ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಾಣಕ್ಕಿಲ್ಲ ಕಡಿವಾಣ!
ಬಂಡೀಪುರ ಅರಣ್ಯ ಸುತ್ತಮುತ್ತ ರೆಸಾರ್ಟ್ ಮಾಡುವುದೆಂದರೆ ಸಿಕ್ಕಾಪಟ್ಟೆ ಆದಾಯ ಅಂತಲೇ ಅರ್ಥ. ಆದರೆ ಪರಿಸರ ಸೂಕ್ಷ್ಮ ಪ್ರದೇಶವಾದ ಅಲ್ಲಿ ಯಾವುದೇ ಕಾಮಗಾರಿ ಮಾಡಬಾರದು. ಆದರೆ ಅಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿಯನ್ನು ತಡೆಯುವವರೇ ಇಲ್ಲ
ಚಾಮರಾಜನಗರ, ಡಿಸೆಂಬರ್ 27: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮಪರಿಸರ ವಲಯದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲದಿದ್ದರೂ ಈ ವ್ಯಾಪ್ತಿಯಲ್ಲಿ ರೆಸಾರ್ಟ್ ನಿರ್ಮಿಸಿ, ಹಣ ಮಾಡಲು ಹೊರಡುವವರಿಗೇನೂ ಕೊರತೆಯಿಲ್ಲ.
ಇಲ್ಲಿ ಪ್ರಭಾವಿಗಳೇ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗುತ್ತಿರುವುದರಿಂದ ಅರಣ್ಯ ಇಲಾಖೆ ನಾಮ್ ಕೇ ವಾಸ್ಥೆ ನೋಟಿಸ್ ನೀಡಿ, ಕೈಕಟ್ಟಿ ಕುಳಿತುಕೊಳ್ಳುತ್ತಿದೆ ಎಂಬ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ಬೆಂಗಳೂರು ಮೂಲದ ಸುನಿಲ್ ಎಂಬುವರು ಬಂಡೀಪುರ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಕಚೇರಿಯ ಬಳಿಯಲ್ಲಿರುವ ತಮ್ಮ ಜಮೀನಿನಲ್ಲಿ 'ಅಪ್ನಾ ಸ್ವಪ್ನಾ' ಹೆಸರಿನ ರೆಸಾರ್ಟ್ ಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ.[ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ಬಂಡೀಪುರ ವ್ಯಾಪ್ತಿಯಲ್ಲಿ ರೆಸಾರ್ಟ್?]
ಈ ಕಟ್ಟಡ ನಿರ್ಮಾಣ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರುವುದರಿಂದ ಇಲ್ಲಿ ಯಾವುದೇ ವಾಣಿಜ್ಯ ಅಥವಾ ಕೈಗಾರಿಕೆ ಕಟ್ಟಡ ಸ್ಥಾಪಿಸುವಂತಿಲ್ಲ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ 2016 ಜನವರಿ 12ರಂದು ಹಾಗೂ ಮಾರ್ಚ್ 9ರಂದು ಗೋಪಾಲಸ್ವಾಮಿ ಬೆಟ್ಟ ವಲಯದ ಕಚೇರಿಯಿಂದ ನೋಟಿಸ್ ಜಾರಿಗೊಳಿಸಲಾಗಿತ್ತು.
ಇದಕ್ಕೂ ಮೊದಲು ಕಂದಾಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಕಟ್ಟಡವನ್ನು ಕೆಡವಿ ಹಾಕಲಾಗಿತ್ತು. ಆದರೆ ಅಷ್ಟಕ್ಕೆ ಸುಮ್ಮನಾಗದ ಮಾಲೀಕರು ಜಾಗದ ಸುತ್ತಲೂ ಎತ್ತರದ ಬೇಲಿ, ಗಿಡ ಮರಗಳು, ಸೋಲಾರ್ ಹಾಗೂ ಮುಳ್ಳುತಂತಿಯ ಬೇಲಿಯನ್ನು ನಿರ್ಮಿಸಿ, ಹೊರಗಿನವರಿಗೆ ಗೊತ್ತಾಗದಂತೆ ರಾತ್ರೋರಾತ್ರಿ ಕಟ್ಟಡ ನಿರ್ಮಾಣ ಕಾರ್ಯ ಮುಂದುವರೆಸಿದ್ದಾರೆ.[ಹುಲಿ ಕಳೇಬರ ಪತ್ತೆ; ವಿಷವುಣಿಸಿ, ಉಗುರು- ಹಲ್ಲು ಹೊತ್ತೊಯ್ದರೆ?]
ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಲ್ಲ ರೀತಿ ಸಾಮಗ್ರಿಗಳನ್ನು ಸಂಗ್ರಹಿಟ್ಟುಕೊಳ್ಳಲಾಗಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ರೀತಿ ಅನುಮತಿ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಅರಣ್ಯ ವಲಯಕ್ಕೆ ಹೊಂದಿಕೊಂಡಂತೆ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಏಕೆ ಮೌನವಾಗಿದೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕಿದೆ.