ಹುತ್ತೂರಿನ ಗೋಶಾಲೆಯಲ್ಲಿ ಹತ್ತಾರು ಸಮಸ್ಯೆಗಳು!
ಚಾಮರಾಜನಗರ ಜಿಲ್ಲೆಯ ಹುತ್ತೂರಿನ ಗೋಶಾಲೆಯಲ್ಲಿ ಎರಡು ದಿನದಿಂದ ಮೇವು ವಿತರಿಸಿಲ್ಲ. ಎಚ್.ಎಸ್.ಮಹದೇವಪ್ರಸಾದ್ ಅಕಾಲಿಕ ಸಾವಿನಿಂದ ಅಧಿಕಾರಿಗಳು ಅಂತ್ಯಸಂಸ್ಕಾರ, ಶೋಕಾಚರಣೆಯಲ್ಲಿ ಪಾಲ್ಗೊಂಡು ಹೀಗಾಗಿರಬಹುದು. ರೈತರು ಪ್ರತಿಭಟನೆ ನಡೆಸಿದ್ದಾರೆ
ಚಾಮರಾಜನಗರ, ಜನವರಿ 6: ಮಳೆಯಿಲ್ಲದೆ ಬರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಗುಂಡ್ಲುಪೇಟೆ ತಾಲೂಕಿನ ಹುತ್ತೂರಿನಲ್ಲಿ ಆರಂಭಿಸಿರುವ ಗೋಶಾಲೆ ಸಮಸ್ಯೆಗಳಿಂದ ನರಳುತ್ತಿದ್ದು, ಮೇವು ವಿತರಿಸಿ ಎಂದು ರೈತರೇ ಪ್ರತಿಭಟನೆ ನಡೆಸುವ ಸ್ಥಿತಿಗೆ ಬಂದು ತಲುಪಿದೆ.
ಜಿಲ್ಲಾಡಳಿತವು ಪ್ರಾರಂಭಿಸಿದ ಗೋಶಾಲೆಯನ್ನು ಕೆಲ ಸಮಯದ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಉದ್ಘಾಟಿಸಿದ್ದರು. ಆದರೆ ಅವರ ಆಕಾಲಿಕ ಮರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅತ್ತಕಡೆ ಹೆಚ್ಚಿನ ಒತ್ತು ನೀಡಿತ್ತು. ಆದ್ದರಿಂದ ಮತ್ತು ಎರಡು ದಿನಗಳ ರಜೆ ಘೋಷಿಸಿದ್ದರಿಂದ ಈ ಎರಡು ದಿನಗಳಲ್ಲಿ ಗೋಶಾಲೆಯಲ್ಲಿ ಮೇವು ವಿತರಿಸಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.[ಸಾವಿನ ಮನೆಯಲ್ಲೂ ಕಳ್ಳರ ಕೈಚಳಕ, ಲಕ್ಷಾಂತರ ರುಪಾಯಿ ಖಲಾಸ್!]
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರೈತ ಸಂಘದ ಕಾರ್ಯಕರ್ತರು ಕೆಲ ಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಸಂಘದ ಜಿಲ್ಲಾ ಸಂಚಾಲಕ ಟಿ.ಎಸ್.ಶಾಂತಮಲ್ಲಪ್ಪ ಮಾತನಾಡಿ. ಗೋಶಾಲೆಯಲ್ಲಿ ಸುಮಾರು 10 ಟನ್ ಮೇವು ಸಂಗ್ರಹವಿದೆ. ಗೋಶಾಲೆಯ ಶುಚಿತ್ವದ ಕಾಮಗಾರಿ ನಡೆಸುವ ನೆಪದಿಂದ ದೂರದೂರುಗಳಿಂದ ಬಂದಿರುವ ಜಾನುವಾರುಗಳನ್ನು ಒಳಗೆ ಬಿಡದೆ ಗೋವುಗಳು ಹಸಿವಿನಿಂದ ಬಳಲುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೋಶಾಲೆ ಪ್ರಾರಂಭಿಸಿ, ಬರ ನಿರ್ವಹಣೆಗೆ ಮುಂದಾಗುವಂತೆ ರೈತ ಸಂಘವು ಒತ್ತಾಯಿಸಿದ್ದರೂ ಇದನ್ನು ನಿರ್ಲಕ್ಷಿಸಿ ಗೋಶಾಲೆ ನಡೆಸುತ್ತಿದ್ದಾರೆ ಎಂದು ದೂರಿದರು. ಕೂಡಲೇ ಜಾನುವಾರುಗಳನ್ನು ಒಳಗೆ ಬಿಟ್ಟು ಮೇವು ಹಾಗೂ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]
ಈ ನಡುವೆ ಜಾನುವಾರುಗಳನ್ನು ಗೋಶಾಲೆಯೊಳಗೆ ಸೇರಿಸಲು ಅವಕಾಶ ಮಾಡಿಕೊಡುವುದರೊಂದಿಗೆ ಮೇವು ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಕಂದಾಯಾಧಿಕಾರಿಗಳು ಭರವಸೆ ನೀಡಿದ ಮೇರೆಗೆ ರೈತ ಸಂಘ ಪ್ರತಿಭಟನೆ ಕೈಬಿಟ್ಟಿದೆ. ಜಿಲ್ಲಾಡಳಿತ ಗೋಶಾಲೆಗಳನ್ನು ಪ್ರಾರಂಭಿಸಿ, ಕೈ ತೊಳೆದುಕೊಳ್ಳದೆ ಸರಕಾರದ ಸದುದ್ದೇಶ ಈಡೇರಲು ಮತ್ತು ರೈತರ ಜಾನುವಾರಗಳ ರಕ್ಷಣೆಗೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.