ಗುಂಡ್ಲುಪೇಟೆ ಬೆಟ್ಟಗಳಲ್ಲಿ ಎಗ್ಗಿಲ್ಲದ ಯಕ್ಕಾ, ರಾಜ, ರಾಣಿ ಆಟ!
ಚಾಮರಾಜನಗರ, ಸೆಪ್ಟೆಂಬರ್ 1: ಅಕ್ರಮ ಇಸ್ಪೀಟ್ ದಂಧೆಗೆ ಗುಂಡ್ಲುಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿರುವ ಬೆಟ್ಟಗಳು ಆಶ್ರಯತಾಣವಾಗಿದ್ದು, ಜೂಜು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇದರ ಜಾಲಕ್ಕೆ ಸಿಲುಕಿದ ಹಲವರು ಬೀದಿಗೆ ಬೀಳುತ್ತಿದ್ದಾರೆ.
ಗುಂಡ್ಲುಪೇಟೆಯ ಹಂಗಳ ಗ್ರಾಮದ ಸುತ್ತಮುತ್ತ, ಶಿವಪುರ, ಮಡಹಳ್ಳಿ ಸೇರಿದಂತೆ ಕಂದೇಗಾಲ ಸಮೀಪದ ಪಾರ್ವತಿಬೆಟ್ಟ, ತೆರಕಣಾಂಬಿ ಸಮೀಪದ ಹುಲಗನಮುರಡಿ ವೆಂಕಟರಮಣ ಸ್ವಾಮಿ ಬೆಟ್ಟ, ಮಂಚಹಳ್ಳಿ ಗುಡ್ಡ, ಕೋಟೆ ತಾಲೂಕಿನ ಚಿಕ್ಕದೇವಮ್ಮನಬೆಟ್ಟ, ಗಡಿ ಭಾಗದ ಕೊಂಗಳ್ಳಿ ಬೆಟ್ಟಕ್ಕೊಮ್ಮೆ ಹಾಗೆ ಸುಮ್ಮನೆ ಸುತ್ತು ಹೊಡೆದು ಬಂದರೆ ಇಲ್ಲಿ ನಡೆಯುವ ಇಸ್ಪೀಟ್ ದಂಧೆಯ ಕರಾಳ ಮುಖ ಬಯಲಾಗುತ್ತದೆ.[ಕಿರುಕುಳಕ್ಕೆ ಬೇಸತ್ತು ಗ್ರಾ.ಪಂ. ಅಧ್ಯಕ್ಷೆ ಆತ್ಮಹತ್ಯೆಗೆ ಯತ್ನ]
ಇಸ್ಪೀಟ್ ಆಟ ಆಡಿ ಮನೆ ಕಳೆದುಕೊಂಡು ಕೆಲವರು ಊರು ಬಿಟ್ಟಿದ್ದರೆ, ಮತ್ತೆ ಕೆಲವರು ಸಾಲಗಾರರಾಗಿ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇಸ್ಪೀಟ್ ಆಡೋದಕ್ಕೆ ಸಾಲ ನೀಡಿ, ಅದಕ್ಕೆ ಬಡ್ಡಿ ಪಡೆಯುವ ದೊಡ್ಡ ಜಾಲವೇ ಇದೆ. ಹೊಡೆದು, ಹೆದರಿಸಿ ಹಣ ಪಡೆಯುವ ಸಾಮರ್ಥ್ಯ ಅವರಿಗಿದೆ. ಕೆಲವರು ಬಡ್ಡಿಗೆ ಹಣ ಪಡೆದು, ಅದರಿಂದ ಇಸ್ಪೀಟ್ ಆಡಿ ಸಾಲಗಾರರಾಗಿರುವವರ ದೊಡ್ಡ ಪಟ್ಟಿಯೇ ಇಲ್ಲಿ ಸಿಗುತ್ತದೆ.
ಈ ದಂಧೆಯಲ್ಲಿ ಕೆಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು, ತಮ್ಮದೇ ಜಾಗದಲ್ಲಿ ಇಸ್ಪೀಟ್ ಆಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣದಿಂದ ಒಂದಷ್ಟು ಮಂದಿ ತಂಡವಾಗಿ ವಾಹನಗಳಲ್ಲಿ ಪಾರ್ವತಿಬೆಟ್ಟ, ಹುಲಗನಮುರಡಿ ವೆಂಕಟರಮಣ ಸ್ವಾಮಿ ಬೆಟ್ಟ, ಮಂಚಹಳ್ಳಿ ಗುಡ್ಡ, ಕೋಟೆ ತಾಲೂಕಿನ ಚಿಕ್ಕದೇವಮ್ಮನಬೆಟ್ಟ, ಕೊಂಗಳ್ಳಿ ಬೆಟ್ಟಗಳ ಕಡೆಗೆ ತೆರಳಿ, ಅಲ್ಲಿ ಆಟವಾಡಿ ಬರುತ್ತಾರೆ.[ಇರುವುದೊಂದೇ ಬೋರ್ ವೆಲ್: ಬಿಂದಿಗೆ ನೀರಿಗೂ ಜಗಳ, ಹೊಡೆದಾಟ]
ಆಟವಾಡಲು ತೆರಳುವವರಿಗೆ ಊಟ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಆಟವಾಡಲು ಹಣದ ವ್ಯವಸ್ಥೆಯನ್ನು ಕೂಡ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇಸ್ಪೀಟ್ ಆಟ ಆಡಲು ಹೀಗೆ ತಂಡೋಪತಂಡವಾಗಿ ತೆರಳುತ್ತಿದ್ದರೂ ಪೊಲೀಸರಿಗೆ ಮಾತ್ರ ಯಾವುದೇ ಮಾಹಿತಿ ಸಿಗದಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನಾದರೂ ಎಸ್ಪಿ ಕುಲದೀಪ್ ಸಿಂಗ್ ಜೈನ್ ಇತ್ತ ನಿಗಾ ವಹಿಸಿ, ಇಸ್ಪೀಟ್ ದಂಧೆ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.