ಅಗ್ನಿ ಅನಾಹುತ ಮತ್ತು ಬರ: ಕಂಗಾಲಾದ ಬಂಡೀಪುರದ ಪ್ರಾಣಿಗಳು
ಚಾಮರಾಜನಗರ, ಮಾರ್ಚ್ 6: ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ಸುಟ್ಟು ಕರಕಲಾಗಿದೆ. ಸಣ್ಣಪುಟ್ಟ ಪ್ರಾಣಿಗಳು ಸುಟ್ಟುಹೋಗಿದ್ದರೆ, ಕೆಲವು ಪ್ರಾಣಿಗಳು ಹೆದರಿ ಪಲಾಯನ ಮಾಡಿರುವುದು ಈ ಭಾಗದಲ್ಲಿ ಸ್ಮಶಾನ ಮೌನ ನೆಲೆಸುವಂತೆ ಮಾಡಿದೆ.
ಸುರಕ್ಷಿತ ತಾಣದ ಹುಡುಕಾಟದಲ್ಲಿರುವ ಪ್ರಾಣಿಗಳು ಕಣ್ಣಿಗೂ ಬೀಳುತ್ತಿಲ್ಲ. ಒಂದೆಡೆ ಅಗ್ನಿ ಅನಾಹುತ ಮತ್ತೊಂದೆಡೆ ಬರ, ಈ ಎರಡೂ ಸೇರಿ ವನ್ಯಜೀವಿಗಳನ್ನು ಕಂಗಾಲುಮಾಡಿದೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬಂಡೀಪುರ ಅರಣ್ಯ ವ್ಯಾಪ್ತಿಯ 13 ವಲಯಗಳಲ್ಲಿ ಸುಮಾರು 384 ಕೆರೆಗಳಿವೆಯಾದರೂ ಈ ಕೆರೆಗಳ ಪೈಕಿ ಶೇ.80 ರಷ್ಟು ಕೆರೆಗಳು ಬರಿದಾಗಿವೆಯಂತೆ. ಇರುವ ಕೆರೆಗಳಲ್ಲಿ ಹೂಳು ತುಂಬಿದ್ದು ಅವುಗಳಲ್ಲಿರುವ ಅಲ್ಪಸ್ವಲ್ಪ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಹೂಳು ತುಂಬಿದ ಕೆರೆಗಳಲ್ಲಿ ನೀರು ಕುಡಿಯಲು ಹೋದರೆ ಪ್ರಾಣಿಗಳು ಹೂಳಿನಲ್ಲಿ ಹೂತು ಸಾಯುವ ಸಂಭವವೂ ಇದೆ.[ಬಂಡೀಪುರದಲ್ಲಿ ಕಾಳ್ಗಿಚ್ಚು ತಡೆಗೆ ಡ್ರೋಣ್ ಬಳಕೆ?]
ಬಹಳಷ್ಟು ಪ್ರಾಣಿಗಳು ನೀರು ಮತ್ತು ಮೇವನ್ನು ಅರಸುತ್ತಾ ಬಂಡಿಪುರ ಉದ್ಯಾನದಿಂದ ಕಬಿನಿ ಹಿನ್ನೀರಿನತ್ತ ತೆರಳಿವೆ ಎನ್ನಲಾಗುತ್ತಿದೆ. ಈಗಾಗಲೇ ನೀರಿನ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಓಂಕಾರ್, ಗುಂಡ್ರೆ, ಬಂಡೀಪುರ ಹಾಗೂ ಕುಂದಕೆರೆ ವಲಯಗಳ ಸುಮಾರು 11 ಕೆರೆಗಳಿಗೆ ಸೌರ ವಿದ್ಯುತ್ ಚಾಲಿತ ಮೋಟಾರು ಅಳವಡಿಸಿ ಕೊಳವೆ ಬಾವಿಯಿಂದ ನೀರು ತುಂಬಿಸುವ ಕೆಲಸವನ್ನು ಮಾಡುತ್ತಿದೆ. ಇನ್ನು ಸಣ್ಣಪುಟ್ಟಕೆರೆಗಳಿಗೆ ಪ್ರತಿ ದಿನವೂ ಎರಡು ಟ್ಯಾಂಕರ್ ನಲ್ಲಿ ನೀರನ್ನು ತಂದು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ.[10 ದಿನದಲ್ಲಿ 4 ಕಡೆ ಕಾಳ್ಗಿಚ್ಚು, ನೂರಾರು ಎಕರೆ ಭಸ್ಮ, ಆದರೆ ಕಾರಣ ಗೊತ್ತಿಲ್ಲ]
ಈ ಬಾರಿ ಮಳೆಯ ಅಭಾವವಿದ್ದಿದ್ದರಿಂದ ಅರಣ್ಯದಲ್ಲಿರುವ ಕೆರೆಗಳಲ್ಲಿನ ಹೂಳು ತೆಗೆಯುವ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಜತೆಗೆ ಕೆರೆಯ ಸುತ್ತ ಇರುವ ಲಂಟಾನವನ್ನು ತೆರವುಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಮಳೆ ಬಂದರೆ ಕೆರೆಯಲ್ಲಿ ನೀರು ಸಂಗ್ರಹವಾಗುತ್ತದೆ.