ಚಾಮರಾಜನಗರ: ಮದುವೆಗೆಂದು ಹೊರಟ ಮೂವರು ಮಸಣ ಸೇರಿದರು
ಚಾಮರಾಜನಗರ, ಮೇ 08 : ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕೆಂಪಯ್ಯನಹಟ್ಟಿ ಗ್ರಾಮದ ಕರಿಯಪ್ಪ(51), ಮಹದೇವ(40), ನಾಗೇಂದ್ರ(14) ರಸ್ತೆ ಅವಘಡದಲ್ಲಿ ಮೃತಪಟ್ಟ ದುರ್ದೈವಿಗಳು. ಈ ಮೂವರು ಮೃತರು ಮದುವೆಗೆಂದು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೆಂಪಯ್ಯನಹಟ್ಟಿ ಗ್ರಾಮದ ಬಳಿ ಎದುರಿನಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಪರಿಣಾಮ ಮೂವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹನೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತೆರೆದ ಬಾವಿಗೆ ಬಿದ್ದು ಅಪರಿಚಿತ ಸಾವು: ಮತ್ತೊಂದು ಪ್ರಕರಣದಲ್ಲಿ ಚಾಮರಾಜನಗರ ಮಹದೇಶ್ವರರ ಬಡಾವಣೆ ಬಂಜಾರ ವಿದ್ಯಾಲಯ ಬಳಿಯಿರುವ ತೆರೆದ 200 ಅಡಿ ಆಳದ ಪಾಳು ಬಾವಿಗೆ ಅಪರಿಚಿತ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಈತ ಆಯತಪ್ಪಿ ಬಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದು, ಬಾವಿಯೊಳಗೆ ಬಿದ್ದ ರಭಸಕ್ಕೆ ವ್ಯಕ್ತಿಯ ಕಾಲಿನ ಮೂಳೆ ಮುರಿದಿದ್ದು, ತಲೆಗೆ ತೀವ್ರಪೆಟ್ಟಾಗಿ ಮೃತಪಟ್ಟಿದ್ದಾನೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾವಿಯೊಳಗೆ ಇದ್ದ ಅಪರಿಚಿತನ ಶವವನ್ನು ಹೊರತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ವಾರಸುದಾರರ ಬಗ್ಗೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.