ಗುಂಡ್ಲುಪೇಟೆ: ಮುಗಿಲು ಮುಟ್ಟಿದ ಕೈ ಕಾರ್ಯಕರ್ತರ ವಿಜಯೋತ್ಸವ
ಗುಂಡ್ಲುಪೇಟೆ, ಏಪ್ರಿಲ್ 14 : ತೀವ್ರ ಕುತೂಹಲ ಮೂಡಿಸಿದ್ದ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ವಿಜಯ ಸಾಧಿಸುತ್ತಿದ್ದಂತೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಾದ್ಯಂತ ವಿಜಯೋತ್ಸವ ಆಚರಿಸಿದರು.
ಮತ ಎಣಿಕೆಯ ಆರಂಭದಿಂದಲ್ಲಿಯೇ ಮುನ್ನಡೆ ಕಾಯ್ದುಕೊಂಡು ಬಂದ ಗೀತಾಮಹದೇವಪ್ರಸಾದ್ ಗೆಲುವು ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿ ಒಬ್ಬರಿಗೊಬ್ಬರು ಗುಲಾಲ್ ಎರಚಿಕೊಂಡು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.[ಗುಂಡ್ಲುಪೇಟೆ ಉಪಚುನಾವಣೆ: ಡಿಕೆಶಿ ರಾಜಕೀಯ ತಂತ್ರಗಳು ಸಕ್ಸಸ್]
ಮಹದೇವಪ್ರಸಾದ್ ಅವರ ಅಕಾಲಿಕ ಮರಣದಿಂದಾಗಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.
ಲೆಕ್ಕಕ್ಕಿಲ್ಲದ ನೀತಿ ಸಂಹಿತೆ
ಚುನಾವಣಾ ಮತ ಎಣಿಕೆ ಮುಕ್ತಾಯವಾಗುವರೆಗೆ ತಾಲೂಕಿನಲ್ಲಿ ಯಾವುದೇ ಮೆರವಣಿಗೆ, ಸಂಭ್ರಮ ಆಚರಿಸದಂತೆ 144 ಸೆಕ್ಷನ್ ಜಾರಿಗೊಳಿಸಿತ್ತು. ಆದರೆ, ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ನೀತಿ ನಿಯಮಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದರು.
ಗೀತಾಮಹದೇವಪ್ರಸಾದ್ ಗೆ ಜೈಕಾರ
ಹಳ್ಳಿಗಳಿಂದ ಬಂತಹ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಗೆ ಜಯವಾಗಲಿ, ಮಹದೇವಪ್ರಸಾದ್ ಗೆ ಜಯವಾಗಲಿ, ಸಿಎಂ ಸಿದ್ದರಾಮಯ್ಯಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ನಂತರ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ಪೋಲೀಸರ ನಡುವೆ ವಾಗ್ವಾದ
ಪೋಲೀಸರ ನಡುವೆ ವಾಗ್ವಾದ: ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಮತ ಎಣಿಕೆ ಬಗ್ಗೆ ವಿವರ ಪಡೆಯಲು ಬಂದಾಗ ಅವರೊಡನೆ ಕಬ್ಬಳ್ಳಿ ಜಿ.ಪಂ.ಸದಸ್ಯ ಮಹೇಶ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮಹೇಶ್ರನ್ನು ತಡೆದರು. ಇದರಿಂದ ಕುಪಿತಗೊಂಡ ಮಹೇಶ್ ಪೊಲೀಸರದ್ದು ಅತೀ ಆಯ್ತು ಬನ್ನಿ ಮೇಡಂ ಒಳಗೆ ಹೋಗೋದೆ ಬೇಡ ಎಂದರು.
ಕಾಂಗ್ರೆಸ್ 12077 ಮತಗಳಿಂದ ಜಯ
ಗುರುವಾರ ಹೊರ ಬಿದ್ದ ಗುಂಡ್ಲುಪೇಟೆ ಉಪಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಗೀತಾಮಹದೇವಪ್ರಸಾದ್ ಅವರು ಬಿಜೆಪಿಯ ಸಿ ಎಸ್ ನಿರಂಜನ್ ಕುಮಾರ್ ಅವರನ್ನು 12077 ಅಂತರದ ಮತಳಿಂದ ಮಣಿಸಿದರು.