ಕೊಳ್ಳೇಗಾಲದ ದನಗೆರೆ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದನಗೆರೆ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟ ಇಬ್ಬರ ಪೈಕಿ ಅನಿಲ್ ಗೆ ಈಚೆಗಷ್ಟೇ ಉದ್ಯೋಗ ಸಿಕ್ಕಿತ್ತು
ಕೊಳ್ಳೇಗಾಲ, ಏಪ್ರಿಲ್ 30: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಐವರ ಪೈಕಿ ಇಬ್ಬರು ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಧನಗೆರೆ ಬಳಿ ಸಂಭವಿಸಿದೆ. ಕೊಳ್ಳೇಗಾಲದ ಅಗಸ್ಟಿನ್ ಕಾಲೋನಿಯ ನಿವೃತ್ತ ದೈಹಿಕ ಶಿಕ್ಷಕ ಅಂಥೋಣಿ ಅವರ ಪುತ್ರ ಕೀರ್ತನ(25), ಚಾಮರಾಜನಗರ ಸಂಚಾರಿ ಪೊಲೀಸ್ ಎಎಸ್ ಐ ಶಿವಸ್ವಾಮಿ ಅವರ ಮಗ ಅನಿಲ್ (24) ಮೃತ ದುರ್ದೈವಿಗಳು.
ಅನಿಲ್ ಮೂರು ದಿನಗಳ ಹಿಂದೆಯಷ್ಟೆ ಉದ್ಯೋಗಕ್ಕೆ ಸೇರಿದ್ದು, ಗೆಳೆಯರಾದ ಕೀರ್ತನ, ಸುನೀಲ್, ದಿನಕರ್, ಹರ್ಷ ಮೊದಲಾದ ನಾಲ್ವರು ಸ್ನೇಹಿತರೊಂದಿಗೆ ಸೇರಿ ಧನಗೆರೆ ಕಟ್ಟೆ ಬಳಿಗೆ ತೆರಳಿದ್ದಾರೆ. ಅಲ್ಲಿನ ಕಾವೇರಿ ನದಿಯಲ್ಲಿ ಇಳಿದು ಈಜಲು ಮುಂದಾಗಿದ್ದಾರೆ. ಈ ವೇಳೆ ಒಬ್ಬ ನೀರಿಗೆ ಸಿಲುಕಿ, ಮತ್ತೊಬ್ಬ ಆತನನ್ನು ಕಾಪಾಡಲು ಹೋಗಿ ಇಬ್ಬರೂ ನೀರಿನ ಸೆಳವಿಗೆ ಸಿಲುಕಿ ಮುಳುಗಿದ್ದಾರೆ.[ಗುಂಡ್ಲುಪೇಟೆಯ ಪ್ರಿನ್ಸ್ ಹುಲಿ ಹತ್ಯೆ ಪ್ರಕರಣ: ಮೂವರ ಬಂಧನ]
ಆದರೆ, ಅವರನ್ನು ಕಾಪಾಡಲು ಸಾಧ್ಯವಾಗದೆ ಜೊತೆಗಿದ್ದ ಯುವಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೊಳ್ಳೇಗಾಲ ಗ್ರಾಮಾಂತರ ಠಾಣಾ ಸಿಪಿಐ ಅಮರ್ ನಾರಾಯಣ್ ಮತ್ತು ಎಸ್ ಐ ವನರಾಜು ಭೇಟಿ ನೀಡಿ, ಮೃತ ದೇಹವನ್ನು ಸರಕಾರಿ ಉಪವಿಭಾಗ ಶವಗಾರದಲ್ಲಿ ಪರೀಕ್ಷೆ ನಡೆಸಿ, ಆ ನಂತರ ಅವರ ಸಂಬಂಧಿಕರಿಗೆ ನೀಡಲಾಗಿದೆ.