ಉಪಚುನಾವಣೆ ಕಾವಿರುವ ಗುಂಡ್ಲುಪೇಟೆಯಲ್ಲಿ ಒಂದೇ ತಿಂಗಳು 3ರೈತರ ಆತ್ಮಹತ್ಯೆ
ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸೇರಿದಂತೆ ಇಡೀ ಮಂತ್ರಿಮಂಡಲ ಪ್ರಚಾರ ಮಾಡುತ್ತಿದೆ. ಅದೇ ಗುಂಡ್ಲುಪೇಟೆಯಲ್ಲಿ ಒಂದು ತಿಂಗಳಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುಂಡ್ಲುಪೇಟೆ, ಏಪ್ರಿಲ್ 7: ಸಾಲ ಬಾಧೆಯಿಂದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿಕ್ಕಮಾದಶೆಟ್ಟಿ (51) ಆತ್ಮಹತ್ಯೆ ಮಾಡಿಕೊಂಡವರು. ಈತ ಒಂದೂವರೆ ಎಕರೆ ಜಮೀನಿನಲ್ಲಿ ಹೈನುಗಾರಿಕೆ ಹಾಗೂ ಬೇಸಾಯ ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ ತಲಾ 50 ಸಾವಿರ ರುಪಾಯಿ ಬೆಲೆಬಾಳುವ 10 ಹಸುಗಳನ್ನು ಖರೀದಿಸಿ ಹೈನುಗಾರಿಕೆ ನಡೆಸುತ್ತಿದ್ದರು.
ಎರಡು ವರ್ಷದಿಂದ ಅಂತರ್ಜಲ ಕುಸಿತವಾಗಿ ನೀರೊದಗಿಸುತ್ತಿದ್ದ ಕೊಳವೆಬಾವಿ ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಹೊಸದಾಗಿ ಮೂರು ಕಡೆ ಕೊಳವೆಬಾವಿ ಕೊರೆಸಿದರೂ ನೀರು ದೊರಕಿರಲಿಲ್ಲ. ಪರಿಣಾಮವಾಗಿ ಹಸುಗಳಿಗೆ ಮೇವು ಹಾಗೂ ನೀರು ಒದಗಿಸಲಾಗದೆ ಎಲ್ಲ ಹಸುಗಳನ್ನು ತಲಾ ಮೂರು ಸಾವಿರ ರುಪಾಯಿಗೆ ಮಾರಾಟ ಮಾಡಿದ್ದರು.[ಗುಂಡ್ಲುಪೇಟೆ ಈ ಬಡಾವಣೇಲಿ ಶೌಚಾಲಯವೇ ಇಲ್ಲ, ಇದೇನಾ ಅಭಿವೃದ್ಧಿ?]
ಹಸುಗಳ ಖರೀದಿ ಹಾಗೂ ಕೊಳವೆಬಾವಿ ಕೊರೆಸಲು ಸುಮಾರು 7 ಲಕ್ಷ ರುಪಾಯಿಯನ್ನು ಸಾಲವಾಗಿ ಪಡೆದಿದ್ದರು. ಸಾಲಗಾರರಿಂದ ತಪ್ಪಿಸಿಕೊಳ್ಳಲು ಹಾಗೂ ಜೀವನ ನಿರ್ವಹಣೆಗಾಗಿ ಕೂಲಿಯನ್ನರಸಿ ಕುಟುಂಬ ಸಮೇತರಾಗಿ ಕೇರಳಕ್ಕೆ ತೆರಳಿದ್ದರು.
ಕೇರಳದಿಂದ ಏಪ್ರಿಲ್ 5ರ ರಾತ್ರಿ ಮನೆಗೆ ಹಿಂತಿರುಗಿದ ಅವರು, ಬಾಳೆಹಣ್ಣಿಗೆ ಕ್ರಿಮಿನಾಶಕ ಬೆರೆಸಿ, ಸೇವಿಸಿದ್ದಾರೆ. ಈ ಬಗ್ಗೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.[ಉಪಚುನಾವಣೆಯಲ್ಲಿ 'ಲಕ್ಷ್ಮಿ' ಕಟಾಕ್ಷ: ವಿವಾದದಲ್ಲಿ ಕಾಂಗ್ರೆಸ್ ನಾಯಕಿ!]
ಒಂದೇ ತಿಂಗಳಲ್ಲಿ ಮೂವರು ರೈತರು ಆತ್ಮಹತ್ಯೆ
ಕಳೆದ ಒಂದೇ ತಿಂಗಳಲ್ಲಿ ಸಾಲಬಾಧೆಯಿಂದ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕದ ವಿಷಯವಾಗಿದೆ. ಸತತ ಬರದಿಂದ ತತ್ತರಿಸಿರುವ ತಾಲೂಕಿನ ರೈತರು ಅಂತರ್ಜಲದ ಕುಸಿತ, ಕುಡಿಯುವ ನೀರಿನ ಸಮಸ್ಯೆ ನಡುವೆ ಸಾಲದ ಸುಳಿಯಲ್ಲಿ ನರಳುತ್ತಿದ್ದಾರೆ.
ರಾಜಕಾರಣಿಗಳಿಗೆ ಉಪಚುನಾವಣೆ ಮುಖ್ಯವಾದರೆ, ರೈತರಿಗೆ ಬದುಕೇ ದುಸ್ತರವಾಗಿದೆ. ಹಾಗಾಗಿ ಒಂದು ತಿಂಗಳಿಂದ ಸರಣಿಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರಗಿ ಗ್ರಾಮದ ಭೋಗಪ್ಪನ ನಾಗೇಶ್, ಕಗ್ಗಳದಹುಂಡಿ ನಾಗೇಶ್, ಇದೀಗ ಅಣ್ಣೂರುಕೇರಿಯ ಚಿಕ್ಕಮಾದಶೆಟ್ಟಿ ಸಾವನ್ನಪ್ಪಿದ್ದಾರೆ.[ಪೌಡರ್ ಹಾಕೊಳ್ಳಿ, ತಲೆ ಬಾಚ್ಕೊಳ್ಳಿ, ಕಡ್ಡಾಯವಾಗಿ ಮತಹಾಕಿ!]
ಸಾಲದ ಸುಳಿಗೆ ಸಿಲುಕಿರುವ ರೈತರ ಪರವಾಗಿ ಇನ್ನಾದರೂ ಸರಕಾರ ನಿಲ್ಲುವುದೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.