ಹತ್ಯೆಯಾದ ಇನ್ಫಿ ಸ್ವಾತಿಗೆ ಮತ್ತೊಬ್ಬ ಕಪಾಳಮೋಕ್ಷ ಮಾಡಿದ್ದ!
ಚೆನ್ನೈ, ಜುಲೈ 01 : ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಜೂನ್ 24ರಂದು ಭೀಕರವಾಗಿ ಹತ್ಯೆಯಾದ ಇನ್ಫೋಸಿಸ್ ಉದ್ಯೋಗಿ ಎಸ್ ಸ್ವಾತಿ ಪ್ರಕರಣ ದಿನದಿಂದ ದಿನಕ್ಕೆ ನಾನಾ ಮಾಹಿತಿಗಳನ್ನು ಹೊರಹಾಕುತ್ತಿದೆ. ಸ್ವಾತಿಯನ್ನು ಹತ್ಯೆ ಮಾಡಿದ ವ್ಯಕ್ತಿ ಕೆಲ ದಿನಗಳ ಹಿಂದೆ ಹಿಂಬಾಲಿಸಿಕೊಂಡು ಬಂದಿದ್ದ ಎಂಬುದು ಒಂದಾದರೆ, ಮತ್ತೊಂದು ವಿಷಯ ಈಗ ಬೆಳಕಿಗೆ ಬಂದಿದೆ.
ಅದೇನೆಂದರೆ, ಆಕೆ ಹತ್ಯೆಯಾಗುವ ಎರಡು ವಾರಗಳ ಹಿಂದೆ ಅದೇ ಪ್ಲಾಟ್ ಫಾರಂನಲ್ಲಿ ಬೇರೆ ವ್ಯಕ್ತಿಯೊಬ್ಬ ಸ್ವಾತಿಯ ಮೇಲೆ ಕಪಾಳಮೋಕ್ಷ ಮಾಡಿದ್ದ. ಈ ಹಲ್ಲೆಗೆ ಸಾಕ್ಷಿಯಾಗಿದ್ದ ಡಿ ತಮಿಳರಸನ್ ಎಂಬ ಯುವಕ ಈ ಸಂಗತಿಯನ್ನು ತಿಳಿಸಿದ್ದಾರೆ. ಈ ಘಟನೆ ಜೂನ್ 6 ಅಥವಾ 7ರಂದು ಸಂಭವಿಸಿರಬಹುದು ಎಂದಿದ್ದಾರೆ.
ವೃತ್ತಿಯಿಂದ ಶಿಕ್ಷಕನಾಗಿರುವ ತಮಿಳರಸನ್ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ, ಎರಡು ವಾರಗಳ ಹಿಂದೆ ಹಲ್ಲೆ ಮಾಡಿದ್ದ ವ್ಯಕ್ತಿ ಕೂಡ, ಹತ್ಯೆ ಮಾಡಿದ ನೀಲಿ ಅಂಗಿಯ ವ್ಯಕ್ತಿಯಂತೆಯೇ ಕಪ್ಪು ಬ್ಯಾಗನ್ನು ಬೆನ್ನಿಗೇರಿಸಿಕೊಂಡಿದ್ದ ಎಂದು ಮಾಹಿತಿ ನೀಡಿದ್ದಾರೆ. [ಗೆಳತಿ ಬಿಚ್ಚಿಟ್ಟ ಆಘಾತಕಾರಿ ಮಾಹಿತಿ]
"ಆ ವ್ಯಕ್ತಿ ಸ್ವಾತಿಗೆ ಐದಾರು ಬಾರಿ ಕಪಾಳಮೋಕ್ಷ ಮಾಡಿರಬಹುದು. ಆಕೆ ಕುಸಿದುಬಿದ್ದಳೇ ವಿನಃ ಪ್ರತಿರೋಧ ತೋರಿಸಲೇ ಇಲ್ಲ. ಈ ಬಗ್ಗೆ ಅಲ್ಲಿದ್ದವರು ಹಲವರು ವಿಚಾರಿಸಿದರೂ ಆಕೆ ಪ್ರತಿಕ್ರಿಯಿಸಲಿಲ್ಲ. ನಂತರ ಕೈಯಿಂದ ಜಾರಿಬಿದ್ದ ಮೊಬೈಲನ್ನು ಎತ್ತಿಕೊಂಡು ಕಣ್ಣೀರುಗರೆಯುತ್ತಲೇ ಮುಂದಿನ ರೈಲನ್ನು ಹತ್ತಿ ಹೋದಳು."
"ನನಗೆ ನೆನಪಿರುವ ಹಾಗೆ ಆತ ಮೂವತ್ತರ ಆಸುಪಾಸಿನಲ್ಲಿರುವ ಯುವಕ. ಗೋಧಿ ಬಣ್ಣದ ಯುವಕ ನೋಡಲೂ ಚೆನ್ನಾಗಿದ್ದ. ಸ್ವಾತಿಯ ಹತ್ಯೆಯಾದ ನಂತರ ಸಿಸಿಟಿವಿಯಲ್ಲಿ ಬಹಿರಂಗವಾಗಿರುವ ಯವಕನಂತಿರಲಿಲ್ಲ" ಎಂದು ತಮಿಳರಸನ್ ದಿ ನ್ಯೂಸ್ ಮಿನಿಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. [ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ]
"ಹತ್ಯೆಯಾದ ದಿನವೂ ನಾನು ಅಲ್ಲಿಯೇ ತುಸು ದೂರದಲ್ಲಿದ್ದೆ. ಆಕೆಯ ಚೀರಾಟ ಕೇಳಿ ಹತ್ತಿರ ಬರುವಷ್ಟರಲ್ಲಿ ಕೊಲೆಗಾರ ಪರಾರಿಯಾಗಿದ್ದ. ಇನ್ನೊಬ್ಬ ಹತ್ಯೆ ಮಾಡಿದವನನ್ನು ಬೆನ್ನತ್ತಲು ಪ್ರಯತ್ನಿಸಿದರೂ ಸಿಗಲಿಲ್ಲ. ಆಕೆ ಕೆಲ ಕ್ಷಣಗಳಲ್ಲಿಯೇ ಪ್ರಾಣ ನೀಗಿದಳು. ಕೊಲೆ ಮಾಡಿದವ ಪೊಲೀಸರಿಗೆ ಶರಣಾಗಬಹುದೆಂದು ನಾವು ಮುಂದಿನ ರೈಲು ಹಿಡಿದು ಜಾಗ ಖಾಲಿ ಮಾಡಿದೆವು" ಎಂದಿದ್ದಾರೆ ತಮಿಳರಸನ್.
ಸಿಸಿಟಿವಿಯಲ್ಲಿ ಕಂಡಿರುವ ವ್ಯಕ್ತಿಯನ್ನೇ ಹತ್ಯೆ ಮಾಡಿದವ ಹೋಲುತ್ತಾನೆ ಎಂದು ಪೊಲೀಸರಿಗೆ ತಮಿಳರಸನ್ ಹೇಳಿಕೆ ನೀಡಿದ್ದಾರೆ. ಎರಡನೇ ನಂಬರ್ ಪ್ಲಾಟ್ಫಾರಂನಿಂದ ಜಿಗಿದು ಹತ್ಯೆಗಾರ ಪರಾರಿಯಾಗಿದ್ದಾನೆ. ಒಂದಿಬ್ಬರು ಆತನ ಮೇಲೆ ಕಲ್ಲು ಎಸೆದಿದ್ದಾರೆ. ಹತ್ಯೆಯಾದ ಸ್ವಾತಿಗೆ ನ್ಯಾಯ ಸಿಗಬೇಕೆಂದು ತಮಿಳರಸನ್ ಆಶಯ ವ್ಯಕ್ತಪಡಿಸುತ್ತಾರೆ. [ತಮಿಳುನಾಡಿನಲ್ಲಿ ಕನ್ನಡದಲ್ಲಿ ಮಾತಾಡಿದ್ರೆ 1,000 ರು ದಂಡ!]