ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ: ವಿದ್ಯುತ್ ತಾಕಿ ವ್ಯಕ್ತಿ ಸಾವು
ಚಾಮರಾಜನಗರ, ಅಕ್ಟೋಬರ್, 21: ಅಕ್ರಮ ಮರಳು ದಂಧೆಕೋರರ ಮೇಲೆ ಪೊಲೀಸರು ದಾಳಿ ಮಾಡಿದ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡ ಹೋಗಲು ಯತ್ನಿಸಿದ ವ್ಯಕ್ತಿಯೊಬ್ಬ ಅಕ್ರಮವಾಗಿ ಜಮೀನಿಗೆ ಹರಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ಹನೂರು ಪಟ್ಟಣದ ನಿವಾಸಿ ದಲಿತ ಸಮುದಾಯದ ಮಾಜಿ ಯಜಮಾನ್ ಶಿವಮಾದಯ್ಯ(60) ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆಯೇ ಘಟನೆ ನಡೆದಿದ್ದು, ಅಕ್ರಮ ವಿದ್ಯುತ್ ಹಾಯಿಸಿದ್ದ ಜಮೀನು ಮಾಲೀಕನ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದು, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಲ್ಲಿ 235 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಿಸಿ ಕೊಳ್ಳಲು ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯಾದೇಶದ ಪತ್ರವನ್ನು ಶಾಸಕ ಆರ್.ನರೇಂದ್ರ ವಿತರಣೆ ಮಾಡಿದ್ದರಲ್ಲದೆ, ಹಳ್ಳ ಕೊರಕಲುಗಳಲ್ಲಿ ಸಿಗುವ ಮರಳನ್ನು ಉಪಯೋಗಿಸಿಬಹುದು ಎಂದು ತಿಳಿಸಿದ್ದರು.
ನದಿಗಳಲ್ಲಿ ಮಾತ್ರ ಮರಳು ತೆಗೆಯಬಾರದೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಪೊಲೀಸರು ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಈ ಹಿಂದೆ ಶಾಸಕರು ಹೇಳಿದ್ದರು.
ಇದರಿಂದ ಉತ್ಸಾಹಗೊಂಡ ಫಲಾನುಭವಿಗಳು ಮರಳು ತೆಗೆಯಲು ಪಟ್ಟಣದ ಹೊರ ವಲಯದ ಅಣೆಕಟ್ಟೆಗೆ ತೆರಳಿದ್ದರು ಎನ್ನಲಾಗಿದೆ.
ರಾತ್ರಿ ಮರಳು ತೆಗೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳುವ ಸಲುವಾಗಿ ಓಡಿ ಪಾಂಡುನಾಯ್ಡುರವರ ಎಂಬುವರ ಮುಸುಕಿನ ಜೋಳದ ಜಮೀನಿನಲ್ಲಿ ಅವಿತುಕೊಳ್ಳಲು ಮುಂದಾದಾಗ ಅವರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ತಂತಿಬೇಲಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹನೂರು ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿ ಅಕ್ರಮವಾಗಿ ಜಮೀನಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ. ಇದೀಗ ಪ್ರಕರಣ ದಾಖಲಿಸಿ ಕೊಂಡಿರುವ ಹನೂರು ಠಾಣಾ ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.