ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಚಾಮರಾಜನಗರದಲ್ಲಿ ವ್ಯಾಪಕ ಬೆಂಬಲ
ಚಾಮರಾಜನಗರ, ಆಗಸ್ಟ್ 14: ರಾಜ್ಯದಲ್ಲಿ ಎದ್ದಿರುವ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿಗೆ ಚಾಮರಾಜನಗರದಲ್ಲಿ ಲಿಂಗಾಯಿತ ಮುಖಂಡರು, ಮಠಾಧೀಶರು ಬೆಂಬಲ ಸೂಚಿಸಿದ್ದು, ಮುಂದಿನ ಹೋರಾಟಗಳಲ್ಲಿ ಭಾಗಿಯಾಗಲು ತೀರ್ಮಾನಿಸಿದ್ದಾರೆ.
ಬಿರುಗಾಳಿ ಎಬ್ಬಿಸಲಿವೆಯೆ ಲಿಂಗಾಯತ ಮಹಾಸಭೆಯ ಈ 5 ನಿರ್ಣಯಗಳು?
ಈ ಸಂಬಂಧ ಚಾಮರಾಜನಗರದ ಸಿದ್ದಮಲ್ಲೇಶ್ವರ ಮಠದ ಆವರಣದಲ್ಲಿ ಆಗಸ್ಟ್ 13 ಪೂರ್ವಭಾವಿ ಸಭೆ ನಡೆಸಿದ ಲಿಂಗಾಯತ ಮಠಾಧೀಶರು ಅಂತಿಮವಾಗಿ ಕರ್ನಾಟಕದಲ್ಲಿರುವ ಎಲ್ಲಾ ಲಿಂಗಾಯತರು ಪ್ರತ್ಯೇಕ ಧರ್ಮವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸಭೆಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ಕರ್ನಾಟಕದಲ್ಲಿರುವ ಲಿಂಗಾಯತರು ಬಸವಣ್ಣನವರ ಅನುಯಾಯಿಗಳು. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಅಲ್ಲಿಂದ ಲಿಂಗ ಪೂಜೆ ಮಾಡುವ ಮೂಲಕ ಲಿಂಗಾಯತ ಧರ್ಮವನ್ನು ಪ್ರಚುರಪಡಿಸಿಕೊಂಡು ಬರಲಾಯಿತು.
ನಂತರ ದಿನಗಳಲ್ಲಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಘೋಷಣೆ ಮಾಡುವ ಸಮಾಜ ಮುಖಂಡರ ಹೋರಾಟಗಳು ಮನವಿಗಳಿಗೆ ಅಂದಿನ ಸರ್ಕಾರಗಳು ಸಮರ್ಪಕವಾಗಿ ಸ್ಪಂದನೆ ನೀಡಲಿಲ್ಲ. ಹೀಗಾಗಿ ಲಿಂಗಾಯತ ಸ್ವತಂತ್ರ ಧರ್ಮವಾಗುವ ಆಶಯ ಈಡೇರಲಿಲ್ಲ ಎಂದರು.
ಬ್ರಿಟಿಷರ ಆಳ್ವಿಕೆಯಲ್ಲಿ ಲಿಂಗಾಯತ ಧರ್ಮವಾಗಿ ನಮೂದಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಲಿಂಗಾಯತ ಧರ್ಮ ಇತ್ತು ಎನ್ನುವುದಕ್ಕೆ ಅನೇಕ ದಾಖಲಾತಿಗಳಿವೆ. ಅನೇಕ ಬಾರಿ ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಕೂಗು ಏಳುತ್ತಲೇ ಇದೆ. ಆದರೆ ಲಿಂಗಾಯತ ಮತ್ತು ವೀರಶೈವ ಎಂಬ ಗೊಂದಲದ ನಡುವೆ ಲಿಂಗಾಯತ ಧರ್ಮವಾಗುವುದಕ್ಕೆ ತೊಡಕು ಉಂಟಾಗಿದೆ. ಇದನ್ನೇ ಮನದಂಡವಾಗಿಟ್ಟು ಇದುವರೆಗೆ ನಮ್ಮನ್ನು ಆಳ್ವಿಕೆ ಮಾಡಿಕೊಂಡು ಬಂದ ಸರ್ಕಾರಗಳು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಘೋಷಣೆ ಮಾಡಿಲ್ಲ.
'ವೀರಶೈವ-ಲಿಂಗಾಯತ ವಿಚಾರದಲ್ಲಿ ಸರ್ಕಾರದ ಯಾವುದೇ ನಿಲುವಿಲ್ಲ'
ವೀರಶೈವ ಹಿಂದು ಧರ್ಮದ ಭಾಗವಾಗಿದ್ದು, ಈ ಹೆಸರಿನಲ್ಲಿ ಪ್ರತ್ಯೇಕ ಧರ್ಮವನ್ನು ಕೇಳುವುದು ತರವಲ್ಲ. ಈಗಾಗಲೇ ವೀರಶೈವ ಪ್ರತ್ಯೇಕ ಧರ್ಮವನ್ನು ಪಡೆಯುವ ವಿಚಾರವು ತಿರಸ್ಕೃತಗೊಂಡಿದೆ. ಹೀಗಾಗಿ ಲಿಂಗಾಯಿತ ಸ್ವತಂತ್ರ ಧರ್ಮವಾಗುವುದಕ್ಕೆ ನಮ್ಮೆಲ್ಲರ ಸಂಪೂರ್ಣ ಒಪ್ಪಿಗೆ ಇದೆ ಎಂದು ಸಭೆಯಲ್ಲಿದ್ದ ಮರಿಯಾಲದ ಶ್ರೀ ಇಮ್ಮಡಿ ಮುರುಘರಾಜೇಂದ್ರಶ್ರೀಗಳು, ಚಾಮರಾಜನಗರದ ಶ್ರೀ ಚೆನ್ನಬಸವಸ್ವಾಮೀಜೀ, ಮುಡಿಗುಂಡದ ಶ್ರೀಕಂಠಸ್ವಾಮೀಜಿ, ಅಗರ ಮಠದ ಶ್ರೀ ಸಿದ್ದಮಲ್ಲಸ್ವಾಮೀಜಿ ಹೇಳಿದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಕೋಡಗಾಪುರಶ್ರೀಗಳು, ಮುಖಂಡರಾದ ಮಾಜಿ ಶಾಸಕ ಸಿ. ಗುರುಸ್ವಾಮಿ, ಕಾಳನಹುಂಡಿ ಗುರುಸ್ವಾಮಿ, ಮೂಡ್ಲುಪುರ ನಂದೀಶ್, ದುಗ್ಗಹಟ್ಟಿ ಸ್ವಾಮಿ, ಅಲರೆ ಶಿವಬುದ್ಧಿ, ಕೆಲ್ಲಂಬಳ್ಳಿ ಅನಂದ್, ಪ್ರಸಾದ್, ಬಸವಪ್ರಥ್ವಿ, ಕೊಂಗಳಪ್ಪ, ಆರ್. ಪುಟ್ಟಮಲ್ಲಪ್ಪ, ನಾಗರಾಜು, ವಡ್ಡರಹಳ್ಳಿ ಮಹೇಶ್, ಗಿರೀಶ್ ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿದ್ದರು.