ಚೆನ್ನೈನಲ್ಲಿ ಐಟಿ ದಾಳಿ, 100 ಕೆ.ಜಿ. ಚಿನ್ನ, 90 ಕೋಟಿ ನಗದು ವಶಕ್ಕೆ
ಚೆನ್ನೈ, ಡಿಸೆಂಬರ್ 8: ಅಪನಗದೀಕರಣ ನಿರ್ಧಾರದ ನಂತರ ಆದಾಯ ತೆರಿಗೆ ಇಲಾಖೆಯಿಂದ ನಡೆದ ಅತಿ ದೊಡ್ಡ ದಾಳಿ ಇದು. 100 ಕೆ.ಜಿ. ಚಿನ್ನ, 90 ಕೋಟಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ವಿವಿಧ ತಂಡ ಚೆನ್ನೈನ ಎಂಟು ಕಡೆ ದಾಳಿ ನಡೆಸಿ, ಕಾನೂನು ಬಾಹಿರವಾಗಿ ಕ್ರೋಡೀಕರಿಸಿದ್ದ ಸಂಪತ್ತನ್ನು ವಶಪಡಿಸಿಕೊಂಡಿದೆ.
ಒಟ್ಟು ವಶಕ್ಕೆ ಪಡೆದ 90 ಕೋಟಿಯಲ್ಲಿ 70 ಕೋಟಿ ರುಪಾಯಿ ಹೊಸ ನೋಟುಗಳಲ್ಲಿದ್ದವು. ಮೂವರು ವ್ಯಾಪಾರಿಗಳಿಗೆ ಸೇರಿದ ಚೆನ್ನೈನ ಟಿ ನಗರ್ ಹಾಗೂ ಅಣ್ಣಾ ನಗರ್ ನ ಮನೆ ಹಾಗೂ ಕಚೇರಿಗಳು ಸೇರಿ ಎಂಟು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.[ಕಪ್ಪು ಹಣ: ಕರ್ನಾಟಕ, ಬಿಜೆಪಿಯವರದೇ ಮೇಲುಗೈ]
ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಎಂಬ ವ್ಯಾಪಾರಿಗಳಿಗೆ ಸೇರಿದ, ಲೆಕ್ಕ ನೀಡದ ಮೊತ್ತ ಇದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಆಸ್ತಿ ದಾಖಲೆಗಳು, ಲೆಕ್ಕಕ್ಕೆ ನೀಡದ ಆಸ್ತಿಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತದೆ.