ಚಾಮರಾಜನಗರ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶ
ಚಾಮರಾಜನಗರ, ಜೂನ್ 3: ತಾಲೂಕಿನ ಹಂಗಳ ನಾಡ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಕೆಲವು ಸಿಬ್ಬಂದಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೆ ಉದ್ದಟತನ ತೋರುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.
ಸಮೀಪದ ತೆರಕಣಾಂಬಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ದೂರು ನೀಡಿದ್ದು, ಅಧಿಕಾರಿಗಳು, ಸೇರಿದಂತೆ ಕಂಪ್ಯೂಟರ್ ಆಪರೇಟರ್, ಸಿಬ್ಬಂದಿ ಯಾವುದೇ ರೀತಿಯ ಕೆಲಸ ಮಾಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.[ಚಾಮರಾಜನರ: ಬೇವರು ಸುರಿಸಿ ಬೆಳೆದಿದ್ದ ಹತ್ತಿ ಬೆಳೆ ದುಷ್ಕರ್ಮಿಗಳಿಂದ ನಾಶ]
ಹಂಗಳ ಹೋಬಳಿಯ ನಾಡಕಚೇರಿಯ ಕಂದಯಾಧಿಕಾರಿ ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂಪ್ಯೂಟರ್ ಅಪರೇಟರ್ ಸುಮಾರು ಏಳು ವರ್ಷದಿಂದ ನಾಡಕಚೇರಿಯಲ್ಲೆ ಕರ್ತವ್ಯ ನಿರ್ವಹಿಸುತ್ತಿದು ಇವರು ಸರ್ಕಾರದ ಯೋಜನೆಯಾದ ನೆಮ್ಮದಿ ಕೇಂದ್ರ ಸ್ಥಾಪನೆಯಾದಾಗಿನಿಂದಲೂ ಸ್ವಗ್ರಾಮದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರೊಂದಿಗೆ ಸನ್ನಡತೆಯಿಂದ ವರ್ತಿಸುತ್ತಿಲ್ಲ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಹಂಗಳ ಗ್ರಾಮದ ಸ್ಥಳೀಯರು ಅವರಿಗೆ ಗೊತ್ತಿರುವ ಮತ್ತು ಪರಿಚಯ ಇರುವುದರಿಂದ ಕೆಲವು ಪರಿಚಿತರ ಕೆಲಸಗಳನ್ನು ಮಾಡಿಕೊಡುತ್ತಾರೆ ಉಳಿದಂತೆ ಸಾಲುಗಟ್ಟಿ ನಿಲ್ಲಬೇಕಾಗಿದೆ. ಈಗ ಶಾಲಾ ದಿನಗಳು ಆರಂಭವಾಗಿರುವುದರಿಂದ, ಕೃಷಿ ಚಟುವಟಿಕೆಗಳಿಗೆ ಬೇಕಾದ ಆರ್ಟಿಸಿ, ಜಾತಿ ಪ್ರಮಾಣ, ಆದಾಯ ಪ್ರಮಾಣ ಪತ್ರ, ವಿಧವಾವೇತನ, ವೃದ್ಧಾಪ್ಯವೇತನ ವ್ಯವಸಾಯ ದೃಢೀಕರಣ ಪತ್ರ, ಸಣ್ಣ ಹಿಡುವಳಿದಾರ ಪತ್ರ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ನಾಡಕಚೇರಿಗೆ ಪ್ರತಿನಿತ್ಯ ನೂರಾರು ಜನ ತೆರಳುತ್ತಿದ್ದು, ಸಕಾಲಕ್ಕೆ ಸಿಗದೆ ಪರದಾಡುವಂತಾಗಿದೆ.
ಈ ಕುರಿತಂತೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಹಲವು ಬಾರಿ ರಾಜಸ್ವ ನಿರೀಕ್ಷಕರು ಮತ್ತು ತಹಸೀಲ್ದಾರ್ ಗಮನಕ್ಕೂ ತಂದರೂ ಪ್ರಯೋಜನವಾಗದೆ ಜನ ಸಂಪರ್ಕ ಸಭೆಯಲ್ಲಿ ದೂರು ನೀಡಲಾಗಿದೆ ಎನ್ನಲಾಗಿದೆ.