ಗುಂಡ್ಲುಪೇಟೆಯಲ್ಲಿ ಮಳೆ ಅವಾಂತರ: ಇಬ್ಬರು ಬಲಿ
ದಿಢೀರನೆ ಗುಡುಗು ಸಿಡಿಲು ಸಹಿತ ಸುರಿದ ಮಳೆ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿದ್ದಾರೆ
ಚಾಮರಾಜನಗರ, ಮೇ 08: ದಿಢೀರನೆ ಗುಡುಗು ಸಿಡಿಲು ಸಹಿತ ಸುರಿದ ಮಳೆ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಪ್ರಾಣಬಿಟ್ಟಿದ್ದಾರೆ. ಇಬ್ಬರು ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಪ್ಪತ್ತು ನಿಮಿಷದ ಕಾಲ ಗುಡುಗು ಸಿಡಿಲು ಸಮೇತ ಸುರಿದ ಮಳೆ ಹಲವು ಅನಾಹುತಗಳನ್ನು ಮಾಡಿದೆ. ತಾಲೂಕಿನ ತೆಂಕಲಹುಂಡಿ ಗ್ರಾಮದ ಶಿವರಾಜೇಗೌಡ ಎಂಬುವರ ಪುತ್ರ ಮನು (12) ತಂದೆಯೊಂದಿಗೆ ಹೊಲಕ್ಕೆ ಹೋಗಿದ್ದ ಸಮಯದಲ್ಲಿ ಸಿಡಿಲು ಬಡಿದು ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ, ತೀವ್ರ ಗಾಯಗೊಂಡಿರುವ ಶಿವರಾಜೇಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಭೀಮನಬೀಡು ಗ್ರಾಮದ ಸಿದ್ದಶೆಟ್ಟಿ ಎಂಬುವವರ ಹಸು ಸಾವನ್ನಪ್ಪಿದ್ದು, ಸಿದ್ದಶೆಟ್ಟಿಯವರಿಗೆ ಸುಟ್ಟಗಾಯಗಳಾಗಿವೆ.
ಮೂಖಹಳ್ಳಿ ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ಮಳೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂಖಹಳ್ಳಿ ಕಾಲೋನಿ ನಿವಾಸಿ ಗೋಪಾಲ್(22) ಎಂಬಾತ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ತಹಸೀಲ್ದಾರ್ ಕೆ.ಸಿದ್ದು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಗಾಯಾಳುಗಳು ಹಾಗೂ ಮೃತರ ಸಂಬಂಧಿಕರಿಂದ ಘಟನೆಯ ಮಾಹಿತಿ ಪಡೆದು, ಮೃತರ ಕುಟುಂಬಕ್ಕೆಸರ್ಕಾರದಿಂದ ಪರಿಹಾರ ಮತ್ತು ಸಂತ್ರಸ್ಥರಿಗೆ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ.