ಕೆಎಸ್ಆರ್ ಟಿಸಿ ಡಿಪೋಗೆ ಕನ್ನ ಹಾಕಿದವರ ಬಂಧನ
ಚಾಮರಾಜನಗರ, ಅಕ್ಟೋಬರ್ 22: ನಗರದ ಕೆಎಸ್ಆರ್ ಟಿಸಿ ಡಿಪೋಗೆ ಕನ್ನ ಹಾಕಿ 28 ಲಕ್ಷ ರುಪಾಯಿ ದೋಚಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇಲ್ಲಿನ ಕೆಎಸ್ಆರ್ ಟಿಸಿ ಬಸ್ ಡಿಪೋನಲ್ಲಿ ಕಳೆದ ಸೋಮವಾರ ಲಾಕರ್ ಮುರಿದು 28 ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಅಬ್ದುಲ್ ರೆಹಮಾನ್, ಕಿಪಾಯತುಲ್ಲಾ ಷರೀಫ್, ಲೋಕೇಶ ಮತ್ತು 16 ವರ್ಷದ ರಯಾನ್ ಎಂಬುವನನ್ನು ಬಂಧಿಸಲಾಗಿದೆ ಎಂದು ಪ್ರಕರಣದ ಕುರಿತು ವಿವರ ನೀಡಿದರು ಎಸ್ ಪಿ ಕುಲದೀಪ್ ಕುಮಾರ್ ಜೈನ್, ನಾಲ್ಕು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಕಟರ್, ಸಿಲಿಂಡರ್, ಕಟಿಂಗ್ ಪ್ಲೇಯರ್, ಖಾರದಪುಡಿ, ಆಟೋ ರಿಕ್ಷಾದೊಂದಿಗೆ 18 ಲಕ್ಷ ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.[ಚಾಮರಾಜನಗರ ಕೆ ಎಸ್ ಆರ್ ಟಿಸಿ ಡಿಪೋಗೆ ಕನ್ನ: 28 ಲಕ್ಷ ಕಳವು]
ಕೆಎಸ್ಆರ್ ಟಿಸಿ ಸಿಬ್ಬಂದಿ ನಿರ್ಲಕ್ಷ್ಯವೇ ಕಳ್ಳತನಕ್ಕೆ ಪ್ರಮುಖ ಕಾರಣವಾಗಿದ್ದು, ನಾಲ್ಕು ಪೊಲೀಸರ ತಂಡವನ್ನು ರಚಿಸಿ, ಈ ಪ್ರಕರಣವನ್ನ ಭೇದಿಸಲಾಗಿದೆ ಎಂದು ತಮ್ಮ ಸಿಬ್ಬಂದಿಯನ್ನು ಪ್ರಶಂಶಿಸಿದ ಎಸ್ ಪಿ, ಉಳಿದ ಹಣದ ಮೂಲವನ್ನು ಪತ್ತೆ ಹಚ್ಚಿ ಸದ್ಯದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.