ಬಂಡೀಪುರ ಅರಣ್ಯದಂಚಿನ ಅಕ್ರಮ ಗಣಿಗಾರಿಕೆ ಕೇಳೋರಿಲ್ಲ
ಚಾಮರಾಜನಗರ, ಫೆಬ್ರವರಿ 9: ಕಿವಿಯ ತಮಟೆಯೇ ಅಲ್ಲಾಡುವಂತೆ ಅನುಭವ ನೀಡುವ ಭಾರೀ ಸದ್ದು, ಮನೆ ಮತ್ತು ಹೊಲದಲ್ಲಿ ದುಡಿಯುವ ರೈತರ ಮೇಲೆ ಬೀಳುವ ಕಲ್ಲಿನ ಚೂರುಗಳು.. ಇದು ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿನ ದೃಶ್ಯದ ವಿವರಣೆಯಲ್ಲ. . ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಹಾಗೂ ಮಂಚಹಳ್ಳಿ ಗ್ರಾಮಗಳಲ್ಲಿ ಕಂಡು ಬರುತ್ತಿರುವ ಚಿತ್ರಣ.
ಇಷ್ಟಕ್ಕೂ ಅಲ್ಲಿ ನಡೆಯುತ್ತಿರುವುದಾದರೂ ಏನು ಎಂದು ಹುಡುಕುತ್ತಾ ಹೋದರೆ ಅಲ್ಲಿ ಅಕ್ರಮ ಗಣಿಗಾರಿಕೆಯ ಧೂಳು ಕಣ್ಣಿಗೆ ತಾಕುತ್ತದೆ. ಸಿಡಿಮದ್ದಿನ ಗಂಧಕದ ವಾಸನೆ ಮೂಗಿಗೆ ಬಡಿಯುತ್ತದೆ. ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಹಾಗೂ ಮಂಚಹಳ್ಳಿ ಗ್ರಾಮಗಳ ನಡುವಿನ ಗೋಮಾಳ ಹಾಗೂ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸುತ್ತ ಮುತ್ತಲಿನ ರೈತರು ಆತಂಕಗೊಂಡಿದ್ದಾರೆ.[ಚಾಮರಾಜನಗರ ಗಡಿಭಾಗದಲ್ಲಿ ನಕ್ಸಲರಿರುವ ಶಂಕೆ!]
ಹಸಗೂಲಿ ಗ್ರಾಮ ಹಾಗೂ ಮಂಚಹಳ್ಳಿ ನಡುವಿನ ಗುಡ್ಡದ ಸರ್ವೇ ನಂಬರ್ 115ರಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶ ಬಂಡೀಪುರ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆಗೆ ಸೇರಿದ ಓಂಕಾರ್ ವಲಯ ಬಫರ್ ಜೋನ್ ಗೆ ಸೇರಿದ್ದರೂ, ಕಾನೂನಿನ ಪ್ರಕಾರ ಇಲ್ಲಿ ಯಾವುದೇ ಗಣಿಗಾರಿಕೆ ನಡೆಸಲು ಅನುಮತಿಯಿಲ್ಲದಿದ್ದರೂ ರಾಜಾರೋಷವಾಗಿ ನಡೆಯುತ್ತಿರುವುದು ಮಾತ್ರ ಅಚ್ಚರಿ ತಂದಿದೆ.
ಗಣಿಗಾರಿಕೆ ನಡೆಯುತ್ತಿರುವ ಸ್ಥಳವು ಹಳ್ಳದಿಂದ ಕೂಡಿದ್ದು, ಸುತ್ತಲಿನ ನೀರು ಹರಿದು ಬಂದು ಇಲ್ಲಿ ಸಂಗ್ರಹವಾಗುತ್ತಿದೆ. ಹೀಗೆ ಸಂಗ್ರಹವಾದ ನೀರು ಬೇಸಿಗೆಯಲ್ಲಿ ಒಂದಷ್ಟು ಪ್ರಾಣಿಗಳ ದಾಹ ತಣಿಸುತ್ತಿತ್ತು. ಆದರೆ ಸ್ಫೋಟಕಗಳನ್ನು ಸಿಡಿಸಿದ್ದರಿಂದ ಅದೆಲ್ಲವೂ ನಾಶವಾಗಿದೆ. ಜತೆಗೆ ಕಲ್ಲುಗಳನ್ನು ಸ್ಫೋಟಿಸುವಾಗ ಚೂರುಗಳು ಹಾರಿ, ರೈತರ ಜಮೀನತ್ತ ಬೀಳುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ.[ಆಲತ್ತೂರಿನಲ್ಲಿ ನಾಮ್ ಕೇ ವಾಸ್ತೆ ಕನ್ನಡ ಶಾಲೆ, ನೀನೇ ಅಂತ ಕೇಳೋರಿಲ್ವೆ]
ಇದರೊಂದಿಗೆ ಪಕ್ಕದ ಜಮೀನನ್ನು ಗುತ್ತಿಗೆ ಪಡೆದಿದ್ದು, ಅಲ್ಲಿರುವ ಕೊಳವೆ ಬಾವಿಯಿಂದಲೇ ಗಣಿಗಾರಿಕೆಗೆ ಬೇಕಾದ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಅರಣ್ಯದಂಚಿನಲ್ಲಿ ಗಣಿಗಾರಿಕೆ ಮಾಡುತ್ತಿರುವುದರಿಂದ ವನ್ಯಪ್ರಾಣಿಗಳಿಗೆ, ರೈತರಿಗೆ ತೊಂದರೆಯಾಗುತ್ತಿದ್ದು, ಅಂತರ್ಜಲ ಕುಸಿತವೂ ಕಾಣಿಸಿಕೊಳ್ಳುತ್ತಿದೆ ಎನ್ನುವುದು ಸ್ಥಳೀಯ ರೈತರ ಆರೋಪವಾಗಿದೆ.
ಆದರೆ, ಸಂಬಂಧಿಸಿದ ಅರಣ್ಯಾಧಿಕಾರಿಗಳಾಗಲೀ, ಗ್ರಾಮ ಪಂಚಾಯಿತಿ ಆಗಲೀ ಸೊಲ್ಲೆತ್ತುತ್ತಿಲ್ಲ. ಹೀಗಾಗಿ ಯಾವುದೇ ಅಡ್ಡಿ- ಆತಂಕವಿಲ್ಲದೆ ಗಣಿಗಾರಿಕೆ ಸುಗಮವಾಗಿ ಸಾಗುತ್ತಿದೆ.