ನೀರಿಗಾಗಿ ಕಾಲಿಗೆ ಬಿದ್ದರೂ ಸಮಸ್ಯೆ ಪತ್ರಕರ್ತರಿಂದ ಅಂತಾರೆ ಸಚಿವರು
ಕೊಡಸೋಗೆ ಗ್ರಾಮದಲ್ಲಿ ಖಾಲಿ ಬಿಂದಿಗೆ ಹಿಡಿದ ಜನರು ತೊಂದರೆ ಹೇಳುತ್ತಿದ್ದರು. ಫೋಟೋ ತೆಗೆಯಲು ಮುಂದಾದ ವರದಿಗಾರನಿಗೆ ಸಚಿವರು ರೇಗಿದರು. ಸಮಸ್ಯೆಗಳಿಲ್ಲದಿದ್ದರೂ ಪತ್ರಿಕೆಯವರೇ ನೀರಿನ ಕೊರತೆಯಿದೆ ಎಂದು ಬಿಂಬಿಸುತ್ತಿದ್ದಾರೆ ಎಂದರು.
ಗುಂಡ್ಲುಪೇಟೆ, ಅಕ್ಟೋಬರ್ 22: ಸಚಿವ ಎಚ್.ಎಸ್.ಮಹದೇವಪ್ರಸಾದ್ ವಿವಿಧ ಗ್ರಾಮಗಳ ಕೆರೆಗಳ ವೀಕ್ಷಣೆಗೆ ಅಧಿಕಾರಿಗಳ ಜತೆಗೆ ತೆರಳಿದ್ದರು. ಆಗ ಬಹತೇಕ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆಯ ಸಹಜ ದರ್ಶನ ಆಯಿತು. ಜನರು ಖಾಲಿ ಬಿಂದಿಗೆ ಹಿಡಿದು ಸಚಿವರೊಂದಿಗೆ ಸಂಕಷ್ಟ ಹೇಳಿಕೊಳ್ಳುತ್ತಿದ್ದರು. ಆ ದೃಶ್ಯ ಸೆರೆ ಹಿಡಿಯಲು ಮುಂದಾದ ಮಾಧ್ಯಮ ವರದಿಗಾರನ ಮೇಲೆ ಎರಗಿದ ಘಟನೆ ಶುಕ್ರವಾರ ನಡೆಯಿತು.
ತಾಲೂಕಿನ ಕರಕಲಮಾದಹಳ್ಳಿ ಗ್ರಾಮದಲ್ಲಿ ಮಹಿಳೆಯರು ಕುಡಿಯುವ ನೀರು ಪೂರೈಸುವಂತೆ ಕಾಲಿಗೆ ಬಿದ್ದು ಬೇಡಿಕೊಂಡರು. ಇನ್ನು ಪುರುಷರು ಕೆರೆಗಳಿಗೆ ನೀರು ತುಂಬಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಕಾಲಿಗೆ ಬಿದ್ದರು. ಯರಿಯೂರು, ಸೋಮನಪುರ ಗ್ರಾಮಗಳಲ್ಲಿಯೂ ಜನರು ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.[ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ: ವಿದ್ಯುತ್ ತಾಕಿ ವ್ಯಕ್ತಿ ಸಾವು]
ಕೊಡಸೋಗೆ ಗ್ರಾಮಗಳಲ್ಲಿ ಖಾಲಿ ಬಿಂದಿಗೆಗಳನ್ನು ಹಿಡಿದ ಜನರು ಕುಡಿಯುವ ನೀರು ಹಿಡಿಯಲು ತಾವು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮನವರಿಕೆ ಮಾಡಿದರು. ಗ್ರಾಮದಲ್ಲಿ ನೀರಿನ ಲಭ್ಯತೆಯಿದ್ದರೂ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಪುರುಷರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರು ಹಿಡಿಯುವುದನ್ನೇ ಕಾಯಕ ಮಾಡಿಕೊಳ್ಳಬೇಕಾಗಿದೆ ಎಂದು ಅಳಲು ತೋಡಿಕೊಂಡರು.
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಗ್ರಾಮಗಳಿಗೆ ಹೊಸದಾಗಿ ಕೊಳವೆ ಬಾವಿ ಕೊರೆಸುವಂತೆ ಸ್ಥಳದಲ್ಲಿಯೇ ಇದ್ದ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಚಿವ ಮಹದೇವಪ್ರಸಾದ್ ಆದೇಶ ನೀಡಿದರು.[ನಗರಸಭೆ ಸದಸ್ಯರ ಮಧ್ಯಸ್ಥಿಕೆ, ಮನೆ ಬಿಟ್ಟು ಬಂದ ಪ್ರೇಮಿಗಳಿಗೆ ಮದುವೆ]
ಕೊಡಸೋಗೆ ಗ್ರಾಮದಲ್ಲಿ ಖಾಲಿ ಬಿಂದಿಗೆಗಳನ್ನು ಹಿಡಿದ ಜನರು ಸಚಿವರಿಗೆ ತಮ್ಮ ತೊಂದರೆ ಹೇಳುತ್ತಿದ್ದರು. ಇದನ್ನು ಫೋಟೋ ತೆಗೆಯಲು ಮುಂದಾದ ವರದಿಗಾರನಿಗೆ ಸಚಿವರು ರೇಗಿದರು. ಎಲ್ಲಿಯೂ ಸಮಸ್ಯೆಗಳಿಲ್ಲದಿದ್ದರೂ ಪತ್ರಿಕೆಯವರೇ ನೀರಿನ ಕೊರತೆಯಿದೆ ಎಂದು ಬಿಂಬಿಸಲು ಮುಂದಾಗುತ್ತಿದ್ದಾರೆ. ನಿಮಗೆ ಸರಿಯಾದ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರ ಮುಂದೆ ಹೇಳಿದರು.
ಇದರಿಂದ ಬೇಸರಗೊಂಡ ಕೆಲ ವರದಿಗಾರರು ಆ ನಂತರ ಸಚಿವರ ಕೆರೆಗಳ ವೀಕ್ಷಣೆ ಕಾರ್ಯಕ್ರಮದಿಂದ ದೂರ ಉಳಿದರು.