ಶಶಿಕಲಾ, ದಿನಕರನ್ ಉಚ್ಛಾಟನೆಗೆ ಎಐಎಡಿಂಕೆ ನಿರ್ಧಾರ; ಪನ್ನೀರ್, ಪಳನಿ ಬಣ ವಿಲೀನ?
ಎಐಎಡಿಎಂಕೆಯ ಶಶಿಕಲಾ, ಪನ್ನೀರ್ ಸೆಲ್ವಂ ಬಣಗಳ ವಿಲೀನ. ಕೆಲ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ.
ಚೆನ್ನೈ, ಆಗಸ್ಟ್ 10: ಎರಡು ಹೋಳಾಗಿದ್ದ ಎಐಎಡಿಎಂಕೆ ಪಕ್ಷವು ಒಂದಾಗಿವೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದ ಜಯಲಲಿತಾ ಆಪ್ತ ನಾಯಕ ಪನ್ನೀರ್ ಸೆಲ್ವಂ ಅವರ ಬಣ ಹಾಗೂ ಮುಖ್ಯಮಂತ್ರಿ ಪಳನಿಸ್ವಾಮಿ (ಶಶಿಕಲಾ ಬಣ) ಅವರ ನಡುವೆ ಕೆಲ ದಿನಗಳಿಂದ ನಡೆಯುತ್ತಿದ್ದ ಸಂಧಾನ ಸಭೆ ಯಶಸ್ವಿಯಾಗಿದ್ದು, ಎರಡೂ ಬಣಗಳು ವಿಲೀನಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೇಳಲಾಗಿದೆ.
ಎಐಎಡಿಎಂಕೆ ನಾಯಕಿ ಶಶಿಕಲಾಗೆ ನಿರಾಳ ತಂದ ಸುಪ್ರೀಂ ಕೋರ್ಟ್ ಆದೇಶ
ಎರಡೂ ಬಣಗಳ ನಡುವೆ ಆಗಿರುವ ಹೊಸ ಒಪ್ಪಂದದಂತೆ, ಇತ್ತೀಚೆಗೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಆಪ್ತ ದಿನಕರನ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಲಾಗಿದೆ.
ಇದರ ಜತೆಯಲ್ಲೇ, ಜಯಲಲಿತಾ ಅವರ ಸ್ನೇಹಿತೆಯಾಗಿ ಅವರ ನಿಧನದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಿ, ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ, ಪನ್ನೀರ್ ಸೆಲ್ವಂ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತಂದು ಕೂರಿಸಲಾಗುವುದು ಎಂದು ಹೇಳಲಾಗಿದೆ.
ಪನ್ನೀರ್ ಬಣದ ಆಣತಿಯಂತೆ, ಜಯಲಲಿತಾ ನಿಧನದ ನಂತರ, ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿದ್ದು, ಅವರಿಂದ ನೇಮಕಗೊಂಡಿದ್ದ ಪಕ್ಷದ ಇತರ ಪದಾಧಿಕಾರಿಗಳನ್ನೂ ಆ ಸ್ಥಾನಗಳಿಂದ ತೆರವುಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
2011ರಲ್ಲಿ ಜಯಲಲಿತಾ ಅವರು ದಿನಕರನ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಈ ವರ್ಷ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ಜಯಲಲಿತಾ ಆಪ್ತೆ ಶಶಿಕಲಾ ಅವರು, ದಿನಕರನ್ ಅವರಿಗೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆ ಕೊಟ್ಟಿದ್ದರು. ಇದು ಪಕ್ಷದ ನಿಯಮಗಳ ಉಲ್ಲಂಘನೆ ಎಂದು ಹೇಳಲಾಗಿದೆ.
ಐದು ವರ್ಷಗಳವರೆಗೆ ಪಕ್ಷದಿಂದ ಹೊರಗುಳಿದಿದ್ದವರಿಗೆ ಏಕಾಏಕಿ ಪಕ್ಷದ ಉನ್ನತ ಸ್ಥಾನ ನೀಡಲು ಸಾಧ್ಯವಿಲ್ಲವೆಂಬ ನಿಯಮವಿರುವುದರಿಂದ ಅವರನ್ನು ಕೆಳಗಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಲ ವರದಿಗಳು ಹೇಳಿವೆ.