ಗುಂಡ್ಲುಪೇಟೆ: ಹುಲಿ ಹತ್ಯೆ ಪ್ರಕರಣದ ಆರೋಪಿ ನೇಣಿಗೆ ಶರಣು
ಗುಂಡ್ಲುಪೇಟೆ, ನವೆಂಬರ್. 18 : ಹುಲಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಂಗಹಳ್ಳಿ ಗ್ರಾಮದ ವೆಂಕಟಶೆಟ್ಟಿ (50) ಎಂಬಾತ ಹುಲಿ ಹತ್ಯೆ ಆರೋಪದ ಅಡಿಯಲ್ಲಿ ಆರೋಪಿಯಾಗಿದ್ದ.
ಬಂಧನಕ್ಕೊಳಗಾಗಿ ನವೆಂಬರ್.16ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿ ವೆಂಕಟಶೆಟ್ಟಿ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯದಲ್ಲಿ ಅಗಸ್ಟ್.14ರಂದು ಗಂಡು ಹುಲಿಯ ಬೆನ್ನಿಗೆ ಗುಂಡಿಕ್ಕೆ ಹತ್ಯೆ ಆರೋಪದಲ್ಲಿ ಬಂಧಿತನಾಗಿದ್ದ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯದಲ್ಲಿ ಆ.14ರಂದು ಗಂಡುಹುಲಿಯ ಬೆನ್ನಿಗೆ ಗುಂಡೇಟು ಬಿದ್ದು ಸಾವಿಗೀಡಾಗಿರುವುದು ಪತ್ತೆಯಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಅರಣ್ಯಾಧಿಕಾರಿಗಳು ಆ ಸಂದರ್ಭದಲ್ಲಿ ಮೊಬೈಲ್ ಕರೆಗಳ ಆಧಾರದ ಮೇಲೆ ತಾಲೂಕಿನ ಹೊಂಗಹಳ್ಳಿ ಗ್ರಾಮದ ವೆಂಕಟಶೆಟ್ಟಿನನ್ನು ಅ.25ರಂದು ಬಂಧಿಸಿ ಈತನಿಂದ ಕೃತ್ಯಕ್ಕೆ ಬಳಕೆ ಮಾಡಿದ್ದ ಬಂದೂಕನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
ನ.16ರಂದು ವೆಂಕಟಶೆಟ್ಟಿಯು ನ್ಯಾಯಾಲಯದಿಂದ ಜಾಮೀನು ಪಡೆದು ಸ್ವಗ್ರಾಮಕ್ಕೆ ಬಂದಿದ್ದನು. ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಮೇಲೆ ಮನೆಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ. ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.