ಚರಂಡಿ ನೀರನ್ನೇ ಹೊತ್ತೊಯ್ದ ಹಂಗಳ ಗ್ರಾಮಸ್ಥರು!
ಚಾಮರಾಜನಗರ: ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವ ಕಾರಣ ನೀರು ಬಾರದೆ ಕಂಗಾಲಾದ ಗ್ರಾಮಸ್ಥರು ಪೈಪ್ ಒಡೆದು ಚರಂಡಿ ಸೇರುತ್ತಿದ್ದ ನೀರನ್ನೇ ಬಳಕೆಗೆ ಕೊಂಡೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿಯೇ ಹೆಸರುವಾಸಿಯಾಗಿರುವ ಹಂಗಳ ಗ್ರಾಮಕ್ಕೆ ಇಂತಹ ದುಸ್ಥಿತಿ ಬಂದಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಈಗಾಗಲೇ ಈ ಗ್ರಾಮಕ್ಕೆ ಅತೀ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ ಎರಡು ಬಾರಿ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದ ಹೆಗ್ಗಳಿಕೆಯಿದೆ. ಆದರೆ ಇದೀಗ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿರುವುದು ಗ್ರಾಮಸ್ಥರು ಆತಂಕ ಪಡುವಂತಾಗಿದೆ.
ಗ್ರಾಮದ ಹಲವು ಬೀದಿಗಳಲ್ಲಿ ನೀರಿನ ಸಮಸ್ಯೆ ಆರಂಭವಾಗಿದ್ದು ಪ್ರತಿನಿತ್ಯ ಗ್ರಾಮಸ್ಥರು ಖಾಲಿ ಕೊಡಹಿಡಿದು ನೀರಿಗಾಗಿ ಪರಿತಪಿಸುವಂತಾಗಿದೆ. ಇನ್ನು ಗ್ರಾಮದ ವಾಲ್ಮೀಕಿ ಬಡಾವಣೆಯಿದ್ದು ಇಲ್ಲಿ ಕುಡಿಯುವ ನೀರು ಸಿಕ್ಕಿ ಬರೋಬ್ಬರಿ 15 ದಿನಗಳಾಗಿದೆಯಂತೆ.
ಜನ ಬೆಳಗಿನ ಜಾವವೇ ಎದ್ದು ಬಂದು ನೀರಿಗಾಗಿ ಕಾಯುವ ದೃಶ್ಯ ಸಾಮಾನ್ಯವಾಗಿದೆ. ಈ ನಡುವೆ ನೀರಿಗಾಗಿ ಕೊಡ ಹಿಡಿದು ಬಂದ ಜನ ನಲ್ಲಿ ಮುಂದೆ ಸಾಲಾಗಿ ನಿಂತರೆ ಇನ್ನೊಂದೆಡೆ ಪೈಪ್ ಒಡೆದು ನೀರು ಚರಂಡಿ ಪಾಲಾಗಿದೆ. ಆದರೆ ನೀರಿಲ್ಲದೆ ಬವಣೆ ಪಟ್ಟ ಮಂದಿ ಅದನ್ನೇ ಕೊಡಗಳಲ್ಲಿ ತುಂಬಿಸಿ ಮನೆಗೆ ಹೊತ್ತೊಯ್ಯುತ್ತಿದ್ದ ದೃಶ್ಯ ಹೃದಯ ಹಿಂಡಿತ್ತು.
ಈ ಬಗ್ಗೆ ವಿಚಾರಿಸಿದರೆ, ಕಳೆದ 15 ದಿನದಿಂದ ನೀರಿಗಾಗಿ ಕಾದು ಸುಸ್ತಾಗಿದ್ದು ನೀರಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ಬೇರೆ ದಾರಿ ಕಾಣದೆ ಚರಂಡಿ ನೀರನ್ನೆ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಹೇಳುತ್ತಿದ್ದಾರೆ. ವಿಷಾದದ ಸಂಗತಿ ಎಂದರೆ ತಾ.ಪಂ.ಅಧ್ಯಕ್ಷರು ಇದೇ ಗ್ರಾಮದವರಾದರೂ ನೀರಿನ ವ್ಯವಸ್ಥೆ ಮಾಡುವಲ್ಲಿ ವಿಫಲರಾಗಿರುವುದು ದುರಂತವೇ ಸರಿ.