ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಔಟ್
ಚೆನ್ನೈನಲ್ಲಿ ಮಂಗಳವಾರ ರಾತ್ರಿ (ಏಪ್ರಿಲ್ 18) ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಸರ್ಕಾರದ ಆರೋಗ್ಯ ಸಚಿವ ಜಯಕುಮಾರ್,ದಿನಕರನ್ ಹಾಗೂ ಅವರ ಕುಟುಂಬವನ್ನು ಹೊರಗಿಡುವ ಬಗ್ಗೆ ಮಾಹಿತಿ ನೀಡಿದರು.
ಚೆನ್ನೈ, ಏಪ್ರಿಲ್ 18: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಪಕ್ಷದೊಳಗಿನ ರಾಜಕೀಯ ವಿದ್ಯಮಾನಗಳಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದ ಅವರ ಗೆಳತಿ ಶಶಿಕಲಾ ಆಪ್ತರಾದ ಟಿಟಿವಿ ದಿನಕರನ್ ಹಾಗೂ ಅವರ ಕುಟುಂಬವನ್ನು ಪಕ್ಷದಿಂದ ಹೊರಹಾಕಲಾಗಿದೆ.
ಇತ್ತೀಚೆಗಷ್ಟೇ, ಟಿಟಿವಿ ದಿನಕರನ್ ಅವರನ್ನು ಶಶಿಕಲಾ ಅವರು, ಎಐಎಡಿಎಂಕೆ ಪಕ್ಷದ ಉಪ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು.
ಚೆನ್ನೈನಲ್ಲಿ ಮಂಗಳವಾರ ರಾತ್ರಿ (ಏಪ್ರಿಲ್ 18) ಸುದ್ದಿಗಾರರೊಂದಿಗೆ ಮಾತನಾಡಿದ ತಮಿಳುನಾಡು ಸರ್ಕಾರದ ಆರೋಗ್ಯ ಸಚಿವ ಜಯಕುಮಾರ್ ಈ ವಿಚಾರ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಯಕುಮಾರ್ ತಿಳಿಸಿದ್ದಾರೆ.
ಏ. 12ರಂದು ನಡೆಯಬೇಕಿದ್ದ ಚೆನ್ನೈನ ಆರ್.ಕೆ. ನಗರ ಉಪ ಚುನಾವಣೆಯಲ್ಲಿ (ಈ ಕ್ಷೇತ್ರವು ಜಯಲಲಿತಾ ನಿಧನದಿಂದಾಗಿ ತೆರವಾಗಿದೆ) ಎಐಎಡಿಎಂಕೆ ಪಕ್ಷದ ಲಾಂಛನವಾದ ಎರಡು ಎಲೆಗಳ ಚಿಹ್ನೆಯನ್ನು ತಮ್ಮ ಬಣದೊಂದಿಗೇ ಉಳಿಸಿಕೊಳ್ಳಲು (ದಿನಕರನ್ ಶಶಿಕಲಾ ಬಣಕ್ಕೆ ಸೇರಿದವರು) ದಿನಕರನ್ ಅವರು ಮದ್ಯವರ್ತಿಯ ಮೂಲಕ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿರುವ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ.
''ಪಕ್ಷದ ಹಿತ ಮುಖ್ಯ. ಪಕ್ಷವನ್ನು ಯಾರೊಬ್ಬರ ಕುಟುಂಬಕ್ಕೆ ನಾವು ಒಪ್ಪಿಸುವುದಿಲ್ಲ'' ಎಂದು ತಿಳಿಸಿದ ಅವರು, ಪಕ್ಷದಲ್ಲಿ ಒಡಕನ್ನು ತರದಿರಲು ದಿನಕರನ್ ಅವರನ್ನು ಪಕ್ಷದಿಂದ ದೂರ ಇರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇತ್ತೀಚೆಗೆ, ಪಕ್ಷವು ಎರಡು ಬಣಗಳಾಗಿ (ಪನ್ನೀರ್ ಸೆಲ್ವಂ ಬಣ, ಶಶಿಕಲಾ ಬಣ) ಒಡೆದು ಹೋಗಿರುವುದನ್ನು ಸರಿಪಡಿಸಿ, ಎರಡೂ ಬಣಗಳನ್ನು ಒಗ್ಗೂಡಿಸುವ ಪ್ರಯತ್ನಗಳು ಸಾಗಿವೆ.
ಈ ಹಿನ್ನೆಲೆಯಲ್ಲಿ ಮಂಗಳವಾರ (ಏ. 18) ಪ್ರತಿಕ್ರಿಯೆ ನೀಡಿದ್ದ ಪನ್ನೀರ್ ಸೆಲ್ವಂ, ಪಕ್ಷದಲ್ಲಿ ಶಶಿಕಲಾ ಹಾಗೂ ಅವರ ಆಪ್ತರು ಇಲ್ಲದಿದ್ದರೆ ಮಾತ್ರ ಸಂಧಾನ ಸಭೆ ಸಾಧ್ಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.
ಅವರ ಹೇಳಿಕೆಯ ಬೆನ್ನಲ್ಲೇ ದಿನಕರನ್ ಅವರನ್ನು ಪಕ್ಷದಿಂದ ಹೊರಹಾಕಿರುವುದು ಕುತೂಹಲ ಕೆರಳಿಸಿದೆ.