ಕುಡುಕರ ಹಾವಳಿಯಿಂದ ಹೆದ್ದಾರಿ ರೈತರಿಗೆ ಸಂಕಷ್ಟ!
ಚಾಮರಾಜನಗರ, ಜುಲೈ 29 : ಸುಪ್ರಿಂಕೋರ್ಟ್ ಆದೇಶದನ್ವಯ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿದ್ದ ಮದ್ಯದಂಗಡಿಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ಈ ಕಾರಣದಿಂದಾಗಿ ಈಗ ಅಕ್ರಮ ಮದ್ಯ ಮಾರಾಟ ಹಳ್ಳಿಗಳಲ್ಲಿ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದ್ದು, ಜಮೀನು, ರಸ್ತೆ ಬದಿಗಳ ಖಾಲಿ ಜಾಗಗಳು ಮದ್ಯ ಪಾನಿಗಳ ಅಡ್ಡೆಯಾಗುತ್ತಿವೆ.
ರಸ್ತೆ ಬದಿಯಲ್ಲಿ ಕುಡಿದು ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆಯುತ್ತಿರುವುದು ಅಲ್ಲಲ್ಲಿ ಕಾಣುತ್ತಿದೆ. ಕೆಲವರು ನೇರವಾಗಿ ಜಮೀನಿಗೆ ಮದ್ಯದ ಬಾಟಲಿಗಳನ್ನು ಎಸೆದು ತೊಂದರೆ ಕೊಡುತ್ತಿದ್ದಾರೆ. ಇನ್ನು ಕೆಲವರು ಕುಡಿದ ಮತ್ತಿನಲ್ಲಿ ಬಾಟಲಿಯನ್ನು ಒಡೆದು ಹಾಕುತ್ತಿದ್ದು ಇದರಿಂದ ಕೃಷಿ ಮಾಡಲು ಕಷ್ಟವಾಗುತ್ತಿದೆ ಎಂಬ ಆರೋಪ ರೈತರದ್ದಾಗಿದೆ.
ಸುಪ್ರಿಂಕೋರ್ಟ್ ಆದೇಶದನ್ವಯ ಗುಂಡ್ಲುಪೇಟೆ ಬಳಿಯ ಬೇಗೂರು ಗ್ರಾಮದಲ್ಲಿ ಬಹಳಷ್ಟು ಮದ್ಯದಂಗಡಿ ಮುಚ್ಚಿದ್ದು, ಪಾನಪ್ರಿಯರು ಕಕ್ಕಾಬಿಕ್ಕಿಯಾಗಿದ್ದಾರೆ. ಇಲ್ಲಿ ಎಂಎಸ್ಐಎಲ್ ಮದ್ಯದಂಗಡಿ ಮಾತ್ರ ತೆರೆದಿರುವುದರಿಂದ ಹೋಬಳಿಯ ಎಲ್ಲ ಮದ್ಯಪ್ರಿಯರು ಇಲ್ಲಿಗೆ ಆಗಮಿಸಿ ಬೆಳಿಗ್ಗೆಯಿಂದ ಸಂಜೆಯವರೆಗೂ ಮದ್ಯದಂಗಡಿ ಮುಂದೆ ನಿಂತು ಮದ್ಯ ಖರೀದಿಸಿ ಪಕ್ಕದಲ್ಲೇ ಇರುವ ಖಾಲಿ ಜಾಗ, ಜಮೀನಿನ ಬಳಿ ಮದ್ಯ ಸೇವಿಸುವುದು ಸಾಮಾನ್ಯ ದೃಶ್ಯವಾಗಿದೆ.
ಮದ್ಯ ಸೇವಿಸಿ ಅವರ ಪಾಡಿಗೆ ಹೋಗದೆ ಬಾಟಲಿಯನ್ನು ಪಕ್ಕದ ಜಮೀನಿಗೆ ಎಸೆಯುವುದು ರೈತರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇನ್ನು ಕುಡಿದ ಮತ್ತಿನಲ್ಲಿ ಗಲಾಟೆಗಳು ಕೂಡ ಆಗಾಗ್ಗೆ ನಡೆಯುತ್ತಿವೆ. ಬಾಟಲಿಯನ್ನು ಪುಡಿಪುಡಿ ಮಾಡುವುದರಿಂದ ಚಪ್ಪಲಿ ಇಲ್ಲದೆ ಅಡ್ಡಾಡುವವರು ನಡೆದಾಡಲು ಭಯವಾಗುತ್ತಿದೆ ಎನ್ನುತ್ತಿದ್ದಾರೆ.
ಮತ್ತೊಂದೆಡೆ ಲಭ್ಯವಿರುವ ಮದ್ಯದಂಗಡಿಗಳಿಂದ ಮದ್ಯ ಖರೀದಿಸಿ ಹಳ್ಳಿಗಳಲ್ಲಿ ಪಾನಪಿಯರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುವವರಿಗೇನು ಕೊರತೆಯಿಲ್ಲ. ಗೂಡಂಗಡಿಗಳಲ್ಲಿ ಮೊಟ್ಟೆ ಮಾಂಸ ಮಾರಾಟವೂ ನಡೆಯುತ್ತಿದ್ದು, ಅಲ್ಲಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದರಿಂದ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮದ್ಯ ಹಾಗೂ ಮಾಂಸವನ್ನು ಖರೀದಿಸಿ ತಂದು ಜಮೀನುಗಳ ಬಳಿ ಪಾರ್ಟಿ ಮಾಡುತ್ತಿರುವುದರಿಂದ ಹೆಂಗಸರು ಮಕ್ಕಳು ಜಮೀನಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಪಟ್ಟಣ ವ್ಯಾಪ್ತಿಯಿಂದ ವಾಹನಗಳಲ್ಲಿ ಬರುವ ಪ್ರವಾಸಿಗರು ಕೂಡ ಗ್ರಾಮೀಣ ಪ್ರದೇಶದಲ್ಲಿ ಉಂಡು, ಮದ್ಯ ಸೇವಿಸಿ ತಟ್ಟೆ, ಬಾಟಲಿ, ಪ್ಲಾಸ್ಟಿಕ್ ಕವರ್ಗಳನ್ನು ಎಸೆದು ಹೋಗುತ್ತಿರುವುದರಿಂದ ಜಮೀನುಗಳು ಕಸದ ತೊಟ್ಟಿಯಾಗುತ್ತಿವೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಇದಕ್ಕೊಂದು ಇತಿಶ್ರೀ ಹಾಡದೆ ಹೋದರೆ ಹಳ್ಳಿಗಳಿಗೆ ಉಳಿಗಾಲವಿಲ್ಲ.