ಗುಂಡ್ಲುಪೇಟೆ ಚುನಾವಣಾ ಅಖಾಡಕ್ಕೆ ಗೀತಾ ಮಹದೇವ್ ಪ್ರಸಾದ್
ಸಚಿವ ದಿವಂಗತ ಹೆಚ್.ಎಸ್.ಮಹದೇವ ಪ್ರಸಾದ್ ಧರ್ಮಪತ್ನಿ ಗೀತಾ ಮಹದೇವ ಪ್ರಸಾದ್ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಕಣಕ್ಕಿಳಿಯಲಿದ
ಚಾಮರಾಜನಗರ, ಫೆಬ್ರವರಿ 13: ಸಚಿವ ದಿವಂಗತ ಹೆಚ್.ಎಸ್.ಮಹದೇವ ಪ್ರಸಾದ್ ಧರ್ಮಪತ್ನಿ ಗೀತಾ ಮಹದೇವ ಪ್ರಸಾದ್ ರಾಜಕೀಯ ಪ್ರವೇಶಿಸುವುದು ಖಚಿತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಮಹಾಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹದೇವಪ್ರಸಾದ್ ಅವರ ಸ್ಥಾನವನ್ನು ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆ ಸ್ಥಾನವನ್ನು ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಂದ ಮಾತ್ರ ತುಂಬಲು ಸಾಧ್ಯ. ಅವರು ಪತಿ ಹಾಕಿದ ಹಾದಿಯಲ್ಲಿ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜಕೀಯ ಧ್ರುವೀಕರಣ ಮಾಡಲಿದ್ದಾರೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.[ಪ್ರಾಮಾಣಿಕತೆ ಮೆರೆದ ಹೆಪ್ಸಿಬಾ ರಾಣಿ ಎತ್ತಂಗಡಿ]
ಇದರಿಂದಾಗಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮಹದೇವ ಪ್ರಸಾದ್ ನಂತರದ ಕಾಂಗ್ರೆಸ್ನ ನಾಯಕರಾಗಿ ಗುರುತಿಸಿಕೊಂಡಿದ್ದವರು, ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿದ್ದವರೆಲ್ಲಾ ಈಗ ಪೆಚ್ಚಾಗಿದ್ದಾರೆ. ಪಕ್ಷಕ್ಕಾಗಿ ಮಣ್ಣು ಹೊತ್ತ ನಾಯಕರಿಗೆ ಒಳಗೊಳಗೆ ಸಂಕಟ ಆರಂಭವಾಗಿದೆ.
ಸಾಮಾನ್ಯವಾಗಿ ಅಧಿಕಾರದಲ್ಲಿದ್ದಾಗ ವ್ಯಕ್ತಿ ಅಕಾಲಿಕ ಮರಣಕ್ಕೀಡಾದರೆ ಅನುಕಂಪದ ಆಧಾರದ ಮೇಲೆ ಅದೇ ಕುಟುಂಬದ ವ್ಯಕ್ತಿಗಳಿಗೆ ಅವಕಾಶ ನೀಡುವುದು ವಾಡಿಕೆ. ಸದ್ಯ ಗುಂಡ್ಲುಪೇಟೆಯಲ್ಲಿಯೂ ಇದನ್ನು ಮುಂದುವರೆಸುವುದು ಅನಿವಾರ್ಯವಾಗಿದೆ.[ನಂಜನಗೂಡು ಉ.ಚು: 'ತೆನೆ' ಬಿಟ್ಟು 'ಕೈ' ಹಿಡಿದ ಕಳಲೆ ಕೇಶವಮೂರ್ತಿ]
ಅದರಲ್ಲೂ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಹಳೇ ಮೈಸೂರು ಭಾಗದ ರಾಜಕೀಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದವರು. ಅದರಲ್ಲೂ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಪ್ರಭಾವಿಯಾಗಿದ್ದರು. ಹೀಗಾಗಿಯೇ ಅವರ ಪತ್ನಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಚಾರವಾಗಿದೆ.
ಈ ನಡುವೆ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಮತದಾರರ ಗಮನ ಸೆಳೆಯುವ ಪ್ರಯತ್ನವನ್ನು ಸಿಎಂ ಮುಂದುವರೆಸಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಸದ್ಯದಲ್ಲೇ ಉಪಚುನಾವಣೆ ನಡೆಯುತ್ತಿರುವುದರಿಂದ ಎರಡು ಕಡೆಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ಉದ್ಘಾಟನಾ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ.