ಗೋವಿಗಾಗಿ ಸಂಗ್ರಹಿಸಿದ್ದ ಮೇವು ಮಳೆಯಿಂದ ಹಾಳು
ಚಾಮರಾಜನಗರ, ಏಪ್ರಿಲ್ 22 : ಹನೂರು ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ತೆರೆದಿರುವ ಗೋಶಾಲೆಯಲ್ಲಿ ಇದೀಗ ಹೊಸ ಸಮಸ್ಯೆ ಹುಟ್ಟಿಕೊಂಡಿದ್ದು, ಜಾನುವಾರುಗಳಿಗೆ ಹಾಕಲು ಸಂಗ್ರಹಿಸಿಟ್ಟಿದ್ದ ಮೇವು ಇದೀಗ ಕೊಳೆತು ನಾರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟಕ್ಕೂ ಮೇವು ಕೊಳೆತು ಗಬ್ಬು ನಾರಲು ಕಾರಣವೇನು ಎಂಬುದನ್ನು ನೋಡಿದರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆ. ಈ ವ್ಯಾಪ್ತಿಯಲ್ಲಿ ಬರ ಕಾಣಿಸಿಕೊಂಡ ಪರಿಣಾಮ ಸರ್ಕಾರ ಹನೂರಿನಲ್ಲಿ ಗೋಶಾಲೆಗಳನ್ನು ತೆರೆದಿದೆ. ಈ ಗೋಶಾಲೆಯಲ್ಲಿ ಹಲವಾರು ರೈತರು ತಮ್ಮ ಜಾನುವಾರುಗಳನ್ನು ಬಿಟ್ಟಿದ್ದಾರೆ. ಇಲ್ಲಿ ಜಾನುವಾರುಗಳಿಗೆ ಮೇವು ಹಾಕಲು ಅನುಕೂಲವಾಗುವಂತೆ ಜೋಳದ ಕಡ್ಡಿಯನ್ನು ಸಂಗ್ರಹಿಸಿಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ನೀರು ಮೇವು ಸಂಗ್ರಹಣಾ ಕೋಣೆಯೊಳಗೆ ನುಗ್ಗಿದೆ. ಮೇವಿನ ರಾಶಿಯನ್ನು ಮುಚ್ಚಿಟ್ಟಿದ್ದರೆ ನೀರು ಸೇರುತ್ತಿರಲಿಲ್ಲವೇನೋ? ಈ ಬಗ್ಗೆ ಸಂಬಂಧಿಸಿದವರ ಗಮನ ಹರಿಸಿಲ್ಲದ ಕಾರಣ ಮೇವಿನ ನಡುವೆ ನೀರು ಸೇರಿ ಅಲ್ಲಿಯೇ ಕೊಳೆತಿದೆ. ಇದರಿಂದಾಗಿ ಮೇವು ತೆಗೆಯುವಾಗ ದುರ್ವಾಸನೆ ಬೀರುತ್ತಿದ್ದು, ಜಾನುವಾರುಗಳು ತಿನ್ನದಂತಹ ಸ್ಥಿತಿ ಎದುರಾಗಿದೆ.
ಮೇವಿಗೆ ಸಮಸ್ಯೆ ಇರುವ ಕಾರಣದಿಂದ ರೈತರು ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ಸರ್ಕಾರ ಈ ಜಾನುವಾರುಗಳಿಗಾಗಿ ಲಕ್ಷಾಂತರ ರುಪಾಯಿ ವ್ಯಯಿಸಿ ಮೇವನ್ನು ಖರೀದಿಸಿ ಇಲ್ಲಿ ಸಂಗ್ರಹಿಸಿಟ್ಟಿದೆ. ಆದರೆ ಈಗ ಮಳೆಗೆ ಅದು ಕೊಳೆತು ದುರ್ವಾಸನೆ ಬೀರುತ್ತಿರುವ ಕಾರಣ ಜಾನುವಾರುಗಳು ತಿನ್ನದಂತಾಗಿದ್ದು, ಭಾರೀ ನಷ್ಟ ಉಂಟಾಗಿದೆ.
ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು ಮೇವು ಹಾಳಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಮಳೆ ನೀರಿನಿಂದ ಕೊಳೆತು ದುರ್ವಾಸನೆ ಬೀರುತ್ತಿರುವ ಮೇವನ್ನು ಜಾನುವಾರುಗಳಿಗೆ ಹಾಕಿದರೆ ಆರೋಗ್ಯ ಹದಗೆಡಬಹುದು ಎಂಬ ಆತಂಕ ಎದುರಾಗಿದೆ. ಆದ್ದರಿಂದ ಈ ಮೇವನ್ನು ತೆರವುಗೊಳಿಸಿ ಹೊಸ ಮೇವನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಪುಡಿ ಮೇವು ವಿತರಣೆ
ಇದರ ನಡುವೆ ಹನೂರು ವ್ಯಾಪ್ತಿಯ ಹಲವು ಗ್ರಾಮಗಳಿಗೆ ಪಶುವೈದ್ಯಕೀಯ ಇಲಾಖೆ ವತಿಯಿಂದ ಪುಡಿ ಮೇವನ್ನು ವಿತರಿಸಲಾಗುತ್ತಿದೆ. ಈಗಾಗಲೇ ಕಳೆದ ಆರು ದಿನಗಳಿಂದ ಮೇವು ವಿತರಣೆ ಮಾಡಲಾಗುತ್ತಿದ್ದು, ಸುಮಾರು 48 ಟನ್ ಪುಡಿ ಮೇವುಗಳನ್ನು ಮೇವು ನಿಧಿಯಿಂದ ವಿತರಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿದ ಪಶು ವೈದ್ಯರಾದ ಡಾ.ಸಿದ್ದರಾಜು ಅವರು ಮುಂದಿನ ದಿನಗಳಲ್ಲಿ ಮಳೆ ಬಂದು ಮೇವು ಬರುವವರೆಗೂ ನಮ್ಮ ಇಲಾಖೆವತಿಯಿಂದ ಪುಡಿ ಮೇವನ್ನು ವಿತರಿಸಲಾಗುವುದು ತಿಳಿಸಿದ್ದಾರೆ.