ನಾನು ಸಮಸ್ಯೆಗೆ ಸ್ಪಂದಿಸಿ, ಪರಿಹರಿಸುವ ಕ್ಯಾಟಗರಿಯವನು: ಯಶ್
ಸಮಾಜದಲ್ಲಿ ಎರಡು ಕ್ಯಾಟಗರಿಗೆ ಸೇರಿದ ಜನರಿದ್ದಾರೆ. ಕೆಲವರು ಸಮಸ್ಯೆಯನ್ನು ಕಣ್ಣಾರೆ ಕಂಡು ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಸಮಸ್ಯೆಯನ್ನು ಕಂಡು, ಅದಕ್ಕೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ನಾನು ಎರಡನೇ ಕ್ಯಾಟಗಿರಿ: ಯಶ್
ಹನೂರು, ಏಪ್ರಿಲ್ 18: ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಹನೂರು ತಾಲೂಕಿನ ವಡಕೆಹಳ್ಳ, ಕೂಡ್ಲೂರು, ಮತ್ತು ರಾಮಾಪುರ ಗೋಶಾಲೆಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಪರಿಶೀಲಿಸಿದರು. ಹನೂರು ಸಮೀಪದ ವಡಕೆಹಳ್ಳ ಗ್ರಾಮದಲ್ಲಿ ದೆಹಲಿಯ ಧ್ಯಾನ್ ಚಂದ್ ಫೌಂಡೇಷನ್ ಹಾಗೂ ರಾಮಚಂದ್ರಪುರ ಮಠದ ವತಿಯಿಂದ ಜಾನುವಾರುಗಳಿಗಾಗಿ ತೆರೆದಿರುವ ಗೋಶಾಲೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಯಶ್, ಸರಕಾರವು ಈ ಪರಿಸ್ಥಿತಿಯಲ್ಲಿ ಮೇವು ಸಿಗುತ್ತಿಲ್ಲ ಎಂದು ಹೇಳುವಂತಿಲ್ಲ. ಹೇಗಾದರೂ ಮಾಡಿ ಉತ್ತಮ ಮಳೆ ಆಗುವವರೆಗೆ ಜಾನುವಾರುಗಳಿಗೆ ಮೇವನ್ನು ಒದಗಿಸಬೇಕು. ಈಗಾಗಲೇ ಸರಕಾರದಿಂದ ತೆರೆಯಲಾಗಿರುವ ಗೋಶಾಲೆಯ ನಿರ್ವಹಣೆ ಸರಿಯಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಈ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.[ಕೊಪ್ಪಳ ಜಿಲ್ಲೆಯ ಕೆರೆ ಅಭಿವೃದ್ಧಿಗೆ ಯಶ್ -ರಾಧಿಕಾರಿಂದ ಚಾಲನೆ]
ಈ ಭಾಗದಲ್ಲಿ ದೇಸಿ ತಳಿಯ ಹಸುಗಳು ಹೆಚ್ಚಾಗಿರುವುದರಿಂದ ಅವುಗಳನ್ನು ರಕ್ಷಿಸುವ ಕೆಲಸ ಆಗಬೇಕು. ಅರಣ್ಯದೊಳಗೆ ದೊಡ್ಡಿ ಹಾಕಲು ಅವಕಾಶ ನೀಡದ ಕಾರಣದಿಂದ ಈ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಜಾನುವಾರುಗಳ ಮೇವಿಗೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸರಕಾರವು ಇನ್ನೂ ಹಲವೆಡೆ ಗೋಶಾಲೆ, ಮೇವು ಬ್ಯಾಂಕ್ ಗಳನ್ನು ತೆರೆಯಬೇಕು. ನಿಜವಾದ ಗೋಪಾಲಕರು ಈ ಭಾಗದಲ್ಲಿ ಸಿಗುತ್ತಾರೆ. ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಇಲ್ಲಿನ ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.[ಯಶ್ ಹುಟ್ಟುಹಬ್ಬಕ್ಕೆ ವೆಬ್ ಲೋಕಕ್ಕೆ ಯಶೋಮಾರ್ಗ ಎಂಟ್ರಿ!]
ಧ್ಯಾನ್ ಚಂದ್ ಫೌಂಡೇಷನ್, ಶ್ರೀ ರಾಮಚಂದ್ರಪುರ ಮಠದ ವತಿಯಿಂದ ಮೇವನ್ನು ಒದಗಿಸಲಾಗುತ್ತಿದ್ದು, ಇವರ ಜೊತೆ ಯಶೋ ಮಾರ್ಗ ಕೈಜೋಡಿಸುತ್ತಿದೆ. ಇದಕ್ಕೆ ಸರಕಾರದ ಸಹಕಾರ ಬೇಕಾಗಿದೆ. ಸರಕಾರಕ್ಕೆ ಮೇವನ್ನು ಒದಗಿಸಲು ಆಗುವುದಿಲ್ಲ ಎಂದರೆ ನಮಗೆ ವಹಿಸಲಿ, ನಾವು ಮೇವನ್ನು ಒದಗಿಸುತ್ತೇವೆ ಎಂದು ಹೇಳಿದರು.
ಇತರೆ ನಟ- ನಟಿಯರ ಬಗ್ಗೆ ಬೆರಳು ತೋರಿಸಲ್ಲ. ನಾನು ರೈತ ಕುಟುಂಬದಿಂದ ಬಂದವನು. ಅದಕ್ಕಿಂತ ಹೆಚ್ಚಾಗಿ ಕನ್ನಡಿಗ. ಸಮಾಜದಲ್ಲಿ ಎರಡು ಕ್ಯಾಟಗರಿಗೆ ಸೇರಿದ ಜನರಿದ್ದಾರೆ. ಕೆಲವರು ಸಮಸ್ಯೆಯನ್ನು ಕಣ್ಣಾರೆ ಕಂಡು ಸುಮ್ಮನಾಗುತ್ತಾರೆ. ಮತ್ತೆ ಕೆಲವರು ಸಮಸ್ಯೆಯನ್ನು ಕಂಡು, ಅದಕ್ಕೆ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ನಾನು ಎರಡನೇ ಕ್ಯಾಟಗಿರಿಗೆ ಸೇರಿದವನು ಎಂದು ತಿಳಿಸಿದರು.[ತಡವಾಗಿ ಬಂದ ಯಶ್ ಕಾರಿನ ಗ್ಲಾಸ್ ಪೀಸ್ ಪೀಸ್]
ರಾಧಿಕಾ ಪಂಡಿತ್ ಮಾತನಾಡಿದರು. ಧ್ಯಾನ್ ಚಂದ್ ಫೌಂಡೇಷನ್ ಕೌಶಿಕ್, ಕವಿತಾ ಇನ್ನಿತರರು ಇದ್ದರು.