ಬಂಡಳ್ಳಿಯಲ್ಲಿ ಮಹಿಳೆಯರಿಗೆ ನೀರು ತರುವುದೇ ಕೆಲಸ
ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಸ್ವಗ್ರಾಮ ಬಂಡಳ್ಳಿ ಗ್ರಾಮಕ್ಕೆ ಭೇಟಿ ನೀಡಿದರೆ ಅಲ್ಲಿನ ದೃಶ್ಯಗಳು ನಮಗೆ ನೀರಿನ ಸಮಸ್ಯೆಯನ್ನು ಸಾರಿ ಹೇಳುತ್ತದೆ. ಮಹಿಳೆಯರು ಮತ್ತು ಮಕ್ಕಳಿಗೆ ನೀರು ತರುವುದೇ ಒಂದು ಕೆಲಸವಾಗಿದೆ.
ಚಾಮರಾಜನಗರ, ಫೆಬ್ರವರಿ 17: ಆ ಗ್ರಾಮದಲ್ಲಿ ಮಹಿಳೆಯರಿಗೆ ನೀರು ತರುವುದೇ ಒಂದು ಕೆಲಸ. ಬೆಳಿಗ್ಗೆ ಎದ್ದು ಎಲ್ಲಿ ನೀರು ಸಿಗುತ್ತದೆ ಎಂದು ಹುಡುಕುತ್ತಾ ಕಿ.ಮೀ.ಗಟ್ಟಲೆ ಅಲೆಯುತ್ತಾ ಕೃಷಿ ಚಟುವಟಿಕೆಗೆ ಅಳವಡಿಸಿದ ಪಂಪ್ ಸೆಟ್ಟಿನಿಂದ ಮಾಲಿಕರನ್ನು ಕಾಡಿಬೇಡಿ ಮಹಿಳೆಯರು ನೀರು ತರುತ್ತಾರೆ.
ಶಾಲೆಗೆ ಹೋಗಬೇಕಾದ ಮಕ್ಕಳು ಬೆಳಗ್ಗೆ ಎದ್ದು ಕೊಡ ಹಿಡಿದು ನೀರಿಗಾಗಿ ಅಲೆದು ಕೊಳವೆ ಬಾವಿ ಇರುವವರ ಬಳಿ ಗೋಗರೆದು ನೀರನ್ನು ತಂದು ಮನೆಗೆ ತುಂಬಿಸಿ ಹೋಗಬೇಕಾಗಿದೆ. ಬೇಸಿಗೆಯ ಆರಂಭದ ದಿನವೇ ಹೀಗಾದರೆ ಮುಂದಿನ ದಿನಗಳನ್ನು ಯೋಚಿಸಿದರೆ ಖಂಡಿತಾ ಭಯವಾಗುತ್ತದೆ.[ಬರ ಪರಿಶೀಲನಾ ಸಭೆ: ಟ್ಯಾಂಕರ್ ನೀರಿಗೆ ಕಾಗೋಡು ಸಲಹೆ]
ನಾವೇನಾದರೂ ಕೊಳ್ಳೇಗಾಲ ತಾಲೂಕಿನ ಹನೂರು ಸಮೀಪದ ಸ್ವಗ್ರಾಮ ಬಂಡಳ್ಳಿ ಗ್ರಾಮಕ್ಕೆ ಭೇಟಿ ನೀಡಿದರೆ ಅಲ್ಲಿನ ದೃಶ್ಯಗಳು ನಮಗೆ ನೀರಿನ ಸಮಸ್ಯೆಯನ್ನು ಸಾರಿ ಹೇಳುತ್ತದೆ. ಸರಕಾರವೇನೋ ಎಲ್ಲ ಜಿಲ್ಲೆಗಳ ಎಲ್ಲ ಊರುಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರನ್ನು ಒದಿಗಿಸುತ್ತೇವೆ. ಜಾನುವಾರುಗಳನ್ನು ಲೆಕ್ಕಹಾಕಿ ಅವುಗಳಿಗೆ ಮೇವನ್ನು ನೀಡುತ್ತೇವೆ ಎನ್ನುತ್ತಿದ್ದಾರೆ. ಅದರೆ ಈ ಊರಿನಲ್ಲಿ ಜನರಿಗೆ ಕುಡಿಯವ ನೀರಿಗಾಗಿ ಪರಿತಪಿಸುವ ಸ್ಥಿತಿ ಎದುರಾಗಿದೆ.
ಮನೆಮಂದಿಗೆ ನೀರು ತರುವುದೇ ಕೆಲಸ
ಎಲ್ಲೆಂದರಲ್ಲಿ ಕೊಡ ಹಿಡಿದು ನಡೆಯುವ ಮಹಿಳೆಯರು, ಮಕ್ಕಳು, ಬೈಕ್ ನಲ್ಲಿ ದೂರದಿಂದ ನೀರು ತುಂಬಿಸಿಕೊಂಡು ಬರುತ್ತಿರುವ ಪುರುಷರು, ಕೊಳವೆ ಬಾವಿ ಮುಂದೆ ಕೊಡ ಹಿಡಿದು ಸಾಲುಗಟ್ಟಿ ನಿಂತ ಮಹಿಳೆಯರು ಇಲ್ಲಿ ಕಂಡು ಬರುತ್ತಾರೆ. ಇವರೆಲ್ಲರಿಗೂ ಬೇರೆ ಯಾವುದೇ ಸಂಪತ್ತು ಬೇಡ ನೀರು ಸಿಕ್ಕರೆ ಸಾಕು ಎಂಬ ಸ್ಥಿತಿಯಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಇದೇ ಊರಿನವರು
ಈ ಗ್ರಾಮವು ಜಿಪಂ ಉಪಾಧ್ಯಕ್ಷರು ಹಾಗೂ ತಾಪಂ ಸದಸ್ಯರು ಹಾಗೂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ತವರೂರು. ಆದರೆ ಇಲ್ಲಿ ನೀರಿನ ಸಮಸ್ಯೆಗೆ ಯಾರೂ ಪರಿಹಾರ ಕಂಡುಹಿಡಿದಿಲ್ಲ. ಅಂತರ್ಜಲ ಕುಸಿತದಿಂದ ಗ್ರಾಮದಲ್ಲಿ ಇದ್ದ ಕೊಳವೆಬಾವಿ ದುರಸ್ತಿಗೊಳಗಾಗಿದೆ. ಅದನ್ನು ಸರಿಪಡಿಸುವ ಸಾಹಸಕ್ಕೆ ಯಾರು ಕೈಹಾಕಿಲ್ಲ. ನಿತ್ಯದ ಉಪಯೋಗಕ್ಕಾಗಿ ನೀರು ಬೇಕಾಗಿರುವುದರಿಂದ ಎಲ್ಲೆಂದರಲ್ಲಿ ಅಲೆದು ನೀರು ತರುವುದು ಅನಿವಾರ್ಯವಾಗಿದೆ.
ನಿತ್ಯ ಜೀವನಕ್ಕೂ ಕುತ್ತು
ಕಿಲೋ ಮೀಟರ್ ಗಟ್ಟಲೆ ಅಲೆದು ಇಲ್ಲಿನ ಗ್ರಾಮಸ್ಥರು ಜಾನುವಾರುಗಳಿಗೆ ನೀರು, ಮೇವನ್ನು ನೀಡಬೇಕಾಗಿದೆ. ದಿನವೆಲ್ಲವೂ ನೀರಿಗಾಗಿ ಅಲೆಯುವುದೇ ಕೆಲಸವಾದರೆ ನಿತ್ಯ ಜೀವನಕ್ಕೆ ಏನು ಮಾಡಬೇಕು ಎಂದು ಜನರು ಬೇಸರಿಸಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರಿಂದ ನೀರಿನ ಕಂದಾಯ ಕಟ್ಟಿಸಿಕೊಳ್ಳುವ ಗ್ರಾಪಂ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ. ಕೆಟ್ಟು ನಿಂತ ಬೋರ್ವೆಲ್ ಅನ್ನು ಸರಿಪಡಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿದೆ.
ಅಂತರ್ಜಲ ಮೊಗೆದು ತೆಗೆದಾಯ್ತು
ಇದು ಕೊಳ್ಳೇಗಾಲ ಹನೂರು ಗ್ರಾಮವೊಂದರ ಕಥೆಯಲ್ಲ ಇಡೀ ರಾಜ್ಯದಲ್ಲಿ ಕೆರೆ,ತೊರೆ, ಬಾವಿ, ಕೊಳ,ಹಳ್ಳ ಎಲ್ಲ ಬತ್ತಿ ನಿಂತಿವೆ. ಜನರು ಕುಡಿಯುವ ನೀರಿಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಸಾವಿರಾರು ಅಡಿಗಳನ್ನು ಕೊರೆದರೂ ನೀರು ಸಿಗದಾಗಿದೆ. ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿ ಮೂರು ವರ್ಷವೇ ಕಳೆದಿದೆ. ಲೆಕ್ಕವಿಲ್ಲದಷ್ಟು ಕೊಳವೆ ಬಾವಿಗಳು ನಿಂತು ಬಹಳ ದಿನಗಳಾಗಿವೆ. ಈ ವರ್ಷವೂ ಮಳೆ ಕೈಕೊಟ್ಟರೆ ಜನರು ನೀರಿನ ಕಾಳಗಕ್ಕೆ ನಿಲ್ಲುವುದು ಶತಸಿದ್ಧ.
ನೀರಿಗಾಗಿ ಸರಕಾರ ಏನು ಮಾಡುತ್ತಿದೆ?
ರಾಜ್ಯದ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮಗಳಿಗೆ ನೀರನ್ನು ಒದಗಿಸುತ್ತೇವೆ, ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದೆ ಎಂದು ಹೇಳುವ ಸರಕಾರ ಹಳ್ಳಿಗರ ನೀರಿನ ಸಮಸ್ಯೆಯನ್ನು ಹೆಚ್ಚಿಸುತ್ತಿದೆ ಅನ್ನಿಸುತ್ತದೆ. ಕೊಳವೆ ಬಾವಿಗಳು ಸೋತರೆ ಟ್ಯಾಂಕರ್ ಮುಖಾಂತರ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ. ನದಿ ನೀರೆಲ್ಲವೂ ನಗರಗಳ ಪಾಲಾಗುತ್ತಿದೆ. ಕೃಷಿ ಮತ್ತು ಹಳ್ಳಿಗರಿಗೆ ಸಿಗುವ ನೀರು ತೀರಾ ಕಡಿಮೆ ಎನ್ನುತ್ತಾರೆ ನಾಗರಿಕರು.