ಕ್ರೇನ್ ಡಿಕ್ಕಿಯಾಗಿ ರಸ್ತೆಯಲ್ಲೇ ಪ್ರಾಣ ಬಿಟ್ಟ ಸೈಕಲ್ ಸವಾರ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ ಕ್ರೇನ್ ಡಿಕ್ಕಿ ಹೊಡೆದು, ತಲೆಗೆ ಗಂಭೀರ ಗಾಯವಾಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿಯಿಂದ ಬಂದ ಕ್ರೇನ್ ಡಿಕ್ಕಿಯಾಗಿದ್ದು, ಪೊಲೀಸರು ಕ್ರೇನ್ ವಶಕ್ಕೆ ಪಡೆದಿದ್ದಾರೆ
ಕೊಳ್ಳೇಗಾಲ, ಫೆಬ್ರವರಿ 24: ಸೈಕಲ್ ಗೆ ಕ್ರೇನ್ ಡಿಕ್ಕಿ ಹೊಡೆದು, ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ಳೇಗಾಲದ ಸಂತೆಬೀದಿ ಬಳಿಯ ಮೈಸೂರು ಮುಖ್ಯ ರಸ್ತೆಯಲ್ಲಿ ಗುರುವಾರ ಸಂಭವಿಸಿದೆ.
ಬೆಂಡರಹಳ್ಳಿಯ ನಿವಾಸಿ, ಕೂಲಿ ಕಾರ್ಮಿಕ ನಾಗೇಶ್ (36) ಮೃತ ದುರ್ದೈವಿ. ಈತ ಎಂದಿನಂತೆ ಪಟ್ಟಣಕ್ಕೆ ಬಂದು, ಕೆಲಸ ಮುಗಿಸಿಕೊಂಡು ಸಂತೆಬೀದಿ ಬಳಿಯ ಮೈಸೂರು ಮುಖ್ಯರಸ್ತೆಯಲ್ಲಿ ಸಂಜೆ ಮನೆ ಕಡೆಗೆ ಸೈಕಲ್ ನಲ್ಲಿ ತೆರಳುತ್ತಿದ್ದ.[ಬ್ಲ್ಯಾಕ್ ಮೇಲ್ ಗೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ, ಆರೋಪಿ ನಾಪತ್ತೆ]
ಇದೇ ವೇಳೆಗೆ ಹಿಂಬದಿಯಿಂದ ಬಂದ ಕ್ರೇನ್ ವೊಂದು ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತ ನೆಲಕ್ಕುರುಳಿದ್ದಾನೆ. ಈ ವೇಳೆ ಕ್ರೇನ್ ನ ಚಕ್ರ ಆತನ ಮೇಲೆ ಹರಿದಿದೆ. ಇದರಿಂದಾಗಿ ಸೈಕಲ್ ಸವಾರ ನಾಗೇಶ್ ಗೆ ಗಾಯಗಳಾಗಿದ್ದಲ್ಲದೆ, ಸೊಂಟ ಹಾಗೂ ಕಾಲುಗಳು ಜಖಂಗೊಂಡಿವೆ.
ತಲೆಗೂ ಗಂಭೀರ ಪೆಟ್ಟಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಕ್ಕೆ ಸ್ಥಳೀಯರು ಮುಂದಾದರಾದರೂ ಅಷ್ಟರಲ್ಲೇ ಗಂಭೀರ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ. ಕ್ರೇನ್ ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಪೆÇಲೀಸರಿಗೆ ತಿಳಿಸಿದ್ದಾರೆ.[ದುರಾಸೆಯಿಂದ ದರೋಡೆ ಮಾಡಿದ್ದ ಮೈಸೂರು ಹುಡುಗರು ಈಗ ಎಲ್ಲಿದಾರೆ?]
ಸ್ಥಳಕ್ಕೆ ಬಂದ ಸರ್ಕಲ್ ಇನ್ ಸ್ಪೆಕ್ಟರ್ ವೈ.ಅಮರ್ ನಾರಾಯಣ ಪ್ರಕರಣ ದಾಖಲಿಸಿಕೊಂಡು, ಅಪಘಾತಕ್ಕೆ ಕಾರಣವಾದ ಕ್ರೇನ್ ಅನ್ನು ವಶಕ್ಕೆ ಪಡೆದಿದ್ದಾರೆ. ಸೈಕಲ್ ಸವಾರನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.