ಜಯಾ ಹುಚ್ಚು ಅಭಿಮಾನದ ಹತ್ತೆಂಟು ಮುಖಗಳು!
ಜಯಲಲಿತಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿ ಮುದ್ದೆ ಉಣ್ಣುವಂತಾದಾಗ ಊಟ ನಿದ್ರೆ ಬಿಟ್ಟು ಕಣ್ಣೀರಿಟ್ಟವರು, ಆರಾಧ್ಯ ದೈವವೆಂದೇ ತಿಳಿದಿರುವ ಅಭಿಮಾನಿಗಳು. ಇನ್ನು ಜಯಲಲಿತಾ ಅವರು ಇಹಲೋಕವನ್ನೇ ತ್ಯಜಿಸಿದರೆ ಅವರಿಗೆ ಹೇಗಾಗಿರಬೇಡ?
ಚೆನ್ನೈ, ಡಿಸೆಂಬರ್ 08 : ಆರಾಧ್ಯ ದೈವವಾದ ಮೈಸೂರಿನ ಚಾಮುಂಡೇಶ್ವರಿಯಾಗಲಿ, ಕುದ್ರೋಳಿಯ ಗೋಕರ್ಣನಾಥನಾಗಲಿ, ಮೇಲುಕೋಟೆ ಚೆಲುವ ನಾರಾಯಣನಾಗಲಿ 'ಅಮ್ಮ'ನ ಸಹಾಯಕ್ಕೆ ಬರಲಿಲ್ಲ. ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಪುರಚ್ಚಿ ತಲೈವಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಪ್ಪತ್ನಾಲ್ಕು ದಿನಗಳ ಹೋರಾಟಕ್ಕೆ ಕೊನೆಹಾಡಿ ಜಯರಾಂ ಜಯಲಲಿತಾ ಅವರು ದಕ್ಷಿಣ ದಿಕ್ಕಿಗೆ ಪಯಣ ಬೆಳೆಸಿದ್ದಾರೆ.
ಜಯಲಲಿತಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಗಿ ಮುದ್ದೆ ಉಣ್ಣುವಂತಾದಾಗ ಊಟ ನಿದ್ರೆ ಬಿಟ್ಟು ಕಣ್ಣೀರಿಟ್ಟವರು, ಜಯಲಲಿತಾರನ್ನು ಆರಾಧ್ಯ ದೈವವೆಂದೇ ತಿಳಿದಿರುವ ಅಭಿಮಾನಿಗಳು. ಇನ್ನು ಜಯಲಲಿತಾ ಅವರು ಇಹಲೋಕವನ್ನೇ ತ್ಯಜಿಸಿದರೆ ಅವರ ಪರಿಸ್ಥಿತಿ ಹೇಗಾಗಿರಬೇಡ?
ಚೆನ್ನೈನ ಮರೀನಾ ಬೀಚ್ ನಲ್ಲಿ ಎಂ.ಜಿ.ರಾಮಚಂದ್ರನ್ ಅವರ ಸಮಾಧಿ ಪಕ್ಕದಲ್ಲೆ ಜಯಲಲಿತಾ ವಿರಮಿಸಿದ್ದಾರೆ. ಮನೆಯ ಸದಸ್ಯೆಯೊಬ್ಬರು ಅಗಲಿದ್ದಾರೆ ಎಂಬ ದುಃಖ ಹೊತ್ತು ಬಂದಂತೆಯೇ ತಮಿಳುನಾಡು ಸೇರಿದಂತೆ, ದೇಶದ ವಿವಿಧ ರಾಜ್ಯ, ವಿವಿಧ ದೇಶಗಳಿಂದಲೂ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇಂಥ ಪ್ರೀತಿಯನ್ನು ಕಂಡು ಅಲ್ಲಿನ ಜನರೇ ಭಾವುಕರು ಎಂದು ಸುಮ್ಮನಾಗಬೇಕೆ ಅಥವಾ ಜಯಲಲಿತಾ ಗಳಿಸಿದ ಪ್ರೀತಿ ಸಾಗರದಂತೆ ಹಿಗೆ ಹರಿದುಬರುತ್ತಿದೆ ಎನ್ನಬೇಕೋ? ತೀರ್ಮಾನ ಅವರವರಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಸಮಾಧಿ ಸ್ಥಳದಲ್ಲೀಗ ಕೇಶಮುಂಡನ ಮಾಡಿಸಿಕೊಳ್ಳುತ್ತಿರುವವರು, ಕಣ್ಣೀರು ಹಾಕುತ್ತಿರುವವರು, ನಮಸ್ಕರಿಸುತ್ತಿರುವವರು ಇಂಥವರೇ ಕಾಣುತ್ತಾರೆ. ಅವುಗಳ ಚಿತ್ರಗಳು ನಿಮ್ಮ ಕಣ್ಣುಗಳಿಗೆ.
ಅಮ್ಮನ ನೆನಪಿನ ವಿಜಯ ಚಿಹ್ನೆ
ತೋರು ಬೆರಳು, ಮಧ್ಯದ ಬೆರಳನ್ನು ವಿಜಯದ ಸಂಕೇತವಾಗಿ ತೋರಿಸುವುದು ಜಯಲಲಿತಾ ಟ್ರೇಡ್ ಮಾರ್ಕ್ ನಂತಾಗಿತ್ತು. ಮರೀನಾ ಬೀಚ್ ನ ಜಯಲಲಿತಾ ಸಮಾಧಿ ಸ್ಥಳವನ್ನು ನೋಡಲು ಬರುವವರು ಅಮ್ಮನ ನೆನಪಿನಲ್ಲಿ ಅದೇ ರೀತಿ ಚಿಹ್ನೆ ತೋರಿಸಿದಾಗ ಕಂಡಿದ್ದು ಹೀಗೆ.
ಕೇಶಮುಂಡನ
ತೀರಾ ಹತ್ತಿರದವರು, ತಂದೆ-ತಾಯಿ ಹಾಗೂ ಅವರಿಗೆ ಸಮಾನರು ತೀರಿಕೊಂಡಾಗ ಕೇಶಮುಂಡನ ಮಾಡಿಸಿಕೊಳ್ಳುವುದು ದುಃಖವನ್ನು ತೋರ್ಪಡಿಸುವ ಒಂದು ಬಗೆಯಾದರೆ, ಸಂಪ್ರದಾಯವೂ ಹೌದು. ಜಯಲಲಿತಾ ಸಮಾಧಿ ಸ್ಥಳದಲ್ಲಿ ತಂಡೋಪತಂಡವಾಗಿ ಬರುತ್ತಿರುವವರು ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದಾರೆ.
ಪದವೇ ಬೇಡದ ದುಃಖದ ಅಭಿವ್ಯಕ್ತಿ
ಜಯಲಲಿತಾ ಬೆಂಬಲಿಗರಿವರು ಎಂದು ಹೇಳುವ ಅಗತ್ಯವೋ ಇವರ ದುಃಖವನ್ನು ವಿವರಿಸಲು ಪದಗಳನ್ನು ಹಾಕುವ ಅನಿವಾರ್ಯ ಇಲ್ಲದ ಶೋಕತಪ್ತ ಮಹಿಳೆಯೊಬ್ಬರ ಭಾವುಕ ಅಭಿವ್ಯಕ್ತಿ ಇದು.
ದುಃಖದ ಪರಾಕಾಷ್ಠೆ
ಅಮ್ಮ ಅಂತ್ಯಸಂಸ್ಕಾರವಾದ ಸ್ಥಳದ ಬಳಿ ಮಹಿಳಾ ಬೆಂಬಲಿಗರ ದುಃಖದ ಕಟ್ಟೆಯೊಡೆದ ಕ್ಷಣ.
ಅಮ್ಮನಿಗೆ ಹೀಗೇಕಾಯಿತು?
ಆಕೆಗೆ ಹೀಗಾಗಬೇಕೆ, ಆ ದೇವರ ಬಳಿಗೆ ನಮ್ಮದೊಂದು ಪ್ರಶ್ನೆ ಎಂಬಂತೆ ಕಣ್ಣೀರು ಹಾಕುತ್ತಿರುವ ಅಭಿಮಾನಿಗಳು
ಸೋದರತ್ತೆಗೆ ನಮನ
ಜಯಲಲಿತಾ ಅವರ ಅಣ್ಣ ಜಯಕುಮಾರ್ ಮಗಳು ದೀಪಾ ತನ್ನ ಸೋದರತ್ತೆಗೆ ಗೌರವ ಸಲ್ಲಿಸಿದ ಕ್ಷಣ.
ಶಿರ ಸಾಷ್ಟಾಂಗ ನಮಸ್ಕಾರ
ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಶಿರಸಾಷ್ಟಾಂಗ ನಮಿಸಿದ ಚಿತ್ರ.
ತುಳುಕಿದ ಭಾವನೆಗಳು
ಮಹಿಳೆಯೊಬ್ಬರು ಕೇಶಮುಂಡನ ಮಾಡಿಸಿಕೊಳ್ಳುವುದನ್ನು ವೀಕ್ಷಿಸುತ್ತಿರುವ ಮಹಿಳೆಯ ಕಣ್ಣಲ್ಲೂ ಅದೆಷ್ಟೋ ಭಾವನೆಗಳು ತುಳುಕುತ್ತಿವೆ.