ಗಂಡು ಸಂತಾನಕ್ಕಾಗಿ ರಥಕ್ಕೆ ಹಣ್ಣು ಎಸೆದ ನವದಂಪತಿ
ಚಾಮರಾಜನಗರ, ಜುಲೈ 19 : ಚಾಮರಾಜನಗರದಲ್ಲಿ ಆಷಾಢ ಮಾಸದ ಪ್ರಸಿದ್ಧ ಚಾಮರಾಜೇಶ್ವರ ರಥೋತ್ಸವ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಚಾಮರಾಜೇಶ್ವರನಿಗೆ ಜಯಘೋಷ ಕೂಗಿ ಹಣ್ಣು-ಜವನ ಎಸೆದು ಸಂತೃಪ್ತರಾದರು.
ಪ್ರತಿ ವರ್ಷದಂತೆ ಆಷಾಢ ಮಾಸದ ಪೌರ್ಣಮಿಯಂದು ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ನಡೆಯುತ್ತೆ. ಅದೇ ರೀತಿಯಾಗಿ ಈ ಬಾರಿಯೂ ಮಂಗಳವಾರ ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ಜರುಗಿತು.
ಬೆಳಗ್ಗೆ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಹರ್ಷೋದ್ಘಾರದೊಂದಿಗೆ ನವ ದಂಪತಿಗಳು ಹಣ್ಣು ಜವನ ಹಿಡಿದು, ಭಗವಂತನನ್ನು ಭಕ್ತಿಯಿಂದ ಸ್ಮರಿಸುತ್ತಾ ರಥಕ್ಕೆ ಹಣ್ಣು ಎಸೆದು ಪುನೀತಭಾವ ತಾಳಿದರು.
Read also : ಆಷಾಢದಲ್ಲಿ ನಡೆಯುವ ಚಾಮರಾಜೇಶ್ವರ ರಥೋತ್ಸವದ ಬಗ್ಗೆ ತಿಳಿಯಿರಿ
ಜೇಷ್ಠ ಮಾಸದಲ್ಲಿ ವಿವಾಹವಾದ ನವ ದಂಪತಿಗಳು ಆಷಾಢ ಮಾಸದ ಈ ರಥೋತ್ಸವದಲ್ಲಿ ಹಣ್ಣು ಜವನ ಎಸೆದು ಪ್ರಾರ್ಥಿಸಿದರೆ ಗಂಡು ಸಂತಾನ ಲಭಿಸುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ. ಈ ಹಿನ್ನಲೆಯನ್ನು ಅರಿತಿರುವ ನವ ದಂಪತಿಗಳು ಚಾಮರಾಜೇಶ್ವರ ರಥೋತ್ಸವದಲ್ಲಿ ಬಂದು ದೇವರನ್ನು ಪ್ರಾರ್ಥಿಸುವುದುಂಟು.
Read also : 'ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ
ರಥೋತ್ಸವ ಸಂದರ್ಭ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು. ಅಲ್ಲದೆ ದೇವಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು. ಯಾವುದೇ ರೀತಿಯ ಅಹಿತರ ಘಟನೆ ನಡೆಯದೆ ಶಾಂತಿಯಿಂದ ರಥೋತ್ಸವ ಯಶಸ್ವಿಯಾಗಿ ಜರುಗಿತು.