ರೈಲ್ವೇ ಕಂಬಿಗಳನನ್ನು ದಾಟಲು ಹೋಗಿ ಆಪತ್ತಿಗೆ ಸಿಲುಕಿದ ಆನೆ
ಚಾಮರಾಜನಗರ ಜಿಲ್ಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಆನೆಯೊಂದು ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ರೈಲ್ವೆ ಕಂಬಿಯಲ್ಲಿ ಸಿಲುಕಿಕೊಂಡು ನರಳಾಡುತ್ತಿರುವ ಫೊಟೋ ಪ್ರಾಣಿ ಪ್ರಿಯರನ್ನು ನಿದ್ದೆಗೆಡಿಸಿದೆ.
ಬಂಡೀಪುರ, ಏಪ್ರಿಲ್ 21 : ಮಾನವ- ಪ್ರಾಣಿ ಸಂಘರ್ಷ ತಡೆಯುವ ಉದ್ದೇಶದಿಂದ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯದಲ್ಲಿ ನಿರ್ಮಿಸಿರುವ ರೈಲ್ವೆ ಕಂಬಿ ತಡೆಗೋಡೆಯನ್ನು ಹಾಕಲಾಗಿದೆ. ಇದನ್ನು ಕಾಡಾನೆಯೊಂದು ದಾಟಿ ಸಲೀಸಾಗಿ ಹೊರ ಬರುತ್ತಿರುವ ಛಾಯಾಚಿತ್ರ ಇತ್ತಿಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಸದ್ಯ ಹೊಸದೊಂದು ಫೋಟೋ ಮತ್ತೆ ಸದ್ದು ಮಾಡುತ್ತಿದೆ.
ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ಕಳ್ಳರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದು ನಾಣ್ಣುಡಿ. ಆದರೆ ಇಲ್ಲೊಂದು ಆನೆ ಅರಣ್ಯ ಇಲಾಖೆ ಆನೆಗಳು ನಾಡಿಗೆ ಬಾರದಂತೆ ಕಾಡಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಿದರೆ ಅದರಲ್ಲಿಯೇ ನುಸುಳಿ ಬರಲು ಯತ್ನಿಸಿ ಸಿಕ್ಕಿ ಹಾಕಿಕೊಂಡಿದೆ. ಇದರ ಚಿತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪ್ರಾಣಿ ಪ್ರಿಯರನ್ನು ನಿದ್ದೆಗೆಡಿಸಿದೆ.[ಆರಡಿ ಎತ್ತರದ ಬ್ಯಾರಿಕೇಡ್ ದಾಟಿದ ಜಂಪಿಂಗ್ ಸ್ಟಾರ್ ಜಂಬೋ!]
ಈ ಆನೆ ಚಾಮರಾಜನಗರ ಜಿಲ್ಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡಿನಿಂದ ಆಚೆ ಬರಲು ಪ್ರಯತ್ನಿಸಿ ರೈಲ್ವೆ ಕಂಬಿಯಲ್ಲಿ ಸಿಲುಕಿಕೊಂಡು ನರಳಾಡುತ್ತಿತ್ತು.
ಇತ್ತ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಇದನ್ನು ಗಮನಿಸಿ ಆನೆಯನ್ನು ರಕ್ಷಿಸಿದ್ದಾರೆ. ಇತ್ತ ಆನೆಗಳು ನಾಡಿಗೆ ಬಾರದಂತೆ ಸೋಲಾರ್ ಬೇಲಿ, ಕಂದಕ, ರೈಲ್ವೆ ಕಂಬಿಗಳ ಅಳವಡಿಸಲಾಗಿದ್ದರೂ, ಆನೆಗಳು ಮಾತ್ರ ಇದ್ಯಾವುದನ್ನು ಲೆಕ್ಕಿಸದೆ ತಮ್ಮದೆ ಮತ್ತೊಂದು ದಾರಿಯನ್ನು ಹುಡುಕುತ್ತಿರುವುದು ವಿಪರ್ಯಾಸದಂತಿದೆ.[ವಿಧಿ ವಿಜ್ಞಾನ ಪರೀಕ್ಷೆಗೆ 'ಪ್ರಿನ್ಸ್' ಹುಲಿಯ ಅವಶೇಷ]
ಈ ಕುರಿತು 'ಒನ್ ಇಂಡಿಯಾ' ಎಪಿಸಿಸಿಎಫ್ ರಂಗರಾವ್ರನ್ನು ಮಾತನಾಡಿಸಿದಾಗ "ಆನೆ ಕೊಂಚ ಎತ್ತರವಾಗಿದ್ದ ಕಾರಣಕ್ಕೆ ಆನೆಯು ತಡೆಗೋಡೆಯನ್ನು ದಾಟಿದೆಯಷ್ಟೇ. ಈ ಒಂದು ಪ್ರಕರಣದಿಂದ ತಡೆಗೋಡೆಯನ್ನು ನಿಷ್ಪ್ರಯೋಜಕ ಎಂದು ಹೇಳಲಾಗುವುದಿಲ್ಲ. ಇತ್ತ ಗಾಯಗೊಂಡ ಆನೆಯನ್ನು ರಕ್ಷಿಸಲಾಗಿದ್ದು, ಈಗ ಅದು ಸುರಕ್ಷಿತವಾಗಿದೆ," ಎಂದು ಹೇಳಿದ್ದಾರೆ.
"ಬಂಡೀಪುರ ಅಭಯಾರಣ್ಯದಲ್ಲಿ 22 ಕಿ.ಮೀ ಹಾಗೂ ನಾಗರಹೊಳೆ ಅಭಯಾರಣ್ಯದಲ್ಲಿ 14 ಕಿ.ಮೀ ಸೇರಿದಂತೆ ಒಟ್ಟು 36 ಕಿ.ಮೀ ರೈಲ್ವೆ ತಡೆಗೋಡೆ ನಿರ್ಮಿಸಲಾಗಿದೆ. ಶೇ 90ರಷ್ಟು ಈ ಯೋಜನೆ ಪರಿಣಾಮಕಾರಿ ಎನ್ನಬಹುದು. ಆನೆ ತಡೆ ಕಂದಕ ಹಾಗೂ ಸೋಲಾರ್ ಬೇಲಿಗಿಂತಲೂ ಆನೆಗಳು ನಾಡಿಗೆ ಪ್ರವೇಸಿದಂತೆ ತಡೆಗಟ್ಟಲು ಇವು ಸಹಾಯಕಾರಿಯಾಗಿವೆ," ಎಂದು ಅವರು ಮಾಹಿತಿ ನೀಡಿದ್ದಾರೆ.
2014ರಲ್ಲಿ ₹ 200 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ತಡೆಗೋಡೆಗೆ ಯಾವುದೇ ನಿರ್ವಹಣೆ ಇರುವುದಿಲ್ಲ. ಕನಿಷ್ಠ 30 ವರ್ಷ ಬಾಳಿಕೆ ಬರುತ್ತದೆ ಎಂದು ರಂಗರಾವ್ ವಿವರಣೆ ನೀಡಿದ್ದಾರೆ.