತ್ ಪತ್ನಿ ಜಮೀನು ಹರಾಜು
ಚೆನ್ನೈ, ಡಿ. 27: ಭಾರತದ ಕೆಲವೇ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ರಜನಿಕಾಂತ್ಗೆ ಪಡೆದ ಸಾಲ ವಾಪಸ್ ಮಾಡದಿದ್ದುದಕ್ಕೆ ಬ್ಯಾಂಕ್ನಿಂದ ನೋಟಿಸ್ ಸ್ವೀಕರಿಸುವ ಪರಿಸ್ಥಿತಿ ಬಂದಿದೆ..!
ಆದರೆ, ಈ ಪರಿಸ್ಥಿತಿಗೆ ಕಾರಣ ರಜನಿಕಾಂತ್ ಅಲ್ಲ, ಪುತ್ರಿ ಸೌಂದರ್ಯಾ. ಅವರ ಮಾಲೀಕತ್ವದ ಮೀಡಿಯಾ ಒನ್ ಗ್ಲೋಬಲ್ ಎಂಟರ್ಟೇನ್ಮೆಂಟ್ ಸಂಸ್ಥೆ ಪಡೆದ ಕೋಟ್ಯಂತರ ರೂ. ಸಾಲಕ್ಕೆ ರಜನಿಕಾಂತ್ ಪತ್ನಿ ಲತಾ ಅವರು ಖಾತರಿದಾರರಾಗಿದ್ದರು. ಆದರೆ, ನಿಗದಿತ ಅವಧಿಯಲ್ಲಿ ಸೌಂದರ್ಯಾ ಅವರು ಸಾಲ ಮರುಪಾವತಿ ಮಾಡಿರಲಿಲ್ಲ. ಈಗ ಬಡ್ಡಿ ಸೇರಿ ಸಾಲದ ಮೊತ್ತ 22.21 ಕೋಟಿ ರೂ. ಆಗಿದೆ. ಈ ಕುರಿತು ನೋಟಿಸ್ ನೀಡಿದ್ದರೂ ಸ್ಪಂದಿಸಿರಲಿಲ್ಲ. ಸಾಲದ ಮರುಪಾವತಿಯನ್ನೂ ಮಾಡಿರಲಿಲ್ಲ. [ರಜನಿಕಾಂತ್ ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ]
ಆದ್ದರಿಂದ ಸಾಲದ ಜಾಮೀನಿಗೆ ಸಹಿ ಹಾಕಿರುವ ಲತಾ ರಜನಿಕಾಂತ್ ಅವರಿಗೆ ಸೇರಿದ ಚೆನ್ನೈನಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕಾಂಚೀಪುರಂ ಜಿಲ್ಲೆಯಲ್ಲಿರುವ 1.5 ಎಕರೆ ಜಮೀನನ್ನು ಹರಾಜು ಹಾಕುವುದಾಗಿ Exim Bank (Export Import Bank of India) ಸ್ಥಳೀಯ ದಿನ ಪತ್ರಿಕೆಯೊಂದರಲ್ಲಿ 'ಹರಾಜು ಜಾಹೀರಾತು' ನೀಡಿದೆ. ಈ ಆಸ್ತಿಯನ್ನು ಯಾರೂ ಖರೀದಿಸಬಾರದು ಎಂದು ಸೂಚಿಸಲಾಗಿದೆ. ಜೊತೆಗೆ ರಜನಿಕಾಂತ್ ಅವರಿಗೂ ನೋಟಿಸ್ ಜಾರಿ ಮಾಡಿದೆ. [ಲಿಂಗಾ ವಿರುದ್ಧದ ಕೇಸ್ ರದ್ದು]
ಬ್ಯಾಂಕ್ಗೆ ಸಾಲದ ಮೊತ್ತ 17-7-2014ರಂದೇ ಪಾವತಿಯಾಗಬೇಕಿತ್ತು. ಒಂದು ತಿಂಗಳ ನಂತರ ಅಂದರೆ 17-8-2014ರಂದು ಬ್ಯಾಂಕ್ 60 ದಿನಗಳ ವಾಯಿದೆಯ ನೋಟಿಸ್ ನೀಡಿ ಅಸಲು ಹಾಗೂ ಬಡ್ಡಿ ತೀರಿಸಬೇಕೆಂದು ಬ್ಯಾಂಕ್ನಿಂದ ನೋಟಿಸ್ ನೀಡಲಾಗಿತ್ತು. ಈ ನಂತರವೂ ಸಾಲಗಾರ ಸಂಸ್ಥೆ ಹಾಗೂ ಜಾಮೀನಿಗೆ ಸಹಿ ಹಾಕಿದ್ದ ಲತಾ ರಜನಿಕಾಂತ್ ಅವರಿಂದ ಯಾವುದೇ ಬಾಬ್ತು ಜಮಾ ಆಗಿರಲಿಲ್ಲ.
ಬ್ಯಾಂಕ್ ನಿಯಮದ ಪ್ರಕಾರ ನೋಟಿಸ್ ಗಡುವು ತೀರಿದ ಮೇಲೂ ಬ್ಯಾಂಕ್ಗೆ ಬರಬೇಕಾಗಿರುವ ಮೊತ್ತ ಪಾವತಿಸದಿದ್ದಲ್ಲಿ ರಜನಿಕಾಂತ್ ಅವರ ಪತ್ನಿಗೆ ಸೇರಿರುವ ಆಸ್ತಿಯನ್ನು ಹರಾಜು ಹಾಕುವ ಸಂಪೂರ್ಣ ಅಧಿಕಾರ ಬ್ಯಾಂಕ್ಗೆ ಇದೆ ನೋಟಿಸ್ನಲ್ಲಿ ತಿಳಿಸಲಾಗಿದೆ. [ರಜನಿಕಾಂತ್ ಗೆ ಹೈಕೋರ್ಟ್ ನೋಟಿಸ್]
ರಜನಿಕಾಂತ್ ಅಭಿನಯದ ಕೊಚಡಯಾನ್ ಸೇರಿದಂತೆ ಹಲವು ಚಿತ್ರಗಳನ್ನು ಮೀಡಿಯಾ ಒನ್ ಗ್ಲೋಬಲ್ ಎಂಟರ್ಟೇನ್ಮೆಂಟ್ ಸಂಸ್ಥೆ ನಿರ್ಮಿಸಿದೆ. ಕೊಚಡಯಾನ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿತ್ತು.