ಬಂಡೀಪುರ ಅರಣ್ಯ ವ್ಯಾಪ್ತಿಯ ರಸ್ತೆ ನಿರ್ಮಾಣದಲ್ಲಿ ಅಕ್ರಮ, ಎಸಿಬಿಗೆ ದೂರು
ಬಂಡೀಪುರ ಅರಣ್ಯ ವ್ಯಾಪ್ತಿಗೆ ಸೇರಿದ ಕಾಂಡಂಚಿನ ಗ್ರಾಮಗಳಲ್ಲಿ ನಡೆಸಿದ ರಸ್ತೆ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೆ.ಎಸ್.ಕೃಷ್ಣ ಎಂಬುವರು ಚಾಮರಾಜನಗರ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ.
ಚಾಮರಾಜನಗರ, ಮೇ 12: ಇತ್ತೀಚೆಗೆ ನಬಾರ್ಡ್ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಗೆ ಸೇರಿದ ಕಾಂಡಂಚಿನ ಗ್ರಾಮವಾದ ಮಗುವಿನಹಳ್ಳಿ ಹಾಗೂ ಕಲ್ಲಿಗೌಡನಹಳ್ಳಿ ರಸ್ತೆ ನಿರ್ಮಿಸಲಾಗಿತ್ತು. ಈ ಸಂಪರ್ಕ ರಸ್ತೆ ಕಳಪೆ ಮಟ್ಟದಿಂದ ಕೂಡಿದ್ದು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳಿ ಕೇಳಿ ಬಂದಿವೆ.
ಈ ಕುರಿತು ಮಗುವಿನಹಳ್ಳಿ ಗ್ರಾಮದ ಕೆ.ಎಸ್.ಕೃಷ್ಣ ಎಂಬುವರು ಚಾಮರಾಜನಗರ ಎಸಿಬಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೂಲಕ ಹಾದು ಹೋಗುವ ಊಟಿ ರಸ್ತೆಯಿಂದ ಕಲ್ಲಿಗೌಡನಹಳ್ಳಿ ಗ್ರಾಮಕ್ಕೆ ಸೇರುವ 1.49 ಕಿ.ಮೀ. ಸಂಪರ್ಕ ರಸ್ತೆಯನ್ನು ಅಂದಾಜು ಮೊತ್ತ 50 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹಾಗೂ ಮಗುವಿನಹಳ್ಳಿ ಗ್ರಾಮದಿಂದ ಬಂಡೀಪುರ ಸೇರುವ ರಸ್ತೆಯನ್ನು 1.85 ಕಿ.ಮೀ. ರಸ್ತೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಈ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಭಾರೀ ಅವ್ಯವಹಾರ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಎರಡು ಕಾಮಗಾರಿಗಳನ್ನು ದೇವರಹಳ್ಳಿ ಎಸ್.ಪ್ರಭು ಎಂಬುವರಿಗೆ ಒಂದು ಕೋಟಿ ರೂ.ಗೆ ಗುತ್ತಿಗೆ ನೀಡಲಾಗಿದೆ. ಅವರು ಸಮರ್ಪಕವಾಗಿ ಕಾಮಗಾರಿ ನಡೆಸಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಅದರ ಸಮಗ್ರ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾಲೂಕಿನ ಮಗುವಿನಹಳ್ಳಿ ರಸ್ತೆಯಿಂದ ಕಲ್ಲಿಗೌಡನಹಳ್ಳಿ ರಸ್ತೆಯನ್ನು ದುರಸ್ತಿ ಮಾಡದೇ ಅಕ್ರಮವಾಗಿ ಬಿಲ್ ಮಾಡುವ ಮೂಲಕ ರಸ್ತೆ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದಾರೆ. ಈ ಭಾಗದ ರಸ್ತೆ ಸಂಪರ್ಕ ಸೇತುವೆಗಳು ಕಳಪೆ ನಿರ್ಮಾಣದಿಂದ ಕೂಡಿದ್ದು ಡಾಂಬರ್ ಕಳಪೆಯದ್ದಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇನ್ನು ಅಂದಾಜು ಪಟ್ಟಿಯಲ್ಲಿರುವಂತೆ ಕಾಮಗಾರಿ ನಡೆದಿಲ್ಲ. ಮಗುವಿನಹಳ್ಳಿ, ಕಲ್ಲಿಗೌಡನಹಳ್ಳಿ ರಸ್ತೆ ಈ ಮೊದಲೇ ಉತ್ತಮ ರಸ್ತೆಯಾಗಿತ್ತು. ಮಗುವಿನಹಳ್ಳಿಯಿಂದ ಬಂಡೀಪುರ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಎರಡು ಬದಿಯ ರಸ್ತೆಗೂ ಗ್ರಾವೆಲ್ ಹಾಕಿ ಆನೆ ಕಂದಕ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ್ದು, ಇದರಲ್ಲಿ ಭಾರೀ ಅವ್ಯವಹಾರ ನಡೆದಿರುವುದರಿಂದ ತನಿಖೆ ನಡೆಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.