ಇರುವುದೊಂದೇ ಬೋರ್ ವೆಲ್: ಬಿಂದಿಗೆ ನೀರಿಗೂ ಜಗಳ, ಹೊಡೆದಾಟ
ಚಾಮರಾಜನಗರ, ಆಗಸ್ಟ್ 24: ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿಗೆ ಪರದಾಡುವುದು ಹೊಸತೇನಲ್ಲ. ಇಲ್ಲಿ ಎಲ್ಲ ಕಾಲದಲ್ಲೂ ನೀರಿಗೆ ಬರ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೂ ಇಲ್ಲಿನ ಜನತೆ ನೀರಿಗಾಗಿ ಬಿಂದಿಗೆ ಹಿಡಿದು ಹೋರಾಡಬೇಕಾದ ಅನಿವಾರ್ಯ ಬಂದೊದಗುತ್ತದೆ.
ಬೆಳಗ್ಗೆ ಎದ್ದು ತಮ್ಮ ದೈನಂದಿನ ಕೆಲಸದ ನಡುವೆ ನೀರು ತರುವುದೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಹನುಮಂತನ ಬಾಲದಂತೆ ಇರುವ ಸಾಲಿನಲ್ಲಿ ನಿಂತು ಎರಡು ಕೊಡ ನೀರು ತುಂಬಿಸಿ ಮನೆ ತಲುಪುವ ವೇಳೆಗೆ ಸಾಕು ಸಾಕಾಗಿ ಬಿಡುತ್ತದೆ. ಈ ರೀತಿ ಸಾಹಸ ಮಾಡಿ ನೀರು ತರುವ ಕೆಲಸವನ್ನು ಗುಂಡ್ಲುಪೇಟೆ ತಾಲೂಕಿನ ಕೆಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಗ್ಗಳಹುಂಡಿಯ ಜನ ಹಲವು ಕಾಲದಿಂದ ಮಾಡುತ್ತಾ ಬರುತ್ತಿದ್ದಾರೆ.[ಗುಂಡ್ಲುಪೇಟೆಯಲ್ಲಿ ಎಗ್ಗಿಲ್ಲದೆ ಸಾಗಿದ ಕೇರಳ ಲಾಟರಿ ದಂಧೆ]
ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಸಲುವಾಗಿ ನಾಲ್ಕು ಬೋರ್ ವೆಲ್ ಗಳನ್ನು ಕೊರೆಯಿಸಲಾಗಿದೆ. ಇವುಗಳಲ್ಲಿ ಮೂರು ಕೊಳವೆಬಾವಿ ಅಂತರ್ಜಲ ಕುಸಿತದ ಕಾರಣ ಇದ್ದೂ ಇಲ್ಲದಂತಾಗಿವೆ. ಪರಿಣಾಮ: ಒಂದೇ ಕೊಳವೆಬಾವಿ ಗ್ರಾಮದ ಜನರ ದಾಹವನ್ನು ತಣಿಸಬೇಕಿದೆ. ಹೀಗಾಗಿ ಇದೊಂದು ಕೊಳವೆಬಾವಿಯ ನೀರಿನಿಂದ ಬೀದಿಗಳಲ್ಲಿರುವ 8 ತೊಂಬೆಗಳಿಗೆ ನೀರು ಪೂರೈಸುವುದು ಸಾಧ್ಯವಾಗದ ಮಾತಾಗಿದೆ.
ನೀರಿಗಾಗಿ ತೊಂಬೆ ಮುಂದೆ ಕಾದು ನಿಲ್ಲುವ ಜನ ಪೈಪೋಟಿಗೆ ಬಿದ್ದು ನೀರು ಸಂಗ್ರಹಿಸುತ್ತಾರೆ. ಈ ಸಂದರ್ಭದಲ್ಲಿ ಜಗಳಗಳು ನಡೆಯುತ್ತವೆ. ತೊಂಬೆ ಮುಂದೆ ನಿಂತು ಕಾಯಲಾಗದ ಮಂದಿ ದೂರದ ಊರುಗಳಿಂದ ನೀರನ್ನು ಸೈಕಲ್, ಬೈಕ್ ಮೊದಲಾದವುಗಳಲ್ಲಿ ತರುತ್ತಾರೆ.[ಬಂಡೀಪುರದಲ್ಲಿ ಸರಸ-ಸಲ್ಲಾಪದಲ್ಲಿದ್ದ ಪ್ರೇಮಿಗಳ ಮೇಲೆ ಕೇಸು]
ಬಡವರೇ ಹೆಚ್ಚು ಇರುವ ಊರಿನಲ್ಲಿ ನೀರು ತರುವುದೇ ಕೆಲಸವಾದರೆ ಹೊಟ್ಟೆಪಾಡಿಗೇನು ಮಾಡುವುದು ಎಂಬುದು ಇಲ್ಲಿನವರ ಪ್ರಶ್ನೆಯಾಗಿದೆ. ಈ ಬಗ್ಗೆ ಗ್ರಾಮದ ಜನ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಈ ಎಲ್ಲದರ ನಡುವೆ ಗ್ರಾಮಸ್ಥರು ಒಬ್ಬರನೊಬ್ಬರು, ಬೈದಾಡಿ, ಜಗಳವಾಡಿ ನೀರು ಹಿಡಿದುಕೊಳ್ಳುವ ಪರಿಸ್ಥಿತಿ ಮಾತ್ರ ಹಾಗೆಯೇ ಮುಂದುವರೆದಿದೆ. ಜಿಲ್ಲಾಡಳಿತ ಇತ್ತ ಗಮನಹರಿಸಿದರೆ ಸಮಸ್ಯೆ ಬಗೆಹರಿಸಬಹುದು. ಅದು ಸಾಧ್ಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.