ಬಂಡೀಪುರ ಅರಣ್ಯ ಸಿಬ್ಬಂದಿ ಮನೆಯಲ್ಲೇ ಮರ ಸಂಗ್ರಹ!
ಚಾಮರಾಜನಗರ, ಫೆಬ್ರವರಿ 18: ಅರಣ್ಯದಲ್ಲಿರುವ ಕಾಡು ಮರಗಳನ್ನು ರಕ್ಷಿಸಬೇಕಾದ ಸಿಬ್ಬಂದಿಯೇ ಅದನ್ನು ಕಡಿದು ಮನೆಯಲ್ಲಿ ಸಂಗ್ರಹಿಸಿಟ್ಟಿರುವುದು ಬಂಡೀಪುರ ಅಭಯಾರಣ್ಯದ ಮೊಳೆಯೂರು ಅರಣ್ಯ ವಲಯದ ಹೊಸಕೋಟೆ ಬೀಟ್ ಅಲ್ಲಿ ಕಂಡು ಬಂದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೊಳೆಯೂರು ವಲಯದ ಹೊಸಕೋಟೆ ಬೀಟಿನ ಅರಣ್ಯದ ಸಿಬ್ಬಂದಿಯೊಬ್ಬರು ತಮ್ಮ ವಾಸದ ಬಿ.ಮಟಗೆರೆ ಮನೆಯಲ್ಲಿ ಅರಣ್ಯ ಸಂಪತ್ತನ್ನು ಅಕ್ರಮವಾಗಿ ಶೇಖರಣೆ ಮಾಡಿರುವುದು ಕಂಡು ಬಂದಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಈ ಕಾಡು ಮರಗಳು ಅವರಿಗೆ ಸಿಕ್ಕಿದ್ದಾದರೂ ಹೇಗೆ ಎಂಬುದನ್ನು ನೋಡಿದರೆ ಅದಕ್ಕೆ ಕಾರಣವೂ ಇದೆ.
ಬಂಡೀಪುರದ ಮೊಳೆಯೂರು ಅರಣ್ಯವಲಯದ ಹೊಸಕೋಟೆ ಬೀಟ್ನಲ್ಲಿ ಕಾಡಾನೆಗಳು ಅರಣ್ಯದಿಂದ ಹೊರ ಹೋಗದಂತೆ ಆನೆ ಕಂದಕ ನಿರ್ಮಾಣ ಮಾಡಿದ್ದು, ಈ ವೇಳೆ ಕಂದಕ ನಿರ್ಮಾಣ ಮಾಡುವ ಸ್ಥಳದಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಹೀಗೆ ಕಡಿದ ಮರಗಳ ಪೈಕಿ ಕಾಡು ಮರಗಳನ್ನು ಅರಣ್ಯ ಸಿಬ್ಬಂದಿಯೊಬ್ಬರು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಸಾಮಾನ್ಯವಾಗಿ ಅರಣ್ಯದಲ್ಲಿ ಕಡಿದ ಮರಗಳನ್ನು ಟೆಂಡರ್ ಕರೆದು ಹರಾಜು ಹಾಕುವುದು ನಿಯಮ ಆದರೆ ಸಿಬ್ಬಂದಿಗಳ ಮನೆಯಲ್ಲಿ ಸಂಗ್ರಹಿಸಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ ಸುಪ್ರೀಂಕೋರ್ಟ್ ಆದೇಶದಂತೆ ಬಂಡೀಪುರದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ವಾಹನ ಸಂಚಾರ ನಿರ್ಬಂಧವಿದ್ದರೂ ಮೂಲೆಹೊಳೆ ಚೆಕ್ ಪೋಸ್ಟಿನಲ್ಲಿ ಸಿಬ್ಬಂದಿ ಹಣ ಪಡೆದು ರಾತ್ರಿ ವೇಳೆಯಲ್ಲಿ ವಾಹನಗಳಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿರುವ ಆರೋಪವೂ ಕೇಳಿ ಬರುತ್ತಿದೆ.