ಸಾವಿನ ಮನೆಯಲ್ಲೂ ಕಳ್ಳರ ಕೈಚಳಕ, ಲಕ್ಷಾಂತರ ರುಪಾಯಿ ಖಲಾಸ್!
ಗುಂಡ್ಲುಪೇಟೆ, ಜನವರಿ 5: ಇಡೀ ಊರು ಸಚಿವ ಮಹದೇವಪ್ರಸಾದ್ ಅವರ ಸಾವಿನ ನೋವನ್ನು ಅನುಭವಿಸುತ್ತಾ ಕಂಗಾಲಾಗಿದ್ದರೆ, ಅಂತಿಮ ನಮನ ಸಲ್ಲಿಸುವ ನೆಪದಲ್ಲಿ ಅಂತ್ಯಕ್ರಿಯೆ ನಡೆಸುವ ಸ್ಥಳಕ್ಕೆ ಆಗಮಿಸಿದ ಜೇಬುಗಳ್ಳರು ಲಕ್ಷಾಂತರ ರುಪಾಯಿ ಲಪಟಾಯಿಸಿದ ಘಟನೆ ಬುಧವಾರ ನಡೆದಿದೆ.
ಬೇಗೂರು ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮಶ್ರೀಕಂಠಪ್ಪ ಅವರ ಮಗ ರವಿ ಎಂಬುವರೇ ಹಣ ಕಳೆದುಕೊಂಡಿದ್ದಾರೆ. ಇವರು ಜೇಬಿನಲ್ಲಿ ಸುಮಾರು 1 ಲಕ್ಷದ 96 ಸಾವಿರ ರುಪಾಯಿ ಇಟ್ಟುಕೊಂಡಿದ್ದರು. ಇದನ್ನು ಗಮನಿಸಿದ ಕಳ್ಳರು ಜನಸಾಗರದ ಮಧ್ಯೆ ತಮ್ಮ ಕೈಚಳಕ ತೋರಿಸಿದ್ದಾರೆ.[ಸರಕಾರಿ ಗೌರವದೊಂದಿಗೆ ಮಹದೇವ ಪ್ರಸಾದ್ ಅಂತ್ಯಕ್ರಿಯೆ]
ಹಣ ಕಳೆದುಕೊಂಡಿದ್ದನ್ನು ಒಪ್ಪಿಕೊಂಡಿರುವ ರವಿ, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ರವಿ ಅವರು ತಾವು ಖರೀದಿಸಿದ್ದ ಕಾರಿನ ಸಾಲವನ್ನು ಕಟ್ಟಲು ಹಣವನ್ನು ತಂದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎಚ್.ಎಸ್.ಮಹದೇವಪ್ರಸಾದ್ ಅಂತಿಮ ದರ್ಶನ ಪಡೆಯಲು ಬಂದಿದ್ದರು.
ಅವರು ಕಾರಿನಿಂದ ಇಳಿದು ಬರುತ್ತಿದ್ದಂತೆಯೇ ಜನಜಂಗುಳಿ ಹೆಚ್ಚಾಗಿ, ಅವರನ್ನು ಜನ ಮುತ್ತಿಕೊಂಡಿದ್ದರು. ಅವರೊಂದಿಗೆ ರವಿಯೂ ಇದ್ದರು. ಜನರ ನಡುವೆ ದಾರಿ ಮಾಡಿಕೊಂಡು ತೆರಳುತ್ತಿದ್ದ ವೇಳೆ ಜೇಬಿಗೆ ಕೈಹಾಕಿ ಹಣ ಲಪಟಾಯಿಸಲೆಂದೇ ಬಂದ ಕಳ್ಳ, ರವಿ ಅವರ ಹಣವನ್ನು ಲಪಟಾಯಿಸಿಕೊಂಡು ಜಾಗ ಖಾಲಿ ಮಾಡಿದ್ದಾನೆ.
ತಕ್ಷಣಕ್ಕೆ ಅವರಿಗೆ ಇದು ಗಮನಕ್ಕೆ ಬಂದಿಲ್ಲ. ಆ ನಂತರ ಮತ್ತೆ ನೋಡಿದಾಗ ತನ್ನ ಜೇಬಿನಲ್ಲಿದ್ದ ಹಣ ಕಳವಾಗಿರುವುದು ಗೊತ್ತಾಗಿದೆ. ಅಂತ್ಯಕ್ರಿಯೆಗಾಗಿ ಬಂದಿದ್ದ ಅಪಾರ ಸಂಖ್ಯೆಯ ಜನರ ಮಧ್ಯೆ ಹಣ ಎಗರಿಸಿದವರ ಮನಸ್ಥಿತಿ ಎಂಥದ್ದು ಎಂಬುದು ಇದರಿಂದ ತಿಳಿಯುತ್ತದೆ.