ವೈನಾಡಲ್ಲಿ ಮಳೆ: ಬಂಡೀಪುರದ ಮೂಲೆಹೊಳೆಯಲ್ಲಿ ಜೀವಕಳೆ
ಚಾಮರಾಜನಗರ, ಜೂನ್ 28 : ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಯೋಜನೆಯ ವ್ಯಾಪ್ತಿಯಲ್ಲಿ ಹರಿಯುವ ಮೂಲೆಹೊಳೆಗೆ ಜೀವಕಳೆ ಬಂದಿದೆ.
ಬೇಸಿಗೆಯಲ್ಲಿ ಬತ್ತಿಹೋಗಿ ಜನಜಾನುವಾರು ಹಾಗೂ ವನ್ಯಪ್ರಾಣಿಗಳು ಸಂಕಟ ಪಡುವಂತಾಗಿದ್ದ ಹೊಳೆಯಲ್ಲಿ ನೀರು ಹರಿಯಲಾರಂಭಿಸಿದ್ದು, ಈ ವ್ಯಾಪ್ತಿಯ ಜನ ಮತ್ತು ಪ್ರಾಣಿಗಳು ನೆಮ್ಮದಿ ಪಡುವಂತಾಗಿದೆ. ಮೂಲೆಹೊಳೆ ವಿವಿಧ ರೀತಿಯಲ್ಲಿ ಉಪಯುಕ್ತವಾಗಿದ್ದು, ಹಲವರು ಇದನ್ನೇ ಕುಡಿಯಲು ಮತ್ತು ಕೃಷಿಗೆ ಬಳಸುತ್ತಿದ್ದಾರೆ.
ಕಳೆದ ಬಾರಿ ಮಳೆಯಾಗದೆ ಬರ ಕಾಣಿಸಿಕೊಂಡ ಪರಿಣಾಮ ನೀರಿನ ಹರಿವು ಕಡಿಮೆಯಾಗಿತ್ತಲ್ಲದೆ, ಬೇಸಿಗೆ ದಿನಗಳಲ್ಲಿ ಬತ್ತಿಹೋಗಿತ್ತು. ಇದೀಗ ಕೇರಳದ ವೈನಾಡಿನಲ್ಲಿ ಮಳೆ ಸುರಿಯಲಾರಂಭಿಸಿರುವುದರಿಂದ ಮೂಲೆಹೊಳೆಯಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ನೀರಿಲ್ಲದೆ ನೀರಿನಾಶ್ರಯವನ್ನರಿಸಿಕೊಂಡ ದೂರ ಹೋಗಿದ್ದ ವನ್ಯಪ್ರಾಣಿಗಳು ಇತ್ತ ಮರಳುತ್ತಿವೆ.
ಕೊಡಗಿನಲ್ಲಿ ಬಿರುಸಾದ ಮುಂಗಾರು: ಭಾಗಮಂಡಲದಲ್ಲಿ ಉಕ್ಕಿದ ಕಾವೇರಿ
ಕೇರಳದ ವೈನಾಡಿನಿಂದ ಹರಿದುಬರುವ ಮೂಲೆಹೊಳೆಯು ಬಂಡೀಪುರ ಹುಲಿ ಯೋಜನೆಯ ಮೂಲೆಹೊಳೆ, ಮದ್ದೂರು, ಕಲ್ಕೆರೆ, ಹೆಡಿಯಾಲ ವಲಯಗಳ ವನ್ಯಜೀವಿಗಳಿಗೆ ನೀರಿನ ದಾಹ ತಣಿಸುತ್ತಿರುವುದಲ್ಲದೆ, ಈ ಹೊಳೆಯ ತೀರದ ರಾಂಪುರದಲ್ಲಿ ಸಾಕಾನೆ ಶಿಬಿರವಿದ್ದು ಇಲ್ಲಿರುವ 21 ಆನೆಗಳನ್ನು ಇದೇ ಹೊಳೆಯಲ್ಲಿ ಸ್ನಾನ ಮಾಡಿಸಲಾಗುತ್ತದೆ.
ಸಾಮಾನ್ಯವಾಗಿ ಈ ಹೊಳೆ ಬತ್ತುವುದು ಅಪರೂಪವೇ. ಆದರೆ, ಈ ಬಾರಿ ಹೊಳೆಯಲ್ಲಿ ನೀರು ಕಾಣಿಸಲಿಲ್ಲ. ಇದಕ್ಕೆ ಕಾರಣ ಕಳೆದ ವರ್ಷ ವೈನಾಡಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗಿದ್ದರಿಂದ ಬೇಸಿಗೆಯಲ್ಲಿ ಹೊಳೆಗೆ ಮರಳಿನ ಮೂಟೆಯ ತಾತ್ಕಾಲಿಕ ಕಟ್ಟೆ ಕಟ್ಟಿ ನೀರನ್ನು ವೈನಾಡಿನ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿತ್ತು.
ಹೀಗಾಗಿ ನೀರು ಹರಿದು ಬರದೆ ನದಿ ಒಣಗಿ ಹೋಗಿತ್ತು. ಆದರೆ ಇದೀಗ ಕೇರಳದಲ್ಲಿ ಮುಂಗಾರು ಬಿರುಸುಗೊಂಡಿದ್ದರಿಂದ ನೀರು ಹರಿದು ಬರುವಂತಾಗಿದೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಟಿ, ಆನೆಗಳಂಥ ದೈತ್ಯ ಪ್ರಾಣಿಗಳು ಈ ವ್ಯಾಪ್ತಿಯಿಂದ ಕಬಿನಿ ಹಿನ್ನೀರಿನತ್ತ ವಲಸೆ ಹೋಗಿದ್ದವು. ಇದೀಗ ಮೂಲೆಹೊಳೆ ತುಂಬಿ ಹರಿಯುತ್ತಿದ್ದಂತೆಯೇ ಪ್ರಾಣಿಗಳು ಮರಳುತ್ತಿರುವುದು ಕಂಡು ಬರುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.