ಬಂಡೀಪುರದಲ್ಲಿ ಹುಲಿಗಳ ದರ್ಶನ, ಪ್ರವಾಸಿಗರಿಗೆ ರೋಮಾಂಚನ
ಗುಂಡ್ಲುಪೇಟೆ, ಜನವರಿ 24: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಒಣಗಿ, ಸೊರಗಿ ಹೋಗಿರುವ ಅರಣ್ಯ ಕಂಡು ಬರುತ್ತಿದೆ. ಆದರೆ ಸೋಮವಾರ ಸಫಾರಿಗೆ ತೆರಳಿದವರಿಗೆ ಅಚ್ಚರಿ ಕಾದಿತ್ತು. ಕಾರಣ ಒಣಗಿದ ಪೊದೆಗಳ ನಡುವೆ ಬಂಡೀಪುರ ಅಭಯಾರಣ್ಯದ ರಾಯಭಾರಿ ಪ್ರಿನ್ಸ್ ತನ್ನ ಸಂಗಾತಿಯೊಂದಿಗೆ ದರ್ಶನ ನೀಡಿತು.
ಆತ ನೀಡಿದ ಭಂಗಿಯಿಂದ ಖುಷಿಗೊಂಡ ಪ್ರವಾಸಿಗರು ಮನಸೋ ಇಚ್ಛೆ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಆ ನಂತರ ಸಂಗಾತಿಯೊಂದಿಗೆ ಪೊದೆಯೊಳಗೆ ಹೋದ ಪ್ರಿನ್ಸ್ ಅಲ್ಲಿಂದಲೇ ಕ್ಯಾಮೆರಾದತ್ತ ಕಣ್ಣು ಹಾಯಿಸಿ ತುಂಟ ನೋಟ ಬೀರಿದ್ದಾನೆ. ಈ ದೃಶ್ಯಗಳನ್ನೆಲ್ಲ ಒಡಿಶಾ ಮೂಲದ ಪ್ರವಾಸಿ ಅಂಜರುಸ್ಸ್ ಹಾಗೂ ಸ್ನೇಹಿತರು ತಾವು ತೆರಳಿದ್ದ ವ್ಯಾನ್ ನಿಂದಲೇ ಸೆರೆ ಹಿಡಿದಿದ್ದಾರೆ.[ಕೊಡಗಿನಲ್ಲಿ ಜನ-ಜಾನುವಾರನ್ನು ಕಾಡಿದ್ದ ಹುಲಿ ದುರ್ಮರಣ]
ಅರಣ್ಯದೊಳಗಿನಿಂದ ರಾಜ ಗಾಂಭೀರ್ಯದಲ್ಲಿ ನಡೆದು, ವಾಹನದ ಹತ್ತಿರಕ್ಕೆ ಬಂದು ದುರುಗುಟ್ಟಿ ನೋಡುತ್ತಾ ನಿಂತಿದ್ದ ಆ ಕ್ಷಣವನ್ನು ನೆನಪಿಸಿಕೊಂಡ ಪ್ರವಾಸಿಗರು ಎರಡು ಹುಲಿಗಳನ್ನು ಒಟ್ಟಿಗೆ ನೋಡಿದ ಖುಷಿಯಲ್ಲಿ ಹಿಂತಿರುಗಿದ್ದಾರೆ.