ಒಂದೇ ರಾತ್ರಿಗೆ ಕೆರೆ ತುಂಬುವಂಥ ಮಳೆ ಬಂತೇ ಹನೂರಲ್ಲಿ!
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಕೆರೆ ತುಂಬಿರುವುದರಿಂದ ಅನಾಹುತದ ಬಗ್ಗೆ ಸ್ಥಳೀಯರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದೇ ರಾತ್ರಿ ಸುರಿದ ಮಳೆಗೆ ಕೆರೆ ತುಂಬಿದ್ದು ಹೇಗೆ ಎಂಎಂದು ಪ್ರಶ್ನಿಸುತ್ತಿದ್ದಾರೆ
ಚಾಮರಾಜನಗರ, ಏಪ್ರಿಲ್ 26: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹನೂರು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಇದರಿಂದ ಸಣ್ಣ-ಪುಟ್ಟ ಅನಾಹುತ ಸಂಭವಿಸಿ, ಜನಸಾಮಾನ್ಯರಿಗೆ ನಷ್ಟವುಂಟಾಗಿದ್ದರೂ ಲೊಕ್ಕನಹಳ್ಳಿಯ ದೊಡ್ಡಕೆರೆ ತುಂಬಿರುವುದರಿಂದ ರೈತರು ಸಂತಸ ಪಡುವಂತಾಗಿದೆ.
ಹನೂರು ವ್ಯಾಪ್ತಿಯಲ್ಲಿ ಮಳೆ ಬಾರದೆ ಜಾನುವಾರು ಸೇರಿದಂತೆ ಜನ ನೀರಿಗಾಗಿ ಪರದಾಡುವಂತಾಗಿತ್ತು. ಮಳೆ ಸುರಿಯಲಿ ಎಂದು ರೈತರು ನಿತ್ಯ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಮಳೆ ಬಾರದೆ ಕೆರೆಗಳು ಬತ್ತಿದ್ದರಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿತ್ತು. ನೀರಿಲ್ಲದೆ ಜಮೀನುಗಳು ಒಣಗಿ, ಹುಲ್ಲು ಕೂಡ ಬೆಳೆಯಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.[ಮುಂಗಾರು ಮುನ್ಸೂಚನೆ, ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ]
ಆದರೆ, ರೈತರ ಮೊರೆ ದೇವರಿಗೆ ಕೇಳಿಸಿತು ಎಂಬಂತೆ ಮಂಗಳವಾರ ರಾತ್ರಿ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಪರಿಣಾಮ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಂಡಿಪಾಳ್ಯ ಕೆರೆ ಮತ್ತು ಕೊಂಡದ ಕೆರೆ ಲೊಕ್ಕನಹಳ್ಳಿ ದೊಡ್ಡ ಕೆರೆಗಳು ತುಂಬಿವೆ. ಬೆಳಗ್ಗೆ ಎದ್ದು ಕೆರೆ ಕಡೆಗೆ ಹೋದ ಜನ ನೀರು ತುಂಬಿರುವುದನ್ನು ಕಂಡು, ಅಚ್ಚರಿಪಟ್ಟಿದ್ದಾರೆ.
ಒಂದೇ ಮಳೆಗೆ ಕೆರೆ ತುಂಬಿದೆ ಎಂಬುದನ್ನು ಗ್ರಾಮದ ಜನರಿಗೆ ನಂಬಲಾಗುತ್ತಿಲ್ಲ. ಬಿಸಿಲಿನ ಝಳಕ್ಕೆ ಬತ್ತಿಹೋಗಿದ್ದ ಕೆರೆಗಳಲ್ಲಿ ನೀರು ಕಾಣುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮಿನುಗುತ್ತಿದೆ.[ಮಾಲಂಬಿ ಮಳೆಮಲ್ಲೇಶ್ವರನಿಗೆ ಮಳೆಗಾಗಿ ಪ್ರಾರ್ಥಿಸಿ ಪಾದಯಾತ್ರೆ!]
ಕೆರೆ ಭರ್ತಿಯಾಗಲು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಶೆಟ್ಟಿಯವರೇ ಕಾರಣಕರ್ತರಾಗಿದ್ದಾರೆ ಎನ್ನುವುದು ಸ್ಥಳೀಯರ ಮಾತು. ಅವರ ಕಾರ್ಯದಕ್ಷತೆಯಿಂದ ಇತ್ತೀಚೆಗೆ ಕೆರೆಗಳ ಅಭಿವೃದ್ಧಿ ಕೆಲಸ ಮಾಡಲಾಗಿದ್ದು, ಕೆರೆಯ ನೀರಿನ ಮೂಲಗಳ ಕಾಲುವೆಗಳನ್ನು ಅಚ್ಚುಕಟ್ಟಾಗಿ ದುರಸ್ತಿ ಮಾಡಿದ್ದರಿಂದ ನೀರು ಎಲ್ಲೆಲ್ಲೋ ಹರಿದು ಪೋಲಾಗದೆ ನೇರವಾಗಿ ಕೆರೆಯನ್ನು ಸೇರಿದೆ. ಹೀಗಾಗಿ ಕೆರೆಯಲ್ಲಿ ನೀರು ಸಂಗ್ರಹವಾಗಿದೆ.
ಒಂದೆಡೆ ಮಳೆಯಿಂದ ಕೆರೆಯಲ್ಲಿ ನೀರು ತುಂಬಿದ್ದರೆ, ಮತ್ತೊಂದೆಡೆ ಗ್ರಾಮಗಳಲ್ಲಿ ಹಾನಿಯನ್ನೂ ಮಾಡಿದೆ. ಲೊಕ್ಕನಹಳ್ಳಿಯಲ್ಲಿ ವ್ಯಕ್ತಿಯೊಬ್ಬರ ಮನೆಯ ಛಾವಣಿ ಹಾರಿಹೋಗಿದ್ದರೆ, ಗೋಶಾಲೆಯ ಶೆಡ್ ಮೇಲೆ ಭಾರಿ ಗಾತ್ರದ ಮರವೊಂದು ಉರುಳಿದ ಪರಿಣಾಮ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಅದೃಷ್ಟವಶಾತ್ ಈ ಶೆಡ್ ನಲ್ಲಿ ಯಾವುದೇ ಜಾನುವಾರು ಇರಲಿಲ್ಲ.
ಮತ್ತೊಂದೆಡೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮತ್ತು ಕಾರುಗಳ ಮೇಲೆ ಮರವೊಂದು ಬುಡಸಹಿತ ಕಿತ್ತು ಬಿದ್ದಿದ್ದರಿಂದ ಜಖಂಗೊಂಡಿವೆ. ಗ್ರಾಮಗಳ ಕೆಲವೆಡೆ ಗಾಳಿಗೆ ಹೆಂಚುಗಳು ಹಾರಿಹೋಗಿವೆ.[ಮಂಡ್ಯದಲ್ಲಿ ಆಲಿಕಲ್ಲು ಮಳೆ: ಧರೆಗುರುಳಿದವು ಕಲ್ಪವೃಕ್ಷ!]
ಮಳೆಯಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜು, ಪಿಡಿಒ ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ಸಿ.ರಂಗಶೆಟ್ಟಿ, ಉಪಾಧ್ಯಕ್ಷೆ ಸುಮತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.