ಜಯಾ ಸಾವಿನ ಬಗ್ಗೆ ತಮಿಳುನಾಡು ಸರಕಾರ ಸುಳ್ಳು ಹೇಳಿದೆಯಾ?
ಚೆನ್ನೈ, ಮಾರ್ಚ್ 8: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಏನು ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತೋ ಅದನ್ನು ಬುಧವಾರ ಮಾಡಿದ್ದಾರೆ. ದಿವಂಗತ ಮುಖ್ಯಮಂತ್ರಿ ಜಯಲಲಿತಾ ಸಾವಿನ ತನಿಖೆಗೆ ಆಗ್ರಹಿಸಿ ಕೈಗೊಂಡಿದ್ದ ಒಂದು ದಿನದ ಉಪವಾಸ ಸತ್ಯಾಗ್ರಹದ ವೇಳೆ, "ನನಗೆ ಜಯಲಲಿತಾ ಅವರ ಸಾವಿನ ಬಗ್ಗೆ ತಿಳಿಸಿದ್ದು ಡಿಸೆಂಬರ್ 5ರ ಸಂಜೆ 6.30ರ ಸಮಯದಲ್ಲಿ" ಎಂದಿದ್ದಾರೆ.
ಜಯಲಲಿತಾ ಅವರ ಚಿಕಿತ್ಸೆ ವಿಚಾರದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದ ಗುಂಪಿನಲ್ಲಿ ತಾವಿರಲಿಲ್ಲ. ಜಯಲಲಿತಾ ಅವರಿಗೆ ಚಿಕಿತ್ಸೆ ನಿಲ್ಲಿಸಿ ಎಂಬ ಸೂಚನೆ ನೀಡಿದ ಬಗ್ಗೆ ತಮಗೆ ಗೊತ್ತಿಲ್ಲ ಎಂದಿದ್ದಾರೆ ಒಪಿಎಸ್. ಜಯಾ ಸಾವಿನ ವಿಚಾರವಾಗಿ ಸೋಮವಾರ ತಮಿಳುನಾಡು ಸರಕಾರ ಪ್ರಕಟಣೆ ಬಿಡುಗಡೆ ಮಾಡಿತ್ತು. ಅದಕ್ಕೀಗ ಉತ್ತರ ಎಂಬಂತೆ ಪನ್ನೀರ್ ಸೆಲ್ವಂ ಮಾತನಾಡಿದ್ದಾರೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]
ಇನ್ನೊಂದು ಮುಖ್ಯ ಅಂಶ ಏನೆಂದರೆ, ಡಿಸೆಂಬರ್ 5, 2016ರಲ್ಲಿ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ ಜಯಲಲಿತಾ ಅವರು ರಾತ್ರಿ 11.30ರ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಒಪಿಎಸ್ ಬುಧವಾರ ತಿಳಿಸಿದ್ದೇನೆಂದರೆ. ಅಮ್ಮನ ಸಾವಿನ ಸುದ್ದಿ ಸಂಜೆ 6.30ಕ್ಕೆ ಗೊತ್ತಾಯಿತು ಎಂದು ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಈ ವಿಚಾರ ಪ್ರಸ್ತಾವ ಮಾಡಿದ ಪನ್ನೀರ್ ಸೆಲ್ವಂ, ಜಯಲಲಿತಾ ಸಂಜೆ 4.30ಕ್ಕೆ ತೀರಿಕೊಂಡರು. ಅದರೆ ನನಗೆ ತಿಳಿಸಿದ್ದು ಸಂಜೆ 6.30ಕ್ಕೆ. ಆಕೆಗೆ ನೀಡಿದ ಚಿಕಿತ್ಸೆ ಬಗ್ಗೆ ಯಾವುದೇ ಮಾಹಿತಿ ಕೂಡ ನೀಡಿರಲಿಲ್ಲ ಎಂದಿದ್ದಾರೆ.