ಬಂಡೀಪುರದಲ್ಲಿ ಅರಣ್ಯಾಧಿಕಾರಿಗಳಿಗೆ ಜಿಂಕೆ ಮಾಂಸ, ಮದ್ಯ ಪೂರೈಸಿದರೆ?
ಚಾಮರಾಜನಗರ, ಸೆಪ್ಟೆಂಬರ್ 3: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳ ಕಾರ್ಯಾಗಾರ ಉನ್ನತ ಅರಣ್ಯಾಧಿಕಾರಿಗಳಿಗೆ ಗಸ್ತು ನಿರ್ವಹಣೆ ಕುರಿತ ವಿಚಾರಕ್ಕಿಂತ ಮೋಜು- ಮಸ್ತಿಗೆ ಹೆಚ್ಚು ಒತ್ತು ನೀಡಲಾಯಿತೆ ಎಂಬ ಸಂಶಯ ಹುಟ್ಟುಹಾಕಿದೆ. ಇದಕ್ಕೆ ವಸತಿ ಗೃಹಗಳ ಬಳಿ ಸಿಕ್ಕಿರುವ ಮದ್ಯದ ಪ್ಯಾಕೆಟ್, ಬಾಟಲಿ ಲೋಟಗಳು ಸಾಕ್ಷಿಯಾಗಿವೆ.
ಕಸದ ರಾಶಿಯಲ್ಲಿ ಮದ್ಯದ ಪ್ಯಾಕೆಟ್ ಗಳೊಂದಿಗೆ ಜಿಂಕೆಯ ಕೊಂಬು ಕೂಡ ಪತ್ತೆಯಾಗಿದ್ದು, ಜಿಂಕೆಯ ಮಾಂಸದ ಊಟ ಮಾಡಲಾಗಿತ್ತೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಒಟ್ಟಾರೆ ಕಾರ್ಯಾಗಾರದ ನೆಪದಲ್ಲಿ ಮೋಜು- ಮಸ್ತಿ ನಡೆದಿರುವ ಸಂಶಯ ಇನ್ನೂ ಬಲವಾಗುತ್ತದೆ.[ಬಂಡೀಪುರದಲ್ಲಿ ಹುಲಿ ಹತ್ಯೆ: ಒಬ್ಬನ ಬಂಧನ]
ವಸತಿಗೃಹಗಳಲ್ಲಿ ವಾಸ್ತವ್ಯ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಜಂಗಲ್ ಲಾಡ್ಜಸ್ ನಲ್ಲಿ ಐದು ದಿನಗಳಿಂದ ಉನ್ನತ ಅರಣ್ಯಾಧಿಕಾರಿಗಳಿಗೆ ಗಸ್ತು ನಿರ್ವಹಣೆ ಬಗ್ಗೆ ಎರಡನೇ ಹಂತದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಐಎಫ್ಎಸ್ ಅಧಿಕಾರಿಗಳಿಗೆ ಬಂಡೀಪುರದ ಜಂಗಲ್ ಲಾಡ್ಜಸ್ ಮತ್ತು ಸ್ವಾಗತ ಕಚೇರಿ ಹಿಂಭಾಗದ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕದ ಅಧಿಕಾರಿಗಳು ಜಂಗಲ್ ಲಾಡ್ಜಸ್ ನಲ್ಲಿ ವಾಸ್ತವ್ಯ ಹೂಡಿದ್ದರೆ, ಕೇರಳ ಮತ್ತು ತಮಿಳುನಾಡಿನ ಅರಣ್ಯಾಧಿಕಾರಿಗಳು ಚೀತಾಲ್, ಗಜೇಂದ್ರ, ಮಯೂರ ಮುಂತಾದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದರು.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]
ಮದ್ಯ ಪೂರೈಕೆ: ಐದು ದಿನಗಳಿಂದ ನಡೆಯುತ್ತಿದ್ದ ತರಬೇತಿ ಕಾರ್ಯಾಗಾರವು ಶುಕ್ರವಾರ ಮುಕ್ತಾಯವಾಗುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ 60ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳಿಗೆ ಮದ್ಯ ಪೂರೈಕೆ ಮಾಡಲಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೊಂಡು ತಂದಿರುವ ಮ್ಯಾಕ್ ಡೊವೆಲ್, ಯುಬಿ ಕಂಪೆನಿಯ ಮದ್ಯದ ಕಂಪೆನಿಯ ಲೇಬಲ್ ಉಳ್ಳ ರಟ್ಟಿನ ಡಬ್ಬಗಳು, ಬಿಯರ್ ಖಾಲಿ ಬಾಟಲಿಗಳು, ಮದ್ಯದ ಖಾಲಿ ಬಾಟಲಿಗಳು, ತಂಪು ಪಾನೀಯದ ಖಾಲಿ ಬಾಟಲಿಗಳು ಪತ್ತೆಯಾಗಿವೆ.[ಬಂಡೀಪುರ ಬಳಿಯ ಟಸ್ಕರ್ ಟ್ರೇಲ್ಸ್ ಜಂಗಲ್ ರೆಸಾರ್ಟ್]
ಜತೆಗೆ ಕುಡಿಯುವ ನೀರಿನ ಖಾಲಿ ಬಾಟಲ್ ಗಳು, ಜಿಂಕೆ ಕೊಂಬುಗಳು ಮತ್ತು ಅಡುಗೆ ತಯಾರಿಸುವ ಸಂದರ್ಭ ತಲೆಗೆ ಬಳಸುವ ನ್ಯಾಪ್ಕಿನ್ ಗಳು ಚೀತಾಲ್ ವಸತಿಗೃಹದ ಅಡುಗೆ ಕೋಣೆಯ ಹಿಂಭಾಗದಲ್ಲಿ ಪತ್ತೆಯಾಗಿವೆ. ಹೀಗಾಗಿ ಗುರುವಾರ ರಾತ್ರಿ ಪಾರ್ಟಿ ನಡೆದ ನಂತರ ಜಿಂಕೆಯ ಮಾಂಸದೂಟ ಮಾಡಿ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.
ಸ್ಥಳೀಯ ಅಧಿಕಾರಿ: ಕಾಂತರಾಜು ಎಂಬುವರು ಇಲ್ಲಿ ಹುಲಿ ಯೋಜನೆ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಮೋಜು- ಮಸ್ತಿ ನಡೆಯುತ್ತಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿ.ಬಿ.ಮಲ್ಲೇಶ್ ಸಿಎಫ್ಓ ಆದ ನಂತರ ಇಂತಹ ಅಕ್ರಮ ಚಟುವಟಿಕೆಗಳಿಗೆ ಕೆಲ ಮಟ್ಟಿಗೆ ಬ್ರೇಕ್ ಹಾಕಿದ್ದರು. ಆದರೆ ಸ್ಥಳೀಯರೇ ಆದ ಅರಣ್ಯಾಧಿಕಾರಿಯೊಬ್ಬರು ಇಲ್ಲಿ ವಲಯಾರಣ್ಯಾಧಿಕಾರಿಯಾದ ನಂತರ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಂಡೀಪುರ ಮತ್ತು ಜಿ.ಎಸ್. ಬೆಟ್ಟ ವಲಯದ ವಲಯಾರಣ್ಯಾಧಿಕಾರಿ ಗೋವಿಂದರಾಜು, ಮೂರು ದಿನಗಳಿಂದ ಸ್ವಾಗತ ಕಚೇರಿ ಹಿಂಭಾಗ ಐಎಫ್ಎಸ್ ಅರಣ್ಯಾಧಿಕಾರಿಗಳು ವಾಸ್ತವ್ಯ ಹೂಡಿದ್ದು ನಿಜ. ಅವರ ದೇಖರೇಖಿಯನ್ನು ನಾನು ಗಮನಿಸುತ್ತಿದ್ದೆ. ಚೀತಾಲ್ ವಸತಿಗೃಹದ ಹಿಂಭಾಗ ಬಿಯರ್ ಬಾಟಲಿ, ಜಿಂಕೆ ಕೊಂಬು ಇರುವುದು ನನ್ನ ಗಮನಕ್ಕೆ ಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ.[ಎಚ್ಡಿ ಕೋಟೆಯಲ್ಲಿ ಸತ್ತ ಹುಲಿಮರಿಗಳ ಉಗುರು ಮಾಯ?]
ಇನ್ನು ಎಪಿಸಿಸಿಎಫ್ ರಂಗರಾವ್ ಅವರು ಕೂಡ ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಇದರ ಹಿಂದಿನ ಸತ್ಯಾಸತ್ಯತೆಯನ್ನು ಬಯಲುಗೊಳಿಸಬೇಕಿದೆ. ಅರಣ್ಯ ರಕ್ಷಕರೇ ಭಕ್ಷಕರಾಗುವ ಮುನ್ನ ಇಂತಹ ಚಟುವಟಿಕೆಗಳಿಗೆ ತಡೆಯೊಡ್ಡಬೇಕಿದೆ.