ಸರಕಾರಿ ಗೌರವದೊಂದಿಗೆ ಮಹದೇವ ಪ್ರಸಾದ್ ಅಂತ್ಯಕ್ರಿಯೆ
ಚಾಮರಾಜನಗರ, ಜನವರಿ 4: ಸಹಕಾರಿ, ಸಕ್ಕರೆ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಪಾರ್ಥೀವ ಶರೀರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಗುಂಡ್ಲುಪೇಟೆಯ, ಹಾಲಹಳ್ಳಿಯಲ್ಲಿರುವ ಫಾರ್ಮ್ ಹೌಸಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಬುಧವಾರ ಬೆಳಗ್ಗೆಯಿಂದಲೇ ಅನೇಕ ಮಂದಿ ಮಹದೇವ ಪ್ರಸಾದ್ ಅವರ ಅಂತಿಮ ದರ್ಶನ ಪಡೆದಿದ್ದು, ಪಾರ್ಥೀವ ಶರೀರಕ್ಕೆ ವೀರಶೈವ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನವನ್ನು ಪುತ್ರ ಗಣೇಶ್ ಪ್ರಸಾದ್ ನೆರವೇರಿಸಿದರು. ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು.
ಮೊದಲೇ ನಿಶ್ಚಯಿಸಿದಂತೆ ಅವರ ತಂದೆ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ಹಾಜರಿದ್ದರು.[ಮಹದೇವಪ್ರಸಾದ್ ಮೈಸೂರು ನಿವಾಸದಲ್ಲಿ ಮಡುಗಟ್ಟಿದ ಶೋಕ]
ಸೋಮವಾರವೇ ಚಿಕ್ಕಮಗಳೂರಿನ ಸಮೀಪ ಕೊಪ್ಪದ ಸಹಕಾರಿ ಕಾರ್ಯಕ್ರಮಕ್ಕೆಂದು ಮಹದೇವ ಪ್ರಸಾದ್ ಆಗಮಿಸಿ, ಚಿಕ್ಕಮಗಳೂರಿನ ಸಮೀಪ ಸೆರಾಯಿ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ಮುಂಜಾನೆ 5:30 ಸಮಯದಲ್ಲಿ ರೆಸಾರ್ಟಿನ ಕೊಠಡಿಯಲ್ಲಿ ಹೃದಯಾಘಾತದಿಮದ ವಿಧಿವಶರಾಗಿದ್ದರು.
ನಂತರ ಅವರ ಪಾರ್ಥೀವ ಶರೀರವನ್ನು ಮಧ್ಯಾಹ್ನ 3ಗಂಟೆ ಸುಮಾರಿಗೆ ಮೈಸೂರು ನಿವಾಸಕ್ಕೆ ತರಲಾಗಿತ್ತು. ಅಲ್ಲಿ ರಾಜಕೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.[ಹುಟ್ಟೂರು ಹಾಲಹಳ್ಳಿಯಲ್ಲಿ ಮಹದೇವಪ್ರಸಾದ್ ಅಂತ್ಯಕ್ರಿಯೆ]
ಮಂಗಳವಾರ ಸಂಜೆಯೇ ಪಾರ್ಥಿವ ಶರೀರವನ್ನು ಚಾಮರಾಜನಗರದ ಗುಂಡ್ಲುಪೇಟೆಯ ದೇವರಾಜ ಅರಸು ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅನೇಕ ಬೆಂಬಲಿಗರು, ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಅಲ್ಲಿಂದ ಮಹದೇವ ಪ್ರಸಾದ್ ಸ್ವಗ್ರಾಮ ಹಾಲಹಳ್ಳಿಗೆ ಪಾರ್ಥೀವ ಶರೀರವನ್ನು ಅವರ ಮನೆಯ ಬಳಿ ಸಾರ್ವತ್ರಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು.