ಉಪಚುನಾವಣೆ: ಮತಯಂತ್ರ ಸಾಮರ್ಥ್ಯ ಮೀರಿದ ಅಭ್ಯರ್ಥಿ ಸಂಖ್ಯೆ
ಉಪಚುನಾವಣೆಗಾಗಿ ಬಂದಿರುವ ನಾಮಪತ್ರಗಳ ಸಂಖ್ಯೆ 82. ಆದರೆ, ಚುನಾವಣೆಗಳಲ್ಲಿ ಉಪಯೋಗಿಸಲಾಗುವ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಇರುವ ಬಟನ್ ಗಳ ಸಂಖ್ಯೆ 63. ಇದೇ ಈಗ ಚುನಾವಣಾ ಆಯೋಗಕ್ಕೆ ಸಮಸ್ಯೆಯಾಗಿದೆ.
ಚೆನ್ನೈ, ಮಾರ್ಚ್ 27: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಚೆನ್ನೈ ನಗರದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮುಂದಿನ ತಿಂಗಳ 12ರಂದು ನಡೆಯಲಿದೆ. ಆದರೆ, ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಂದಿರುವ ಅಭ್ಯರ್ಥಿಗಳ ನಾಮಪತ್ರಗಳ ಸಂಖ್ಯೆ ಮಾತ್ರ ಚುನಾವಣಾ ಆಯೋಗವನ್ನು ಸಂದಿಗ್ಧದಲ್ಲಿ ಸಿಲುಕುವಂತೆ ಮಾಡಿದೆ.
ಉಪಚುನಾವಣೆಗಾಗಿ ಬಂದಿರುವ ನಾಮಪತ್ರಗಳ ಸಂಖ್ಯೆ 82. ಆದರೆ, ಚುನಾವಣೆಗಳಲ್ಲಿ ಉಪಯೋಗಿಸಲಾಗುವ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಇರುವ ಬಟನ್ ಗಳ ಸಂಖ್ಯೆ 63. ಇದರಲ್ಲೊಂದು ನೋಟಾ ಬಟನ್ ಆಗಿದ್ದು, ಇನ್ನುಳಿದ 62 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಬಹುದಾಗಿದೆ.[ಆರ್ ಕೆ ನಗರ ಉಪಚುನಾವಣೆ: ಇ.ಮದುಸೂಧನ್ ನಾಮಪತ್ರ ಸಲ್ಲಿಕೆ]
ಹಾಗಾಗಿ, ನಾಮಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅನರ್ಹ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಿ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಮಾಡುವ ಸರ್ಕಸ್ ಗೂ ಈಗಾಗಲೇ ಚುನಾವಣಾ ಇಲಾಖೆ ಟ್ರೈ ಮಾಡಿ ಸೋತಿದೆ.
ಏಕೆಂದರೆ, ಈಗ ಬಂದಿರುವ 82 ಅಭ್ಯರ್ಥಿಗಳ ನಾಮಪತ್ರಗಳನ್ನು ಯಾವ ದೃಷ್ಟಿಕೋನದಲ್ಲಿ ಪರಿಶೀಲಿಸಿದರೂ ಇವುಗಳಲ್ಲಿ 11 ಮಂದಿ ಡಮ್ಮಿ ಅಭ್ಯರ್ಥಿಗಳೆಂದು ಗುರುತಿಸಿಕೊಂಡಿದ್ದಾರೆ. ಇವರೆಲ್ಲರೂ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಮಾರ್ಚ್ 27ರಂದು ತಮ್ಮ ತಮ್ಮ ನಾಮಪತ್ರ ಹಿಂಪಡೆಯುವುದು ಖಚಿತ ಎನ್ನಲಾಗಿದೆ.[ಶಶಿಕಲಾಗೆ 'ಟೋಪಿ', ಪನ್ನೀರ್ ಸೆಲ್ವಂಗೆ 'ವಿದ್ಯುತ್ ಕಂಬ']
ಇಷ್ಟಾದರೂ, ಉಳಿಯುವ ಅಭ್ಯರ್ಥಿಗಳ ಸಂಖ್ಯೆಯು 71 ಆಗಲಿದ್ದು, ಇದು ಮತಯಂತ್ರದ ಸಾಮರ್ಥ್ಯಕ್ಕಿಂತ 11 ಸ್ಥಾನಗಳ ಹೆಚ್ಚುವರಿಯಾಗಿದೆ ಎನ್ನಲಾಗಿದೆ.[ಚುನಾವಣಾ ಆಯೋಗದಿಂದ ಎಐಎಡಿಎಂಕೆ ಹೆಸರು, ಚಿಹ್ನೆಗೆ ತಾತ್ಕಾಲಿಕ ತಡೆ]
ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗವು ಹೊಸ ಮತಯಂತ್ರಗಳನ್ನು ತಯಾರಿಸಲು ಮುಂದಾಗುತ್ತದೆಯೇ ಅಥವಾ ಒಂದೇ ಮತಗಟ್ಟೆಯಲ್ಲಿ ಎರಡು ಮತಯಂತ್ರಗಳನ್ನು ಇಡುವ ಮೂಲಕ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಮಾಡಿಕೊಡುತ್ತದೆಯೇ ಅಥವಾ ಮತ್ತೇನಾದರೂ ಹೊಸ ದಾರಿ ಹುಡುಕಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.