ಅಪಾಯಕ್ಕೆ ಆಹ್ವಾನ ಈ ವಿದ್ಯುತ್ ತಂತಿ!
ಚಾಮರಾಜನಗರ: ಅಪಾಯ ಬಂದ ಮೇಲೆ ನೋಡಿಕೊಳ್ಳೋಣ ಎನ್ನುವ ಜನಪ್ರತಿನಿಧಿಗಳ ಮನಸ್ಥಿತಿಗೆ ಒಂದು ಉತ್ತಮ ಉದಾಹರಣೆ ಈ ವಿದ್ಯುತ್ ತಂತಿ!
ಗುಂಡ್ಲುಪೇಟೆಯ ಬೇಗೂರು ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೆಯ ಗಣೇಶ ಚಿತ್ರಮಂದಿರದ ಮುಂಭಾಗದ ವಿದ್ಯುತ್ ಕಂಬದಲ್ಲಿನ ತಂತಿಗಳು ತುಂಡಾಗಿ ನೆಲಕ್ಕೆ ಬೀಳುವಂತಿದ್ದರೂ ಚೆಸ್ಕಾಂನ ಸಿಬ್ಬಂದಿ ಇತ್ತ ಅಪ್ಪಿ ತಪ್ಪಿಯೂ ಕಣ್ಣು ಹಾಯಿಸಿಲ್ಲ!
ಇದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದ್ದರೂ ಚೆಸ್ಕಾಂ ಸಿಬ್ಬಂದಿಗಳ ಕಣ್ಣಿಗೆ ಬೀಳದಿರುವುದು ಅಚ್ಚರಿಯೇ ಸರಿ. ಈಗಾಗಲೇ ವಿದ್ಯುತ್ ತಂತಿ ತುಂಡಾಗಿ ಬಿದ್ದು ಅನಾಹುತ ಸಂಭವಿಸಿರುವ ಘಟನೆಗಳು ಹಲವೆಡೆ ನಡೆದಿವೆ. ಅಲ್ಲದೆ ನಾವು ಹಲವು ಬಾರಿ ಚೆಸ್ಕಾಂ ಗೆ ದೂರು ನೀಡಿದ್ದರೂ ಚೆಸ್ಕಾಂ ಏಕೆ ಮೌನಕ್ಕೆ ಶರಣಾಗಿದೆ ಎಂಬುದು ಸ್ಥಳೀಯರ ಪ್ರಶ್ನೆ.
ತುಂಡಾಗುವಂತೆ ಇರುವ ವಿದ್ಯುತ್ ತಂತಿ ಹಾದುಹೋಗಿರುವ ಕಂಬದ ಬಳಿ ಬಸ್ ನಿಲ್ದಾಣವಿದ್ದರೆ, ಪಕ್ಕದಲ್ಲೇ ಟ್ಯಾಕ್ಸಿ ನಿಲ್ದಾಣವಿದೆ. ಇಲ್ಲಿ ಹಲವು ವಾಹನಗಳು ನಿಂತಿರುತ್ತವೆ. ಅಷ್ಟೇ ಅಲ್ಲ ಜನರು ಕೂಡ ಈ ತಂತಿ ಹಾದುಹೋಗಿರುವ ಸ್ಥಳದಲ್ಲೇ ನಡೆದಾಡುತ್ತಿರುತ್ತಾರೆ.
ಅಕಸ್ಮಾತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದರೆ ಆಗುವ ಪ್ರಾಣಹಾನಿ, ಅಗ್ನಿಅನಾಹುತಗಳಿಗೆ ಚೆಸ್ಕಾಂ ಹೊಣೆಯಾಗುತ್ತಾ ಎಂಬ ಪ್ರಶ್ನೆಯನ್ನು ಜನ ಮುಂದಿಡುತ್ತಿದ್ದಾರೆ. ಇನ್ನಾದರೂ ಚೆಸ್ಕಾಂನ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ, ವಿದ್ಯುತ್ ತಂತಿಯನ್ನು ಶೀಘ್ರವಾಗಿ ಬದಲಾಯಿಸಿ ಮುಂದೆ ಆಗಲಿರುವ ಅನಾಹುತವನ್ನು ತಪ್ಪಿಸಬೇಕಾಗಿದೆ.