ಗುಂಡ್ಲುಪೇಟೆಯ ಬೇಗೂರಿನ ಗುಜರಿ ಅಂಗಡಿ ಬೆಂಕಿಗಾಹುತಿ
ಚಾಮರಾಜನಗರ, ಅಕ್ಟೋಬರ್. 20 : ಗುಂಡ್ಲುಪೇಟೆಯ ಬೇಗೂರಿನ ಗುಜರಿ ಅಂಗಡಿಯೊಂದಕ್ಕೆ ಬುಧವಾರ ತಡರಾತ್ರಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು. ಇದರಿಂದಾಗಿ ಅಂಗಡಿ ಪಕ್ಕದ ಮನೆಗೆ ಹಾನಿ ಉಂಟಾಗಿದೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೇಗೂರು ಗ್ರಾಮದ ನಿವಾಸಿ ಮುದಾಸಿರ್ ಎಂಬುವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಅಕ್ಕಪಕ್ಕದ ಮನೆಯವರು ಗಮನಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ಮಾಹಿತಿ ನೀಡಿದ್ದಾರೆ.ಈ ಘಟನೆಯಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು. ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ರಾತ್ರಿ ವೇಳೆಯಲ್ಲಿ ಘಟನೆ ನಡೆದಿದ್ದರಿಂದ ಅಂಗಡಿಯಲ್ಲಿ ಯಾರೂ ಇರಲಿಲ್ಲ ಹೀಗಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮಹಮದ್ ಹುಸೇನ್ ಅವರು ಮನೆ ಕಟ್ಟಲು ಸಂಗ್ರಹಿಸಿದ್ದ ಸುಮಾರು 80 ಸಾವಿರ ರೂ. ಮೌಲ್ಯದ ಮರಮಟ್ಟುಗಳು, 2 ಬೈಕುಗಳು, ಗೃಹೋಪಯೋಗಿ ವಸ್ತುಗಳು, ಬಟ್ಟೆಗಳು ಹಾಗೂ ಮನೆಯಲ್ಲಿ ಸಾಕಿದ್ದ ಕೋಳಿಗಳು ಬೆಂಕಿಗೆ ಅಗ್ನಿಶಾಮಕದಳದವರು ಬರುವಷ್ಟರಲ್ಲಿಯೇ ಎಲ್ಲವೂ ಸುಟ್ಟು ಕರಕಲಾಗಿತ್ತು.
ಅಂಗಡಿಯ ಬೆಂಕಿ ಮಹಮದ್ ಹುಸೇನ್ ಎಂಬುವರ ಮನೆಗೆ ತಗುಲಿದ್ದು, ಅಪಾಯವನ್ನರಿತ ಗ್ರಾಮದ ಮಹಮದ್ ಪಾಷಾ ಅವರು ಮನೆಯೊಳಗಿದ್ದ ಸಿಲಿಂಡರ್ ಹಾಗೂ ಇತರೆ ವಸ್ತುಗಳನ್ನು ಹೊರತರುವಾಗ ಬಲಕೈಗೆ ಸುಟ್ಟಗಾಯಗಳಾಗಿವೆ.
ಬೆಂಕಿಯ ಶಾಖಕ್ಕೆ ಪಕ್ಕದ ಸುಬ್ರಹ್ಮಣ್ಯ ಎಂಬುವರ ಮನೆಯ ನೀರಿನ ಸರಬರಾಜು ಪೈಪ್ ಲೈನ್ ಗೆ ಹಾನಿಯಾಗಿದ್ದು ಮೋಟಾರ್ ಸಂಪಿನೊಳಗೆ ಮುಳುಗಿದೆ.
ಸ್ಥಳಕ್ಕೆ ಬೇಗೂರು ಪೊಲೀಸ್ ಠಾಣೆಯ ಪಿಎಸ್ ಐ ಮಂಜೇಗೌಡ, ನಾಡಕಚೇರಿಯ ಕಂದಾಯಾಧಿಕಾರಿ ಮಹದೇವಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.