ಚಾಮರಾಜನಗರ: ಶಾಲೆ ಸಮವಸ್ತ್ರಕ್ಕೆ ನೀಡಿದ ಹಣ ಗುಳುಂ ಆಯ್ತಾ?
ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲವೊಂದು ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುವುದಕ್ಕೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.
ಚಾಮರಾಜನಗರ, ಫೆಬ್ರವರಿ 5: ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕೆಲವೊಂದು ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುವುದಕ್ಕೆ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯೇ ಸಾಕ್ಷಿ. ಇಲ್ಲಿ ಶಾಲೆ ಆರಂಭಗೊಂಡು ಒಂಬತ್ತು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ತಲುಪಿಲ್ಲ.
ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಹಲವು ಭಾಗ್ಯಗಳನ್ನು ಘೋಷಿಸಿ ಸುಮ್ಮನಾಗಿದೆ. ಆದರೆ ಅದು ಸಮರ್ಪಕವಾಗಿ ತಲುಪುತ್ತಿದೆಯಾ ಎಂಬುದನ್ನು ಗಮನಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಹಸಗೂಲಿ ಶಾಲಾ ಮಕ್ಕಳು ಸಮವಸ್ತ್ರದಿಂದ ವಂಚಿತರಾಗಿದ್ದಾರೆ. [ಕನಕಗಿರಿಯ ಬಾಹುಬಲಿಗೆ ಮಹಾಮಸ್ತಾಭಿಷೇಕ]
ಈ ಶಾಲೆಯಲ್ಲಿ 1ರಿಂದ 7 ನೇ ತರಗತಿಯಲ್ಲಿ 142 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದ ಉಚಿತವಾಗಿ ನೀಡುವ ಸಮವಸ್ತ್ರ ತಲುಪದ ಹಿನ್ನಲೆಯಲ್ಲಿ, ಮಕ್ಕಳು ಹಳೆ ಸಮವಸ್ತ್ರವನ್ನೇ ಹಾಕಿಕೊಂಡು ಶಾಲೆಗೆ ತೆರಳುತ್ತಿದ್ದಾರೆ. ಮಕ್ಕಳಿಗಾಗಲೀ, ಪೋಷಕರಿಗಾಗಲೀ ಸರ್ಕಾರ ನೀಡುವ ಸಮವಸ್ತ್ರದ ಬಗ್ಗೆ ಕೇಳುತ್ತಲೂ ಇಲ್ಲ. ಇನ್ನು ಶಾಲಾ ಅಭಿವೃದ್ಧಿಗಾಗಿ ರಚಿಸಿದ ಸಮಿತಿಯೂ ಮೌನಕ್ಕೆ ಶರಣಾಗಿದೆ.
ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಸರ್ಕಾರಿ ಶಾಲೆಯಿಂದ ಹೊರಗುಳಿಯ ಬಾರದೆಂದು ಸರ್ಕಾರಿ ಶಾಲೆಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ಸಮವಸ್ತ್ರ ಭಾಗ್ಯಗಳನ್ನು ನೀಡಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಪಣತೊಟ್ಟಿದ್ದು ಇದೆಲ್ಲವೂ ಸಮರ್ಪಕವಾಗಿ ತಲುಪುತ್ತಿದೆಯಾ ಎಂಬುದನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ನೋಡಿಕೊಳ್ಳಬೇಕು. ಆದರೆ ಹಸಗೂಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮೌನಕ್ಕೆ ಶರಣಾಗಿದ್ದಾರೆ. [ಅಂಬೇಡ್ಕರ್ ಕಮಾನಿಗೆ ಅಪಮಾನ: ಐವರ ಬಂಧನ]
ಸಮವಸ್ತ್ರಕ್ಕಾಗಿ ಸರ್ಕಾರ ಬಿಡುಗಡೆ ಮಾಡಿದ ಹಣ ದುರುಪಯೋಗವಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಮಂಜುಳ ಅವರು ಪ್ರತಿಕ್ರಿಯೆ ನೀಡಿ ಹಸಗೂಲಿ ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ನೀಡದಿರುವ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಇನ್ನು ಮುಂದೆಯಾದರೂ ಮಕ್ಕಳಿಗೆ ಸಮವಸ್ತ್ರ ಭಾಗ್ಯ ದೊರೆಯುತ್ತಾ ಕಾದು ನೋಡಬೇಕಾಗಿದೆ.