ಶಶಿಕಲಾ ಮುಖ್ಯಮಂತ್ರಿಯಾಗಬೇಕಂತೆ! ಅಯ್ಯೋ ಪಾಪ ಪನ್ನೀರ್!
ಹರಕೆಯ ಕುರಿ ಮಿಸ್ಟರ್ ಓ ಪನ್ನೀರ್ ಸೆಲ್ವಂ! ಬಡವಾಯಿ! ಹಿಂದೆ ಎರಡು ಬಾರಿ ಪನ್ನೀರ್ ಅವರು ಜಯಲಲಿತಾಗಾಗಿ ಮುಖ್ಯಮಂತ್ರಿ ಪದವಿಯನ್ನು ಸಂತೋಷದಿಂದಲೇ ತ್ಯಜಿಸಿದ್ದರು. ಈ ಬಾರಿಯೂ ಪದವಿ ತ್ಯಜಿಸ್ತಾರಾ?
ಚೆನ್ನೈ, ಜನವರಿ 02 : ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಿನವೂ ಕಳೆದಿಲ್ಲ ಅಷ್ಟರಲ್ಲೇ, ಓ ಪನ್ನೀರ್ ಸೆಲ್ವಂ ಅವರನ್ನು ಪಕ್ಕಕ್ಕೆ ಸರಿಸಿ ನೀವು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ ಎಂದು ಒತ್ತಡ ಹೇರಲಾಗುತ್ತಿದೆಯಂತೆ!
ಇಂಥ ಕ್ಷಿಪ್ರ, ಊಹಿಸಲೂ ಅಸಾಧ್ಯವಾದ ರಾಜಕೀಯ ಬೆಳವಣಿಗೆಗಳು ಸಾಧ್ಯವಾಗುವುದು ತಮಿಳುನಾಡಿನಲ್ಲಿ ಮಾತ್ರ. ಹಿಂದೆ ಜಯಲಲಿತಾ ಅವರು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಆಗುತ್ತಿದ್ದವು. ಈಗ ಶಶಿಕಲಾ ನಟರಾಜನ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಶುರುವಾಗಿವೆ.
ಎರಡೂ ಪ್ರಕರಣಗಳಲ್ಲಿ ಹರಕೆಯ ಕುರಿ ಮಿಸ್ಟರ್ ಓ ಪನ್ನೀರ್ ಸೆಲ್ವಂ! ಬಡವಾಯಿ! ಹಿಂದೆ ಎರಡು ಬಾರಿ ಪನ್ನೀರ್ ಅವರು ಜಯಲಲಿತಾಗಾಗಿ ಮುಖ್ಯಮಂತ್ರಿ ಪದವಿಯನ್ನು ಸಂತೋಷದಿಂದಲೇ ತ್ಯಜಿಸಿದ್ದರು.[ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!]
ಪಕ್ಷವನ್ನು ಮುನ್ನಡೆಸುವುದು ಮಾತ್ರವಲ್ಲ ಸರಕಾರವನ್ನೂ ನೀವೇ ಮುನ್ನಡೆಸಬೇಕು ಎಂದು ಎಐಎಡಿಎಂಕೆ ಪಕ್ಷದ ಪ್ರಚಾರ ಕಾರ್ಯದರ್ಶಿ ಮತ್ತು ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಆಗಿರುವ ತಂಬಿದುರೈ ಅವರು ತಮ್ಮ ಲೆಟರ್ ಹೆಡ್ ನಲ್ಲಿ ಇಷ್ಟುದ್ದ ಪತ್ರ ಬರೆದಿದ್ದಾರೆ.
"ಗೌರವಾನ್ವಿತ 'ಅಮ್ಮ'ನ ಅಣತಿಯಂತೆ ಪಕ್ಷದ ಮತ್ತು ಸರಕಾರದ ಉಳಿದ ಕಾರ್ಯಗಳನ್ನು ಪೂರೈಸಲು ಸಾಧ್ಯವಾಗುವುದು, ಪಕ್ಷದ ನಾಯಕತ್ವ ಮತ್ತು ಸರಕಾರದ ಮುಂದಾಳತ್ವ ಒಬ್ಬರ ಕೈಯಲ್ಲಿ ಇದ್ದರೆ ಮಾತ್ರ" ಎಂದು ತಂಬಿದುರೈ ಪತ್ರದಲ್ಲಿ ಬರೆದಿದ್ದಾರೆ. [ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನಮ್ಮ]
ನಾಲ್ಕು ಪುಟಗಳಷ್ಟು ಇರುವ ಪತ್ರದಲ್ಲಿ, ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಶಶಿಕಲಾ ಅವರನ್ನು ಹಾಡಿ ಹೊಗಳಿರುವ ತಂಬಿದುರೈ ಅವರು, ಒಬ್ಬರೇ ವ್ಯಕ್ತಿ ಪಕ್ಷ ಮತ್ತು ಸರಕಾರದ ಚುಕ್ಕಾಣಿ ಹಿಡಿಯದಿದ್ದಾಗ ಎಷ್ಟೊಂದು ಸರಕಾರಗಳು ಸಂಕಷ್ಟ ಅನುಭವಿಸಿರುವುದು ನಮ್ಮ ಕಣ್ಣ ಮುಂದಿದೆ ಎಂದಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಪ್ರಸ್ತುತ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿರುವ ಓ ಪನ್ನೀರ್ ಸೆಲ್ವಂ ಅವರ ಭವಿಷ್ಯದ ಬಗ್ಗೆ ಒಂದೇ ಒಂದು ಮಾತನ್ನೂ ತಂಬಿದುರೈ ಬರೆದಿಲ್ಲ. ಶಶಿಕಲಾ ಅವರು ಪ್ರಧಾನ ಕಾರ್ಯದರ್ಶಿಯಾದ ಮೇಲೆ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಎಂದು ಸಂಬೋಧಿಸದಿರುವಂತೆ ಎಚ್ಚರಿಕೆ ವಹಿಸಲಾಗುತ್ತಿದೆ. [ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ]