ಚಾಮರಾಜನಗರದಲ್ಲಿ ಏನಿದು ಮೃತ್ತಿಕಾ ಪೂಜೆ?
ಚಾಮರಾಜನಗರ, ಆಗಸ್ಟ್ 8: ಬಹಳಷ್ಟು ಜನಕ್ಕೆ ಮೃತ್ತಿಕಾ ಪೂಜೆಯ ಹೆಸರು ಕೇಳಿದಾಕ್ಷಣ ಇದ್ಯಾವುದಪ್ಪಾ ನಾವು ಕೇಳರಿಯದ ಪೂಜೆ ಎಂದು ಅಚ್ಚರಿಯಾಗಬಹುದು. ಆದರೆ ಈ ಪೂಜೆಯ ಬಗ್ಗೆ ತಿಳಿದುಕೊಂಡರೆ ಕೃಷ್ಣನ ಮೊಸರು ಕುಡಿಕೆಗೆ ನಮ್ಮ ಹಿರಿಯರು ಎಷ್ಟೊಂದು ಪ್ರಾಧಾನ್ಯತೆ ನೀಡಿದ್ದರು ಎಂಬುದು ಗೊತ್ತಾಗುತ್ತದೆ.
ಚಾಮರಾಜನಗರದ ಶಿವಪುರ ಗ್ರಾಮದಲ್ಲಿ ವಾನರನಿಗೊಂದು ದೇಗುಲ
ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಮೃತ್ತಿಕಾಪೂಜೆಯನ್ನು ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ಈ ಪೂಜೆಯನ್ನು ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮೊಸರು ಮಡಿಕೆ ಒಡೆಯುವ ಉತ್ಸವದ ಮಡಿಕೆ ತಯಾರಿಕೆ ಪೂರ್ವದಲ್ಲಿ ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ನಡೆಸಲಾಗುತ್ತದೆ.
ಪ್ರತಿವರ್ಷವೂ ಈ ಪೂಜೆ ನಡೆಯುತ್ತದೆ. ವಿಶೇಷವಾಗಿ ಅಲಂಕರಿಸಿದ್ದ ಮಣ್ಣಿಗೆ ಶ್ರೀಕೃಷ್ಣ ಅಷ್ಟೋತ್ತರ ಪೂಜೆ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ. ಆ ನಂತರ ಮಡಿಕೆ ತಯಾರಿಸುವ ಕಾರ್ಯವು ಸಾಂಗವಾಗಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಹಿರಿಯರು ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹೇಗೆ ಆಚರಿಸುತ್ತಿದ್ದರು. ಮತ್ತು ಎಷ್ಟೊಂದು ಪ್ರಾಮುಖ್ಯತೆ ನೀಡುತ್ತಿದ್ದರು ಎಂಬುದಕ್ಕೆ ಈ ಪೂಜೆ ಸಾಕ್ಷಿಯಾಗಿದೆ. ಎಲ್ಲೋ ಸಿಕ್ಕ ಮಣ್ಣಿನ ಮಡಿಕೆ ತಂದು ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗೆ ಬಳಸದೆ ತಾವೇ ಶಾಸ್ತ್ರೋಕ್ತವಾಗಿ ಮೊಸರು ಕುಡಿಕೆ ಒಡೆಯುವ ಆಟಕ್ಕೆಂದೇ ಮಡಿಕೆಯನ್ನು ತಯಾರು ಮಾಡುತ್ತಿದ್ದರು ಎಂಬುದಕ್ಕೆ ಈ ಸಂಪ್ರದಾಯ ಸಾಕ್ಷಿಯಾಗಿದೆ.
ಈ ಕುರಿತಂತೆ ಮಾತನಾಡಿ ಮಾಹಿತಿ ನೀಡಿದ ಗ್ರಾಮದ ಮುಖಂಡರಾದ ಗೌಡಿಕೆ ಮಾದಪ್ಪ ಅವರು, ಚಾಮರಾಜನಗರದ ಮೊಸರು ಮಡಿಕೆ ಒಡೆಯುವ ಉತ್ಸವ ಮನೆ ಮನೆ ಮಾತಾಗಿದೆ. ಶ್ರೀ ಕೃಷ್ಣನ ಉತ್ಸವಕ್ಕೆ ಮೊಸರು ಮಡಿಕೆಯನ್ನು ಹೆಗ್ಗೊಠಾರ ಗ್ರಾಮದಿಂದ ನಂಜಪ್ಪ ಎಂಬುವರು ಸಿದ್ಧಪಡಿಸಿ ಕಳುಹಿಸುತ್ತಿದ್ದು, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪೂಜಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಶುಭಕೋರುವುದಾಗಿ ಹೇಳಿದರು.
ಇದೇ ವೇಳೆ ಮೃತ್ತಿಕಾ ಪೂಜೆ ನೆರವೇರಿಸಿ ಮಾತನಾಡಿದ ಆಚಾರ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್ ಅವರು ಮಣ್ಣು ನಾಡಿನ ಸಂಸ್ಕೃತಿಯ ದಿವ್ಯಶಕ್ತಿಯಾಗಿದೆ. ನಿರ್ಲಿಪ್ತವಾಗಿ ಮಣ್ಣು ಸದಾ ಕಾಲ ಸದ್ಗುಣ ಸಂಪನ್ನವಾಗಿ ಪ್ರತಿ ಜೀವಿಗೂ ಶಕ್ತಿ ನೀಡುತ್ತದೆ. ಮಣ್ಣಿನಂತಹ ಸೇವೆಯ ಅಂಶ ಮಾನವರಲ್ಲೂ ಸದಾ ಜಾಗೃತವಾಗಬೇಕೆಂದರು.
ಶ್ರೀಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ, ಸೇರಿದಂತೆ ಹಲವರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.