ಜಯಲಲಿತಾ ಆರೋಗ್ಯದ ಬಗ್ಗೆ ಅದೇ ರಾಗ, ಅದೇ ಹಾಡು!
ಬೆಂಗಳೂರು, ನವೆಂಬರ್ 18: 'ಜಯಲಲಿತಾ ಅವರಿಗೆ ವಿಶ್ರಾಂತಿ ಅಗತ್ಯವಿದೆ', 'ಸೋಂಕು ಪೂರ್ತಿ ನಿಯಂತ್ರಣಕ್ಕೆ ಬಂದಿದೆ', 'ಅಮ್ಮಾ ಪೂರ್ತಿ ಗುಣಮುಖರಾಗಿದ್ದಾರೆ'- ಎಐಎಡಿಎಂಕೆ ಕಾರ್ಯಕರ್ತರು ಯಾರಾದರೂ ಇವೇ ಮಾತುಗಳನ್ನೇ ಹೇಳ್ತಾರೆ. ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾರ ಆರೋಗ್ಯದ ಬಗ್ಗೆ ಪ್ರತಿ ಸಲ ಕೇಳಿಬರುತ್ತಿರುವ ಮಾತುಗಳಿವು.
ಅವರವರಿಗೆ ತೋಚಿದಂತೆ ಮಾತನಾಡುವ ಪಕ್ಷದ ಮುಖಂಡರು, ಯಾರೊಬ್ಬರು ಜಯಲಲಿತಾ ಅವರು ದಾಖಲಾದ ದಿನದಿಂದಲೂ ಅಪೋಲೋ ಆಸ್ಪತ್ರೆಯಲ್ಲಿ ಭೇಟಿ ಮಾಡಿಲ್ಲ. ಯಾರನ್ನೂ ಅಮ್ಮಾ ಭೇಟಿಗೆ ಬಿಟ್ಟಿಲ್ಲ, ನೇರ ಆಕೆಯೊಂದಿಗೆ ಮಾತು ಕೂಡ ಆಡಿಲ್ಲ. ಎಐಎಡಿಎಂಕೆ ಕಾರ್ಯಕರ್ತರಿಗೂ ಆಕೆಯ ಆರೋಗ್ಯ ಸ್ಥಿತಿ ಬಗ್ಗೆ ಅವರಿವರು ಹೇಳಿದ್ದೇ ವಿನಾ ಸರಿಯಾದ ಮಾಹಿತಿ ಇಲ್ಲ.[ಇದು ನನ್ನ ಪುನರ್ಜನ್ಮ: ಚೇತರಿಕೆ ನಂತರ 'ಅಮ್ಮ' ಮೊದಲ ಹೇಳಿಕೆ]
ಜಯಲಲಿತಾ ಆರೋಗ್ಯ ಸ್ಥಿತಿಯ ಬಗ್ಗೆ ಕೊನೆಯ ಬಾರಿಗೆ ಅಧಿಕೃತ ಮಾಹಿತಿ ಬಂದಿದ್ದು ನವೆಂಬರ್ 4ರಂದು. ಅಪೋಲೋ ಆಸ್ಪತ್ರೆ ಮುಖ್ಯಸ್ಥ ಪ್ರತಾಪ್ ರೆಡ್ಡಿ ಮಾಧ್ಯಮದವರ ಜತೆ ಮಾತನಾಡಿ, 'ಆಕೆಗೆ ಬೇಕಾಗಿದ್ದನ್ನು ಕೇಳಿ ಪಡೆಯುತ್ತಿದ್ದಾರೆ' ಎಂದು ತಿಳಿಸಿದ್ದರು. ಆಗಿನಿಂದ ಎಐಎಡಿಎಂಕೆ ಹೇಳ್ತಿರುವುದು ಅದೇ ಪ್ರತಾಪ್ ರೆಡ್ಡಿಯವರ ಮಾತುಗಳನ್ನಷ್ಟೇ.[ಆಸ್ಪತ್ರೆಯಿಂದಲೇ ಜಯಲಲಿತಾ ಆಡಳಿತ ನಡೆಸುತ್ತಿದ್ದಾರೆ: ಪಕ್ಷ]
ಎಐಎಡಿಎಂಕೆ ಅವರ ಬಟ್ಟೆಗಳು ಬದಲಾದವು, ಹೇರ್ ಸ್ಟೈಲ್ ಬದಲಾಯಿತು, ಅಷ್ಟೆಲ್ಲ ಯಾಕೆ ಏನೇನೋ ತಾಂತ್ರಿಕತೆ ಕೂಡ ಅಳವಡಿಸಿಕೊಂಡರು. ಆದರೆ ಜಯಲಲಿತಾ ಆರೋಗ್ಯದ ಬಗ್ಗೆ ಅವರಾಡುತ್ತಿರುವ ಮಾತಲ್ಲಿ ಯಾವ ಬದಲಾವಣೆಯೂ ಆಗಿಲ್ಲ.