AIADMK ವಿಲೀನ: ಪಳನಿಸ್ವಾಮಿ ಸಿಎಂ, ಪನ್ನೀರ್ ಸೆಲ್ವಂಗೆ ಪಕ್ಷದ ಹೊಣೆ
ಮೂಲಗಳ ಪ್ರಕಾರ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಮುಂದುವರಿಯಲಿದ್ದಾರೆ. ಒ ಪನ್ನಿರ್ ಸೆಲ್ವಂ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ.
ಚೆನ್ನೈ, ಏಪ್ರಿಲ್ 21: ಒ ಪನ್ನೀರ್ ಸೆಲ್ವಂ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಬಣಗಳು ಕೊನೆಗೂ ಒಮ್ಮತದ ತೀರ್ಮಾನಕ್ಕೆ ಬಂದಿವೆ. ಎಐಎಡಿಎಂಕೆ ಪಕ್ಷಗಳ ವಿಲೀನ ಅಂತಿಮ ಹಂತಕ್ಕೆ ಬಂದಿದ್ದು ಅಧಿಕೃತ ಘೋಷಣೆ ಇಷ್ಟರಲ್ಲೇ ಹೊರಬೀಳುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ ಮುಖ್ಯಮಂತ್ರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಮುಂದುವರಿಯಲಿದ್ದಾರೆ. ಒ ಪನ್ನಿರ್ ಸೆಲ್ವಂ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ.[ಮಹಾಭಾರತ ವಿವಾದ: ನಟ ಕಮಲ್ ಹಾಸನ್ಗೆ ಸಮನ್ಸ್]
ಈ ಹಿಂದೆ ವರದಿಯಾದಂತೆ ಪನ್ನೀರ್ ಸೆಲ್ವಂ ಬಣ ಸರಕಾರಕ್ಕಿಂತ ಪಕ್ಷದ ಮೇಲೆ ಹಿಡಿತ ಹೊಂದಲು ಮನಸ್ಸು ಮಾಡಿತ್ತು. ಇದೀಗ ಅದೇ ರೀತಿಯಲ್ಲಿ ವಿಲೀನ ಪ್ರಕ್ರಿಯೆ ನಡೆದಿದೆ. ಇದರ ಜತೆಗೆ ಪನ್ನೀರ್ ಸೆಲ್ವಂ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಅವರ ಬಣದಿಂದ ಪಾಂಡಿರಾಜನ್ ಕೂಡಾ ಮಂತ್ರಿಯಾಗಲಿದ್ದಾರೆ. ಈ ಹಿಂದೆ ಪಳನಿಸ್ವಾಮಿ ಬಣ ಕ್ಯಾಬಿನೆಟ್ ನಲ್ಲಿ ಪನ್ನೀರ್ ಸೆಲ್ವಂ ಬಣಕ್ಕೆ ಯಾವುದೇ ಹುದ್ದೆ ನೀಡಲು ಹಿಂದೇಟು ಹಾಕಿತ್ತು.
ಈ ಹಿಂದೆ ಶಶಿಕಲಾ ಮತ್ತು ದಿನಕರನ್ ರನ್ನು ಉಚ್ಛಾಟನೆ ಮಾಡಿದ ನಂತರ ವಿಲೀನ ಪ್ರಕ್ರಿಯೆಗಳು ಚುರುಕು ಪಡೆದುಕೊಂಡಿದ್ದವು. ಶಶಿಕಲಾ ಕುಟುಂಬ ರಾಜಕಾರಣ ಮತ್ತೆ ಪಕ್ಷಕ್ಕೆ ಕಾಲಿಡಬಾರದು ಎಂಬ ದೃಷ್ಟಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪನ್ನೀರ್ ಸೆಲ್ವಂ ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. [ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಕಟ್ಟಪ್ಪ]
ಇನ್ನು ವಿಲೀನ ಪ್ರಕ್ರಿಯೆ ಯಶಸ್ವಿಯಾಗುತ್ತಿದ್ದಂತೆ ಶುಕ್ರವಾರ ತಮ್ಮ ನಿವಾಸದಲ್ಲಿ ಪನ್ನೀರ್ ಸೆಲ್ವಂ ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿದ್ದಾರೆ. ಗುರುವಾರ ಎರಡೂ ಬಣಗಳು ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದುದರಿಂದ ವಿಲೀನ ಪ್ರಕ್ರಿಯೆ ಡೋಲಾಯಮಾನ ಸ್ಥಿತಿ ತಲುಪಿತ್ತು.
ಕೊನೆಗೂ ಎರಡೂ ಬಣಗಳು ಪಕ್ಷದ ಭವಿಷ್ಯದ ದೃಷ್ಟಿಯಿಂದ ಕೊಡುಕೊಳ್ಳುವಿಕೆ ತೀರ್ಮಾನಕ್ಕೆ ಬಂದಿದ್ದು ವಿಲೀನಕ್ಕೆ ಒಪ್ಪಿಕೊಂಡಿವೆ ಎಂದು ತಿಳಿದು ಬಂದಿದೆ.